ನವದೆಹಲಿ: ಪಟ್ಟಣ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಹತ್ವದ ಹೆಜ್ಜೆಯಾಗಿ, ಭಾರತೀಯ ರಿಸರ್ವ್ ಬ್ಯಾಂಕ್, ಪಟ್ಟಣ ಸಹಕಾರಿ ಬ್ಯಾಂಕುಗಳ (ಯುಸಿಬಿ) ಮಾದರಿ ಉಪನಿಯಮಗಳನ್ನು (ಮಾದರಿ ಬೈಲಾ) ಸಿದ್ಧಪಡಿಸಲು ಐವರು ಸದಸ್ಯರ ಸಮಿತಿಯನ್ನು ರಚಿಸಿದೆ. 1979ರಲ್ಲಿ ರಚಿಸಿದ್ದ ಮಾಧವ ದಾಸ್ ಸಮಿತಿಯನ್ನು ರಚಿಸಿದ್ದ ಐದು ದಶಕಗಳ ಬಳಿಕ ಆರ್ಬಿಐ ಈ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.
https://chat.whatsapp.com/FCEnlTkAKCC0MGPhXtX4i4
ಆರ್ಬಿಐ ಸೋಮವಾರ ಹೊರಡಿಸಿದ ಪ್ರಕಟಣೆಯಲ್ಲಿ ಹೊಸ ಸಮಿತಿಯ ರಚನೆಯನ್ನು ಘೋಷಿಸಿದೆ. ಮಹಾರಾಷ್ಟ್ರ ಸರ್ಕಾರದ ಸಹಕಾರ ಇಲಾಖೆಯ ಹೆಚ್ಚುವರಿ ಆಯುಕ್ತ ಹಾಗೂ ವಿಶೇಷ ನಿಬಂಧಕರಾಗಿ (ನಿವೃತ್ತ) ಸೇವೆ ಸಲ್ಲಿಸಿದ್ದ ದಿನೇಶ್ ಔಲ್ಕರ್ ಅವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ವಕೀಲ ಹಾಗೂ ಡೊಂಬಿವಿಲಿ ನಗರಿ ಸಹಕಾರಿ ಬ್ಯಾಂಕ್ ಲಿಮಿಟೆಡ್ನ ಅಧ್ಯಕ್ಷ ಗಣೇಶ್ ಧಾರ್ಗಲ್ಕರ್, ಟಿಜೆಎಸ್ಬಿ ಸಹಕಾರಿ ಬ್ಯಾಂಕ್ನ ನಿರ್ದೇಶಕ ಕವಿ ಆರ್.ಸಿ.ವಿ. ಶೇಷಾಚಲಂ, ಆರ್ಬಿಐ ಮುಖ್ಯ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪಿ.ಕೆ. ಅರೋರಾ, ಪುಣೆಯ ಕೃಷಿ ಬ್ಯಾಂಕಿಂಗ್ ಕಾಲೇಜು (ಸಿಎಬಿ) ಇದರ ಉಪ ಮಹಾಪ್ರಬಂಧಕ ಹಾಗೂ ಅಧ್ಯಾಪಕ ಸದಸ್ಯ ಮುರಳೀಕೃಷ್ಣ ಎಂ. ಈ ಸಮಿತಿಯ ಸದಸ್ಯರಾಗಿರುತ್ತಾರೆ. ಆರ್ಬಿಐ ಮಾಹಿತಿಯಂತೆ 2023ರ ಮೇ 12ರಂದು ನಡೆದ ನಗರ ಸಹಕಾರಿ ಬ್ಯಾಂಕ್ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಆರ್ಬಿಐ ಗವರ್ನರ್ ನಡೆಸಿದ ಸಭೆಯಲ್ಲಿ ಬಂದ ಸಲಹೆಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. 2020ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ತಿದ್ದುಪಡಿಗಳ ನಂತರ ಅದರ ಹಲವು ವಿಧಿಗಳು ಸಹಕಾರಿ ಬ್ಯಾಂಕುಗಳಿಗೂ ಅನ್ವಯವಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಮಾದರಿ ಉಪನಿಯಮಗಳ ಅಗತ್ಯ ಉಂಟಾಗಿದೆ ಎಂದು ಆರ್ಬಿಐ ತಿಳಿಸಿದೆ.
ಸಮಿತಿಗೆ ಕರಡು ಉಪನಿಯಮಗಳನ್ನು ಚರ್ಚಿಸಿ ಅಂತಿಮಗೊಳಿಸಿ, ಮೊದಲ ಸಭೆಯ ದಿನಾಂಕದಿಂದ ಮೂರು ತಿಂಗಳೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸುವ ಜವಾಬ್ದಾರಿ ನೀಡಲಾಗಿದೆ. ಈ ಕ್ರಮವು ನಗರ ಸಹಕಾರಿ ಬ್ಯಾಂಕುಗಳಿಗೆ ಏಕರೂಪದ ಆಡಳಿತ ಚೌಕಟ್ಟು ಒದಗಿಸುವುದರ ಜೊತೆಗೆ, ಕ್ಷೇತ್ರದ ಭವಿಷ್ಯದ ನಿಯಂತ್ರಣಾತ್ಮಕ ಹಾಗೂ ಕಾರ್ಯಾಚರಣಾ ವ್ಯವಸ್ಥೆಯ ಮೇಲೆ ಮಹತ್ವದ ಪರಿಣಾಮ ಬೀರುವ ನಿರೀಕ್ಷೆಯಿದೆ.
ಪ್ರಸ್ತಾವಿತ ಮಾದರಿ ಉಪನಿಯಮಗಳ ಉದ್ದೇಶ:
ಉತ್ತಮ ಆಡಳಿತ ವ್ಯವಸ್ಥೆಯನ್ನು ಉತ್ತೇಜಿಸುವುದು
ನಿಯಂತ್ರಣಾತ್ಮಕ ಅನುಸರಣೆಯನ್ನು ಬಲಪಡಿಸುವುದು
ನಗರ ಸಹಕಾರಿ ಬ್ಯಾಂಕುಗಳಿಗೆ ಬಂಡವಾಳ ಸಂಗ್ರಹವನ್ನು ಸುಲಭಗೊಳಿಸುವುದು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com






