ಸಹಕಾರಿ ಕೃಷಿಗೆ ಸಬ್ಸಿಡಿ ನೀಡಲಾಗದು ಎಂಬ ಸರಕಾರದ ನಿಯಮ ಅಸಾಂವಿಧಾನಿಕ
ಬೆಂಗಳೂರು: ಸಂಘ ಸಂಸ್ಥೆಗಳನ್ನು ರಚನೆ ಮಾಡಿಕೊಂಡು ಏತ ನೀರಾವರಿ ವ್ಯವಸ್ಥೆಯ ಮೂಲಕ ಕೃಷಿ ಚಟುವಟಿಕೆ ಮಾಡುತ್ತಿರುವ ರೈತರಿಗೂ ಸಬ್ಸಿಡಿ (ಕೃಷಿ ವಿದ್ಯುತ್ ದರ ಪ್ರೋತ್ಸಾಹ ಧನ) ವಿಸ್ತರಿಸುವ ಕುರಿತು ಮುಂದಿನ ಆರು ತಿಂಗಳಲ್ಲಿ ಕಾನೂನು ತಿದ್ದುಪಡಿ ಮಾಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಜತೆಗೆ ಸಹಕಾರಿ ವ್ಯವಸಾಯ ಭಾರತೀಯ ಕೃಷಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು ಸಹಕಾರಿ ಕೃಷಿಗೆ ಅಡ್ಡಿ ತರುವಂತಹ ಸರಕಾರದ ನಿಯಮ ಅಸಂವಿಧಾನಿಕ ಎಂದು ನ್ಯಾಯಾಲಯ ತೀರ್ಪಿನಲ್ಲಿ ಪ್ರಕಟಿಸಿದೆ.
https://chat.whatsapp.com/EbVKVnWB6rlHT1mWtsgbch
ಸಹಕಾರಿ ಸಂಘಗಳ ಮೂಲಕ ಬಳಸುವ ವಿದ್ಯುತ್ ಸರಕಾರ ನಿಗದಿಪಡಿಸಿರುವ ವಿದ್ಯುತ್ ಬಳಕೆಯ ಮಿತಿಯನ್ನು ಮೀರುತ್ತದೆ ಎಂಬ ನೆಪವೊಡ್ಡಿ ಸಬ್ಸಿಡಿ ನಿರಾಕರಿಸುವ ರಾಜ್ಯ ಸರಕಾರದ 2008ರ ಸೆಪ್ಟೆಂಬರ್ 4ರ ಆದೇಶಕ್ಕೆ ರದ್ದು ಕೋರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶ್ರೀಮಂತ (ತಾತ್ಯಾ) ಪಾಟೀಲ್ ನೀರು ಬಳಕೆದಾರರ ಸಂಘ ಮತ್ತು ರವಳನಾಥ್ ಏತ ನೀರು ಬಳಕೆದಾರರ ಸಂಘ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ ಅವರಿದ್ದ ಪೀಠ, ನೋಂದಾಯಿತ ರೈತ ಸೊಸೈಟಿಗಳಿಗೆ ವಿದ್ಯುತ್ ದರ ಸಬ್ಸಿಡಿ ವಿಸ್ತರಣೆಗೊಳ್ಳುವಂತೆ ಸೂಕ್ತ ಮಾರ್ಗಸೂಚಿ ರಚಿಸಿ ಪ್ರಕಟಿಸಬೇಕು. ಈ ಮಾರ್ಗಸೂಚಿ ಸಮಾನತೆ, ಸಹಕಾರಿ ಕೃಷಿಗೆ ಉತ್ತೇಜನ ಮತ್ತು ಸುಸ್ಥಿರ ಕೃಷಿ ಅಭಿವೃದ್ಧಿಯ ವಿಶಾಲ ಉದ್ದೇಶದ ಮುಂದುವರಿದ ಭಾಗವಾಗಿ ರೂವುಗೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಸೂಚಿಸಿದೆ.
ರೈತರು ಕ್ಷಮತೆ ಮತ್ತು ಸುಸ್ಥಿರತೆ ಹೆಚ್ಚಿಸಲು ಸೊಸೈಟಿ ಮಾಡಿಕೊಂಡಿದ್ದು, ಅವರನ್ನು ದಂಡಿಸುವುದು ಸಮರ್ಥನೀಯವಲ್ಲ, ಪ್ರತಿಯೊಬ್ಬ ರೈತನ ತಲಾದಾಯ ವಿದ್ಯುತ್ ಬಳಕೆ, ಭೂಮಿ ಮಾಲಕತ್ವ ಅಥವಾ ಪ್ರತಿಯೊಬ್ಬ ಸದಸ್ಯರ ಸರಾಸರಿ ವಿದ್ಯುತ್ ಬಳಕೆಯನ್ನು ಆಧರಿಸಿ ನೋಂದಾಯಿತ ರೈತ ಸೊಸೈಟಿಗಳಿಗೆ ವಿದ್ಯುತ್ ಬಳಕೆಗೆ ಸಂಬಂಧಿಸಿದ ಪ್ರೋತ್ಸಾಹ ಧನ ನೀಡುವ ಸಂಬಂಧ ಹಾಲಿ ಇರುವ ನೀತಿಯನ್ನು ಪರಿಶೀಲಿಸಿ ಅದಕ್ಕೆ ತಿದ್ದುಪಡಿ ಮಾಡಬೇಕು ಎಂದು ಪೀಠ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com