ರೂ.1,979 ಕೋಟಿ ವ್ಯವಹಾರ: ರೂ.5.85 ಕೋಟಿ ನಿವ್ವಳ ಲಾಭ: ಶೇ.15 ಡಿವಿಡೆಂಡ್
ಬೆಳ್ತಂಗಡಿ: ಗ್ರಾಹಕಸ್ನೇಹಿ ಸೇವೆ, ಪಾರದರ್ಶಕ ಆಡಳಿತ ಹಾಗೂ ಸದಸ್ಯರ ವಿಶ್ವಾಸವನ್ನು ಬಂಡವಾಳವಾಗಿಸಿಕೊಂಡು ಮುನ್ನಡೆಯುತ್ತಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.979.12 ಕೋಟಿ ರೂ. ವ್ಯವಹಾರ ನಡೆಸಿದ್ದು, ರೂ.5.85 ಕೋಟಿ ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಭಗೀರಥ ಜಿ. ತಿಳಿಸಿದರು.
https://chat.whatsapp.com/FCEnlTkAKCC0MGPhXtX4i4
ಬೆಳ್ತಂಗಡಿಯ ಸಿವಿಸಿ ಹಾಲ್ನಲ್ಲಿ ನಡೆದ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಹಕಸ್ನೇಹಿ ವ್ಯವಹಾರವೇ ಯಶಸ್ಸಿನ ಮೂಲಮಂತ್ರ
ಗ್ರಾಹಕಸ್ನೇಹಿ ವ್ಯವಹಾರವೇ ಸಂಸ್ಥೆಯ ಯಶಸ್ಸಿನ ಮೂಲಮಂತ್ರವಾಗಿದೆ. ಸದಸ್ಯರು ಹಾಗೂ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವ ರೀತಿಯಲ್ಲಿ ವಿವಿಧ ಸೇವೆಗಳನ್ನು ಒದಗಿಸುತ್ತಿರುವುದರಿಂದ ಸಂಘವು ನಿರಂತರ ಪ್ರಗತಿಯತ್ತ ಸಾಗುತ್ತಿದೆ. ಸಂಘದ ಮೇಲಿನ ಸದಸ್ಯರು, ಠೇವಣಿದಾರರು ಹಾಗೂ ಗ್ರಾಹಕರು ಇಟ್ಟಿರುವ ವಿಶ್ವಾಸದಿಂದಲೇ ಈ ಸಾಧನೆ ಸಾಧ್ಯವಾಗಿದೆ. ವರದಿ ವರ್ಷದಲ್ಲಿ ಸಂಘವು ರೂ.326.34 ಕೋಟಿ ಠೇವಣಿ ಸಂಗ್ರಹಿಸಿದ್ದು, ರೂ.269.42 ಕೋಟಿ ಸಾಲ ವಿತರಿಸಿದೆ. ರೂ.351.24 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ರೂ.1,979.12 ಕೋಟಿ ವ್ಯವಹಾರ ನಡೆಸಿದೆ. ಬೆಳ್ತಂಗಡಿ ಭಾಗದ ಸಹಕಾರಿ ಕ್ಷೇತ್ರದಲ್ಲಿ ಅತಿ ಹೆಚ್ಚು ವ್ಯವಹಾರ ಹಾಗೂ ಲಾಭ ಗಳಿಸಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಸಂಘ ಪಾತ್ರವಾಗಿದೆ ಎಂದು ಭಗೀರಥ ಜಿ. ಹೇಳಿದರು. ಸಂಘವು ಆರ್ಥಿಕ ಪ್ರಗತಿಯ ಜತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೂ ನಿರಂತರವಾಗಿ ಸಹಕಾರ ನೀಡುತ್ತಿದ್ದು, ವರದಿ ವರ್ಷದಲ್ಲಿ ಸಾರ್ವಜನಿಕ ನಿಧಿಯಿಂದ ರೂ.17,95,277 ಮೊತ್ತವನ್ನು ವಿವಿಧ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ. ಸಂಘದ ಸಾಧನೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತ 10 ಬಾರಿ ಸಾಧನಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸಾಧಕರಿಗೆ ‘ಶ್ರೀ ಗುರುದೇವ ಗೌರವ’
ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾಧಿಕಾರದ ಆಯುಕ್ತ ಜಿ. ಜಗದೀಶ್ ಅವರಿಗೆ ‘ಶ್ರೀ ಗುರು ಮಾಣಿಕ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಯಕ್ಷಗಾನ ಕ್ಷೇತ್ರದ ಹಿರಿಯ ಹಾಸ್ಯ ಕಲಾವಿದ ಸುಂದರ ಬಂಗಾಡಿ, ಸ್ನೇಹದೀಪ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಂಸ್ಥಾಪಕಿ ತಬಸ್ಸುಮ್, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದಿಶಾ ಪೂಜಾರಿ ಹಾಗೂ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರಿಗೆ ‘ಶ್ರೀ ಗುರುದೇವ ಗೌರವ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.
ಕಷ್ಟಪಟ್ಟು ದುಡಿಮೆ, ಶಿಕ್ಷಣಕ್ಕೆ ಆದ್ಯತೆ: ಜಿ. ಜಗದೀಶ್
ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ‘ಸಾಧಿಸಬೇಕಾದರೆ ಕಷ್ಟಪಟ್ಟು ದುಡಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಣವೇ ವ್ಯಕ್ತಿಯ ಬದುಕಿಗೆ ಉತ್ತಮ ದಿಕ್ಕು ತೋರಿಸುವ ಶಕ್ತಿಯಾಗಿದೆ. ನಾವು ಯಾವುದೇ ಕೆಲಸವನ್ನು ಸಣ್ಣದು ಅಥವಾ ದೊಡ್ಡದು ಎಂದು ಪರಿಗಣಿಸದೆ ಮಾಡುವ ಕೆಲಸವನ್ನು ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ನಿರ್ವಹಿಸಬೇಕು. ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕೆಲಸ ಮಾಡಿದಾಗ ಅದರ ಫಲಿತಾಂಶ ಖಂಡಿತವಾಗಿ ದೊರೆಯುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಹೆದರದೆ ನಿರಂತರ ಪರಿಶ್ರಮದೊಂದಿಗೆ ಮುನ್ನಡೆಯಬೇಕು ಎಂದು ಬೆಂಗಳೂರು ಪ್ರಾಧಿಕಾರದ ಆಯುಕ್ತ ಜಿ.ಜಗದೀಶ್ ಹೇಳಿದರು.

ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ನಿರ್ದೇಶಕರಾದ ಸುಜಿತಾ ವಿ.ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ. ದಿವಾಕರ್, ಚಂದ್ರಶೇಖರ್, ಧರ್ಣಪ್ಪ ಪೂಜಾರಿ, ಗಂಗಾಧರ ಮಿತ್ತಮಾರ್, ಧರಣೇಂದ್ರ ಕುಮಾರ್ ಪಿ., ಆನಂದ ಪೂಜಾರಿ ಕೆ., ಡಾ.ರಾಜಾರಾಮ್ ಕೆ.ಬಿ., ಜಯವಿಕ್ರಮ್ ಪಿ., ಚಿದಾನಂದ ಪೂಜಾರಿ, ರಕ್ಷಿತ್ ಶಿವರಾಮ್, ಸೂರಜ್ ಕುಮಾರ್, ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ ಹಾಗೂ ಸಿಇಒ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು. ಸಂಘದ ಅಧಿಕಾರಿಗಳು, ವ್ಯವಸ್ಥಾಪಕರು, ಸಿಬ್ಬಂದಿ, ಗ್ರಾಹಕ ಮಿತ್ರರು ಹಾಗೂ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿದ್ದರು.

