ಬೆಂಗಳೂರು: ಸಹಕಾರ ಕ್ಷೇತ್ರದಲ್ಲಿ ಕಾನೂನು, ತೆರಿಗೆ ಹಾಗೂ ಸಾಲ ವಸೂಲಾತಿಗೆ ಸಂಬಂಧಿಸಿದ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುವ ಉದ್ದೇಶದಿಂದ ಸಹಕಾರ ಭಾರತಿ ಕರ್ನಾಟಕ ಹಾಗೂ ದಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICMAI), ಬೆಂಗಳೂರು ಜಂಟಿ ಆಶ್ರಯದಲ್ಲಿ ಆಗಸ್ಟ್ 19ರಂದು ಸಹಕಾರಿಗಳಿಗಾಗಿ ವಿಶೇಷ ‘ಅಭ್ಯಾಸ ವರ್ಗ’ ಆಯೋಜಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಮಲ್ಲೇಶ್ವರಂನಲ್ಲಿರುವ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಕಾರ್ಯಕ್ರಮ ನಡೆಯಲಿದೆ. ಸಹಕಾರ ಭಾರತಿ ಕರ್ನಾಟಕ ರಾಜ್ಯ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಪ್ರಭುದೇವ್ ಎಂ.ಆರ್. ಅಧ್ಯಕ್ಷತೆ ವಹಿಸಲಿದ್ದಾರೆ. ಐಸಿಎಂಎಐ ಕೇಂದ್ರ ಮಂಡಳಿ ಸದಸ್ಯ ಸಿಎಂಎ ನವನೀತ್ ಕುಮಾರ್ ಜೈನ್ ಹಾಗೂ ಐಸಿಎಂಎಐ ಬೆಂಗಳೂರು ಅಧ್ಯಕ್ಷ ಸಿಎಂಎ ಸಂತೋಷ್ ಕಲಬುರಗಿ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ.

ಅಭ್ಯಾಸ ವರ್ಗದಲ್ಲಿ ಸಹಕಾರಿ ಸಂಸ್ಥೆಗಳಿಗೆ ನೇರವಾಗಿ ಸಂಬಂಧಿಸಿದ ಮೂರು ಪ್ರಮುಖ ವಿಷಯಗಳ ಕುರಿತು ತಜ್ಞರಿಂದ ವಿಚಾರಗೋಷ್ಠಿಗಳು ನಡೆಯಲಿವೆ. ಮೊದಲ ಅವಧಿಯಲ್ಲಿ, ಸಹಕಾರ ಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಹಾಗೂ ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಅವರು ‘ಸಹಕಾರ ಭಾರತಿ ಪರಿಚಯ, ಉದ್ದೇಶ ಮತ್ತು ಅದರ ಸಾಧನೆಗಳು’ ವಿಷಯದ ಕುರಿತು ಮಾಹಿತಿ ನೀಡಲಿದ್ದಾರೆ. ಎರಡನೇ ಅವಧಿಯಲ್ಲಿ, ಕಾಸ್ಟ್ ಅಕೌಂಟೆಂಟ್ ಸಿಎಂಎ ರವೀಂದ್ರನಾಥ ಕೌಶಿಕ್ ಅವರು ‘ಸಹಕಾರಿ ಸಂಸ್ಥೆಗಳಲ್ಲಿ ಸಾಲ ವಸೂಲಾತಿ ಹಾಗೂ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ’ ವಿಷಯದ ಕುರಿತು ಸಮಗ್ರ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಸಹಕಾರಿ ಸಂಸ್ಥೆಗಳ ಸಾಲ ವಸೂಲಾತಿ ಪ್ರಕ್ರಿಯೆ ಹಾಗೂ ಅಗತ್ಯ ಕಾನೂನು ಕ್ರಮಗಳ ಕುರಿತು ಈ ಗೋಷ್ಠಿ ಗಮನ ಸೆಳೆಯಲಿದೆ. ಮೂರನೇ ಅವಧಿಯಲ್ಲಿ, ಕಾಸ್ಟ್ ಅಕೌಂಟೆಂಟ್ ಸಿಎಂಎ ಟಿ.ಕೆ. ಜಗನ್ನಾಥನ್ ಅವರು ‘ಸಹಕಾರಿ ಸಂಸ್ಥೆಗಳಿಗೆ ಅನ್ವಯಿಸುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಐಸಿಎಂಎಐ ಕೇಂದ್ರ ಮಂಡಳಿ ಸದಸ್ಯ ಸಿಎಂಎ ಸುರೇಶ್ ರಾಜಪ್ಪ ಗುಂಜಳ್ಳಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಕೃಷ್ಣ ರೆಡ್ಡಿ ಸಮಾರೋಪ ಭಾಷಣ ಮಾಡಲಿದ್ದಾರೆ. ಸಹಕಾರಿ ಸಂಸ್ಥೆಗಳ ಆಡಳಿತದಲ್ಲಿ ಎದುರಾಗುವ ಕಾನೂನು, ಸಾಲ ವಸೂಲಾತಿ ಮತ್ತು ಜಿಎಸ್ಟಿ ಸೇರಿದಂತೆ ತೆರಿಗೆ ಸಂಬಂಧಿತ ವಿಚಾರಗಳ ಕುರಿತು ತಜ್ಞರಿಂದ ನೇರ ಮಾಹಿತಿ ಪಡೆಯಲು ಈ ಅಭ್ಯಾಸ ವರ್ಗ ಸಹಕಾರ ಕ್ಷೇತ್ರದ ಪ್ರಮುಖರಿಗೆ ಉಪಯುಕ್ತವಾಗಲಿದೆ.









