ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಉಳ್ಳಾಲ ಶಾಖೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ 111ನೇ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರವು ಕಣಚೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್, ಮಂಗಳೂರು ಹಾಗೂ ಎ.ಜೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಮಂಗಳೂರು ಇವರ ನುರಿತ ತಜ್ಞ ವೈದ್ಯರ ತಂಡದಿಂದ ಸಮುದಾಯ ಭವನ, ಉಳ್ಳಾಲ ನಗರಸಭೆ ಆವರಣ, ಉಳ್ಳಾಲದಲ್ಲಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಶಿಬಿರವನ್ನು ಶ್ರೀ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕರ್ನಾವರ್ ಯಾನೆ ಬಾಲಕೃಷ್ಣ ಉಳ್ಳಾಲ್ ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಮಂಜಪ್ಪ ಕರ್ನಾವರ್ ಯಾನೆ ಬಾಲಕೃಷ್ಣ ಉಳ್ಳಾಲ್ “ಸುಮಾರು 11 ವರ್ಷಗಳಿಂದ ಉಳ್ಳಾಲ ಜನರಿಗೆ ಅನುಕೂಲವಾಗುವಂತೆ ಈ ಶಿಬಿರವನ್ನು ಆಯೋಜಿಸುತ್ತಿದ್ದು, ಎಲ್ಲರಿಗೂ ಈ ಶಿಬಿರವು ಪ್ರಯೋಜನಕಾರಿಯಾಗಲೆಂದು ಶುಭ ಹಾರೈಸಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಮಾಡುತ್ತಿರುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ” ಎಂದರು.
ವಿದ್ಯಾರಣ್ಯ ಕಲಾವೃಂದ ಉಳ್ಳಾಲ ಇದರ ಮಾಜಿ ಅಧ್ಯಕ್ಷರಾದ ರವೀಂದ್ರ ರಾಜ್ ಮಾತನಾಡಿ, “ಸಹಕಾರಿ ಸಂಘ ಆರೋಗ್ಯ ಚಿಂತನೆಯಿ೦ದ, ಬ್ರಹ್ಮಶ್ರೀ ನಾರಾಯಣಗುರು ತತ್ವ ಆದರ್ಶ, ಏಕಾಗ್ರತೆಗೆ ಪೂರಕವಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಉಗಮವಾಗಿದೆ. ಉಳ್ಳಾಲವು ರಾಣಿ ಅಬ್ಬಕ್ಕನ ಹೆಸರಿನೊಂದಿಗೆ, ಉಳ್ಳಾಲ ಶ್ರೀನಿವಾಸ ಮಲ್ಯರಂತಹ ಮೇರು ವ್ಯಕ್ತಿತ್ವವನ್ನು ಪರಿಚಯಿಸಿದ ಊರಾಗಿದ್ದು, ಇಂತಹ ಪರಿಸರದಲ್ಲಿ ಶ್ರೀಯುತ ಚಿತ್ತರಂಜನ್ ಬೋಳಾರ ನೇತೃತ್ವದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಎ.ಜೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಮಂಗಳೂರು ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ ವಿಭಾಗದ ವೈದ್ಯರಾದ ಡಾ.ಫಿರ್ದೋಸ್ ಖಾನ್ ಮಾತನಾಡಿ “ಶಿಬಿರದಲ್ಲಿ ಉಚಿತ ದಂತ ತಪಾಸಣೆ ಮತ್ತು ಸಲಹೆ, ಹಲ್ಲುಗಳ ಶುಚೀಕರಣ, ಹಲ್ಲುಗಳ ಚಿಕ್ಕ ಚಿಕ್ಕ ಭರ್ತಿಗೊಳಿಸುವ ಚಿಕಿತ್ಸೆ, ಚಿಕಿತ್ಸೆಗೆ ಒಳಪಡದ ಮತ್ತು ಬಹಳ ಕೆಟ್ಟಿರುವ ಹಲ್ಲುಗಳನ್ನು ಕೀಳಿಸುವುದರ ಜೊತೆಗೆ ಇತರ ವೈದ್ಯಕೀಯ ಸೇವೆಗಳು ಲಭ್ಯವಿದ್ದು, ಸಾರ್ವಜನಿಕರು ಇಂತಹ ಶಿಬಿರಗಳ ಪ್ರಯೋಜನ ಹೆಚ್ಚು ಹೆಚ್ಚು ಪಡೆಯಬೇಕು” ಎಂದರು.
ಕಣಚೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್, ಮಂಗಳೂರು ಇಲ್ಲಿನ ನೇತ್ರ ವಿಭಾಗದ ಎಚ್.ಒ.ಡಿ ಡಾ.ಬದ್ರಿನಾಥ್ ತಲ್ವಾರ್ ಮಾತನಾಡಿ, ಆರೋಗ್ಯ ವಿಮೆಯನ್ನು ಎಲ್ಲರೂ ಸಾಧ್ಯವಾದಷ್ಟು ಸಣ್ಣ ವಯಸ್ಸಿನಲ್ಲಿ ಮಾಡಿಸಿದರೆ ಹೆಚ್ಚಿನ ಪ್ರಾಯೋಜನ ಪಡೆಯಬಹುದು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ಕಣಚೂರು ಆಸ್ಪತ್ರೆಯು ಹಲವಾರು ಉಚಿತ ಶಿಬಿರಗಳನ್ನು ಆಯೋಜನೆ ಮಾಡಿದ್ದು, ಈ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡಲಾಗುವುದು, ಬಿ.ಪಿ. ಮತ್ತು ಮಧುಮೇಹ ತಪಾಸಣೆ, ಎಲುಬು, ಕೀಲು, ಕಿವಿ, ಮೂಗು, ಗಂಟಲು ತಪಾಸಣೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ ಲಭ್ಯವಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ವರ್ಷ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದೆ. ಉಳ್ಳಾಲ ಶಾಖೆಯ 11ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಘದ ವತಿಯಿಂದ ಆಯೋಜಿಸಿದ 111ನೇ ಉಚಿತ ವೈದ್ಯಕೀಯ ಶಿಬಿರ ಇದಾಗಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತ ಬಂದಿದ್ದು, ಸುಮಾರು ದೂರದಿಂದ ಶಿಬಿರಾರ್ಥಿಗಳು ಈ ಶಿಬಿರಕ್ಕೆ ಹಾಜರಾಗುತ್ತಿದ್ದು ಶಿಬಿರಾರ್ಥಿಗಳಿಗೆ ಒಳ್ಳೆಯ ಆರೋಗ್ಯ ದೇವರು ಕರುಣಿಸಲಿ ಎಂದರು, ಈ ಶಿಬಿರವು ಉಳ್ಳಾಲದ ಜನರಿಗೆ ಪ್ರಯೋಜನಕಾರಿಯಾಗಿದೆ. ಇದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಮ್ಮ ಸಹಕಾರಿ ಸಂಘವು ಮುಖ್ಯ ಪಾತ್ರ ವಹಿಸಿದೆ. ಸಂಘವು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಸಹಕಾರವನ್ನು ನೀಡಿದೆ. ಅದೇ ರೀತಿ ಇಂತಹ ಆರೋಗ್ಯ ಶಿಬಿರ ಏರ್ಪಡಿಸಲು ಸಹಕರಿಸುತ್ತಿರುವ ಕಣಚೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್, ಮಂಗಳೂರು ಹಾಗೂ ಎ.ಜೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಮಂಗಳೂರು ಇದರ ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆ ಸಲ್ಲಿಸಿದರು. ಉಚಿತ ಸೇವೆಗಳ ಮಾಹಿತಿಯನ್ನು ಆಸ್ಪತ್ರೆಯ ವತಿಯಿಂದ ನೀಡುತ್ತಿದ್ದು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಾಮಾಜಿಕ ಸೇವೆಗಳಾದ ಉಚಿತ ಬಸ್ ತಂಗುದಾಣ ನಿರ್ಮಾಣ, ಕಡುಬಡವರಿಗೆ ಗೃಹ ನಿರ್ಮಾಣ, ಹಿರಿಯ ನಾಗರಿಕರ ಮನೆಗೆ ಅಗತ್ಯ ಸಂದರ್ಭದಲ್ಲಿ ತೆರಳಿ ಸೇವೆ ಒದಗಿಸುತ್ತಿದೆ. ಜಾಗತಿಕ ವಿಮಾ ದಿನದ ವಿಶೇಷತೆಯಾಗಿ ವಾಹನ ವಿಮೆ, ಆರೋಗ್ಯ ವಿಮೆಯನ್ನು ವಿವಿಧ ವಿಮಾ ಕಂಪೆನಿಗಳ ಸೌಲಭ್ಯ ಸಹಯೋಗದೊಂದಿಗೆ ಆಕರ್ಷಕ ಪ್ರೀಮಿಯಂನಲ್ಲಿ ನೀಡುತ್ತಿದ್ದು, ಗ್ರಾಹಕರಿಗೆ ಆರೋಗ್ಯ ವಿಮೆಯ ಮಹತ್ವ ತಿಳಿಸಿದರು.

ಈ ಶಿಬಿರವನ್ನು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಪಡೀಲ್, ಮಂಗಳೂರು, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ವಿಭಾಗ, ಬಂಡಿಕೊಟ್ಯ ಉಳ್ಳಾಲ ಮತ್ತು ವಿದ್ಯಾರಣ್ಯ ಯುವಕ ವೃಂದ ಮತ್ತು ವಿದ್ಯಾರಣ್ಯ ಕಲಾವೃಂದ ಉಳ್ಳಾಲ, ಶಿವಶಕ್ತಿ ಯುವಕ ಮಂಡಲ ಉಳ್ಳಾಲ ಹಾಗೂ ಉಳ್ಳಾಲ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟ ಉಳ್ಳಾಲ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ. ನಿರ್ದೇಶಕರಾದ ಆನಂದ ಎಸ್ ಕೊಂಡಾಣ, ಗೋಪಾಲ್ ಎಮ್.,ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಗೌರವಾಧ್ಯಕ್ಷರಾದ ವಾಮನ್ ಕೆ, ಕಣಚೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್, ಮಂಗಳೂರು ಇಲ್ಲಿನ ಕಿವಿ, ಮೂಗು, ಗಂಟಲು ವಿಭಾಗದ ವೈದ್ಯರಾದ ಡಾ. ಅನಿಷಾ, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಬಂಡಿಕೊಟ್ಯ, ಉಳ್ಳಾಲ ಇದರ ಗೌರವ ಅಧ್ಯಕ್ಷರಾದ ಅಶೋಕ್ ಧರ್ಮನಗರ, ವಿದ್ಯಾರಣ್ಯ ಯುವಕ ವೃಂದ ಮತ್ತು ವಿದ್ಯಾರಣ್ಯ ಕಲಾವೃಂದ ಉಳ್ಳಾಲ ಇದರ ಗೌರವಾಧ್ಯಕ್ಷರಾದ ವಿಜಯ ಕುಮಾರ್, ಉಳ್ಳಾಲ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷರಾದ ದೇವಕಿ ಆರ್ ಉಳ್ಳಾಲ್ ಮತ್ತಿತ್ತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 150ಕ್ಕೂ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ, ದಂತ ಚಿಕಿತ್ಸಾ ಹಾಗೂ ನೇತ್ರ ತಪಾಸಣೆ ನಡೆಸಲಾಯಿತು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಬ್ಬಂದಿ ರತಿಕಾ ಸ್ವಾಗತಿಸಿ, ಸಿಬ್ಬಂದಿ ಪವಿತ್ರಾ ಯು ಜೆ. ವಂದಿಸಿದರು. ಹಿರಿಯ ಶಾಖಾಧಿಕಾರಿ ಸಚಿನ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

