ಎಸ್ಸಿಡಿಸಿಸಿ ಬ್ಯಾಂಕ್ನಲ್ಲಿ ವಿಶೇಷ ಸಹಕಾರ ಸಪ್ತಾಹ ಉದ್ಘಾಟಿಸಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅಭಿಪ್ರಾಯ
ಮಂಗಳೂರು: ವಾಣಿಜ್ಯ ಬ್ಯಾಂಕ್ಗಳಲ್ಲಿ ವ್ಯವಹಾರ ಮಾಡಲು ಹೋಗುವಾಗ ಸಾಮಾನ್ಯ ಜನರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಸಹಕಾರಿ ಬ್ಯಾಂಕ್ಗಳು ನಗುಮುಖದ ಸೇವೆಯೊಂದಿಗೆ ಬರಮಾಡಿಕೊಳ್ಳುತ್ತವೆ. ಸಹಕಾರ ಚಳುವಳಿಯಿಂದಲೇ ದೇಶದ ಅಭಿವೃದ್ಧಿ ಎಂಬ ತತ್ವದಲ್ಲಿ ನಂಬಿಕೆ ಇಟ್ಟವರು ನಾವು. ಸಹಕಾರಿ ಬ್ಯಾಂಕ್ಗಳು ಬಡವರಿಗೆ, ಜನಸಾಮಾನ್ಯರಿಗೆ ಮುಕ್ತ ಅವಕಾಶವನ್ನು ಕಲ್ಪಿಸಿವೆ. ಸಹಕಾರ ಕ್ಷೇತ್ರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ಕೇಂದ್ರ ಸಹಕಾರ ಸಚಿವಾಲಯವು ಸ್ಥಾಪನೆಯಾಗಿ 5 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಂಗಳೂರಿನ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಧ್ವಜಾರೋಹಣ ಮಾಡಿ ಮಾತನಾಡಿದ ಶಾಸಕ ಡಿ.ವೇದವ್ಯಾಸ ಕಾಮತ್, ರಾಜೇಂದ್ರ ಕುಮಾರ್ ಅವರಿಂದ ಸಹಕಾರ ಕ್ಷೇತ್ರಕ್ಕೆ ರಾಜ್ಯದಲ್ಲೇ ಉತ್ತಮ ಕೊಡುಗೆ ಲಭಿಸುತ್ತಿದೆ. ಸಹಕಾರದಿಂದ ಸಮೃದ್ಧಿ ಕಾಣಬೇಕು ಎಂಬುದು ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯದ ಧ್ಯೇಯ. ಆ ಚಿಂತನೆಯಲ್ಲಿ ಕೇಂದ್ರದ ಸಹಕಾರ ಸಚಿವಾಲಯ ಕಾರ್ಯ ನಿರ್ವಹಿಸುತ್ತಿದೆ. ದೇಶದ ಆರ್ಥಿಕ ಅಭಿವೃದ್ಧಿ, ಸಮೃದ್ಧತೆಗೆ ಕೊಡುಗೆ ನೀಡುವ ಚಿಂತನೆಯೊಂದಿಗೆ ಕೇಂದ್ರ ಸಹಕಾರ ಸಚಿವಾಲಯ ಮುನ್ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಕಸಿತ ಭಾರತದ ಕನಸು ಇಟ್ಟುಕೊಂಡು ಮುಂದುವರಿಯುತ್ತಿರುವ ಹೊತ್ತಿನಲ್ಲಿ ಸಹಕಾರ ಸಚಿವಾಲಯ ಆ ಭರವಸೆಯ ದಾರಿಯಲ್ಲಿ ಮುನ್ನಡೆಯುತ್ತಿದೆ. ಪ್ರತಿ ಗ್ರಾಮದಲ್ಲೂ ಸಹಕಾರ ಸಂಘಗಳು ರಚನೆಯಾಗಬೇಕು ಎಂಬುದು ವಿಕಸಿತ ಭಾರತದ ಕನಸು. ನಮ್ಮ ಜಿಲ್ಲೆಯಲ್ಲಿ ಸಹಕಾರ ಚಳವಳಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕೊಡುಗೆ, ಮನೆಮನೆಗಳಿಗೆ ಮನಮನಗಳಿಗೆ ಮುಟ್ಟಬೇಕು ಎಂಬ ದೃಷ್ಟಿಕೋನ ಇಟ್ಟುಕೊಂಡು ಈ ಚಳವಳಿ ಸಾಗುತ್ತಿದೆ. ಎನ್ಸಿಡಿಸಿ ಕೊಡುತ್ತಿರುವ ಕೊಡುಗೆಗಳು ಯಶಸ್ವಿಯಾಗಿ ಅನುಷ್ಠಾನವಾಗಳು ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು.




ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೇವಲ ಸಾಲ ನೀಡುವ ಸಂಸ್ಥೆಗಳು ಆಗಿರದೆ, ಗ್ರಾಮದಲ್ಲಿ ವಿವಿಧ ರೀತಿಯ ಸೇವೆ ನೀಡುವ ಸಂಘವಾಗಿ ಬದಲಾಗಬೇಕು ಎಂಬ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತಿದೆ. ಸಹಕಾರಿ ಸಂಘಗಳು ಸದೃಢ, ಸ್ವಾವಲಂಬಿ ಆಗಬೇಕು ಎಂಬ ನಿಟ್ಟಿನಲ್ಲಿ ಡಿಜಿಟಲ್ ಆಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸಹಕಾರ ಸಚಿವಾಲಯ ಕಾರ್ಯಕ್ರಮ ರೂಪಿಸಿದೆ. ದೇಶದ ಶೇ.35ರಷ್ಟು ಹಾಲಿನ ವ್ಯವಹಾರ ಸಹಕಾರಿ ಸಂಘಗಳಿಂದ ಆಗುತ್ತಿದೆ. ಸಹಕಾರ ಕ್ಷೇತ್ರ ಬೆಳೆದರೆ ಗ್ರಾಮ, ರಾಜ್ಯ ದೇಶ ಬೆಳೆದಂತೆ. ಇಂಥ ಕಾರ್ಯಕ್ರಮಗಳಿಂದ ಜನರಲ್ಲಿ ಸಂಚಲನ ಉಂಟಾಗ್ತದೆ. ಇಂತ ಕಾರ್ಯಕ್ರಮ ಹೆಚ್ಚು ಹೆಚ್ಚು ಆಗಬೇಕು ಎಂದು ಪ್ರತಿಪಾದಿಸಿದರು.
ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ, ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಎಸ್. ಆರ್ ಹರೀಶ್ ಆಚಾರ್ಯ ಮಾತನಾಡಿ, ಸಹಕಾರ ಸಪ್ತಾಹದ ಅವಧಿಯಲ್ಲಿ ಒಂದು ವಾರ ಚಿಂತನ ಮಂಥನ ನಡೆಯುತ್ತದೆ. ಸಹಕಾರದಿಂದ ಸಮೃದ್ಧಿ ಎಂಬ ಪರಿಕಲ್ಪನೆಯನ್ನು 100 ವರ್ಷಗಳ ಹಿಂದೆಯೇ ಮೊಳಹಳ್ಳಿ ಶಿವರಾವ್ ಅವರು ಬೋಧಿಸಿದ್ದಾರೆ. ಸಹಕಾರ ತತ್ವ ಜಾತಿ ಮತ ಭೇದ ಭಾವ ಬಿಟ್ಟು ಸೇರುವ ಕ್ಷೇತ್ರ. ರೈಫೀಸನ್ ಮಾದರಿಯ ಸಹಕಾರ ವ್ಯವಸ್ಥೆ ನಮ್ಮ ದೇಶದಲ್ಲಿ ಇದೆ. ದೇಶದಲ್ಲೇ ಮೊದಲ ಕೇಂದ್ರ ಸಹಕಾರ ಬ್ಯಾಂಕ್ ಆರಂಭಿಸಿದ್ದು ಮೊಳಹಳ್ಳಿ ಶಿವರಾವ್ ಅವರು. 27 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಅವರು ಆರಂಭಿದ್ದಾರೆ. ಎಪಿಎಂಸಿ ಮಾದರಿಯಲ್ಲಿ ಮಂಡಿ ವ್ಯವಸ್ಥೆ ಆರಂಭಿಸಿದ್ದರು. ಮೂರ್ತೆದಾರರ ಸಹಕಾರ ಸಂಘಗಳು, ಮೀನುಗಾರರ ಸಹಕಾರ ಸಂಘಗಳು, ಜನತಾ ಬಜಾರ್ ಇತ್ಯಾದಿಗಳನ್ನು ಮೊಳಹಳ್ಳಿಯವರು ಆರಂಭಿಸಿದ್ದು ದೇಶಾದ್ಯಂತ 47ರಷ್ಟು ಸಹಕಾರ ಸಂಘಗಳನ್ನು ಆರಂಭಿಸಿದ್ದಾರೆ. ಎಲ್ಲಾ ವಲಯದಲ್ಲಿ ಅವರು ವೈವಿಧ್ಯಮಯ ಸಹಕಾರ ಸಂಘಗಳನ್ನು ಆರಂಭಿಸಿದ್ದಾರೆ. ಮೊಲಹಳ್ಳಿಯವರು ಕಟ್ಟಿಕೊಟ್ಟ ಸಹಕಾರ ಸಂಘದ ವ್ಯವಸ್ಥೆಯನ್ನು ಸುಧಾರಿಸಿದ್ದು ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರು. ಭದ್ರ ಬುನಾದಿಯ ಮೇಲೆ ಭವ್ಯ ಸೌಧ ಕಟ್ಟಿರುವುದು ರಾಜೇಂದ್ರ ಕುಮಾರ್ ಅವರು. ಸಹಕಾರಿ ಸಂಘಗಳನ್ನು ಕಾರ್ಪೊರೇಟ್ ಮಾದರಿಯಲ್ಲಿ ಬೆಳೆಯಲು ಅನುವು ಮಾಡಿಕೊಟ್ಟಿರುವ ರಾಜೇಂದ್ರ ಕುಮಾರ್ ಅಭಿನವ ಮೊಳಹಳ್ಳಿ ಆಗಿದ್ದಾರೆ ಎಂದು ವಿಶ್ಲೇಷಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕರಾದ ಎಚ್.ಎನ್ ರಮೇಶ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಎಸ್ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ಸಿಇಒ ಗೋಪಾಲಕೃಷ್ಣ ಭಟ್ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಎಸ್ಸಿಡಿಸಿಸಿ ಬ್ಯಾಂಕ್ ಸಿಬ್ಬಂದಿ ರಾಜೀವ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com







