ಎಂ.ಸಿ.ಸಿ ಬ್ಯಾಂಕ್ “ಇಂಪ್ರಿಂಟ್ಸ್ ಆಂಡ್ ಇಂಪ್ರೆಶನ್ಸ್” ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಲೆಸ್ಲಿ ಕ್ಲಿಫರ್ಡ್ ಡಿಸೋಜ ಸಲಹೆ
ಉಡುಪಿ: ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನಗಳ ಬಳಕೆ ಇಂದು ಮಹಳ ಮಹತ್ವಪೂರ್ಣವಾದುದಾಗಿದ್ದು, ಅವುಗಳು ಮಾನವ ಕಲ್ಯಾಣಕ್ಕಾಗಿ ಬಳಸಲ್ಪಡಬೇಕು. “ಸ್ವಾರ್ಥವಲ್ಲ ಸೇವೆ”, “ವಹಿವಾಟಲ್ಲ ವಿಶ್ವಾಸ”, “ಲಾಭವಲ್ಲ ವ್ಯಕ್ತಿ” ಎಂಬ ಮೌಲ್ಯಗಳನ್ನು ಸಂಸ್ಥೆಗಳು ಅಳವಡಿಸಿಕೊಳ್ಳಬೇಕು. ಈ ತತ್ವಗಳನ್ನು ನಿಷ್ಠೆಯಿಂದ ಅನುಸರಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಲೆಸ್ಲಿ ಕ್ಲಿಫರ್ಡ್ ಡಿಸೋಜ ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ಎಂ.ಸಿ.ಸಿ. ಬ್ಯಾಂಕ್ ವತಿಯಿಂದ ಎರ್ಮಾಳಿನ ಪೆನಿನ್ಸುಲಾ ಡೆಲ್ಮಾರ್ನಲ್ಲಿ ಹಮ್ಮಿಕೊಂಡ “ಇಂಪ್ರಿಂಟ್ಸ್ ಆಂಡ್ ಇಂಪ್ರೆಶನ್ಸ್” ಎಂಬ ಕಾರ್ಯಕ್ರಮದಲ್ಲಿ ಅವರು ಉಡುಪಿ ಧರ್ಮಪ್ರಾಂತ್ಯ ಮತ್ತು ಸಮಾಜದ ಕುರಿತ ತಮ್ಮ ಕನಸುಗಳು ಹಾಗೂ ಆಶಯಗಳನ್ನು ಹಂಚಿಕೊಂಡರು.
ಉಡುಪಿಯಲ್ಲಿ ಬಿಷಪ್ ಕಾರ್ಯಾಲಯದ ಸ್ಥಾಪನೆ, ಭವಿಷ್ಯದ ಆಧ್ಯಾತ್ಮಿಕ ನಾಯಕರನ್ನು ರೂಪಿಸುವುದು, ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಹಾಗೂ ಬಡವರು ಮತ್ತು ಹಿಂದುಳಿದವರಿಗೆ ಸೇವೆ ಸಲ್ಲಿಸುವ ಆಸ್ಪತ್ರೆ ನಿರ್ಮಾಣದ ಕನಸು ಇರುವುದಾಗಿ ತಿಳಿಸಿದ ಅವರು, ಎಂ.ಸಿ.ಸಿ. ಬ್ಯಾಂಕಿಗೆ ಧರ್ಮಪ್ರಾಂತ್ಯದ ನಿರಂತರ ಆಶೀರ್ವಾದ ಮತ್ತು ಬೆಂಬಲ ಇರಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಂ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರು, ಹಿರಿಯ ಅಧಿಕಾರಿಗಳು ಹಾಗೂ ಶಾಖಾ ವ್ಯವಸ್ಥಾಪಕರ ಉಪಸ್ಥಿತಿ ಅರ್ಥಪೂರ್ಣವಾದುದು. ಸಂಸ್ಥೆಯನ್ನು ಬಲಪಡಿಸುವಲ್ಲಿ ಹಾಗೂ ಎಂ.ಸಿ.ಸಿ. ಬ್ಯಾಂಕಿನ ಪರಂಪರೆ ಮತ್ತು ದೃಷ್ಟಿಕೋನವನ್ನು ಮುಂದುವರಿಸುವಲ್ಲಿ ಅವರ ಪಾತ್ರ ಹಿರಿದಾಗಿರುತ್ತದೆ. ಉಡುಪಿ ಪ್ರದೇಶದಲ್ಲಿ ಎಂ.ಸಿ.ಸಿ. ಬ್ಯಾಂಕ್ ವೇಗವಾಗಿ ಪ್ರಗತಿ ಸಾಧಿಸಿ ಮುನ್ನಡೆಯುತ್ತಿದ್ದು, ಪ್ರಸ್ತುತ ಅಧ್ಯಕ್ಷರ ನಾಯಕತ್ವದಲ್ಲಿ ಉಡುಪಿ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಎಂ.ಸಿ.ಸಿ. ಬ್ಯಾಂಕಿನ ಶಾಖೆಗಳ ಸಂಖ್ಯೆ ೪ರಿಂದ ೮ಕ್ಕೆ ಏರಿಕೆಯಾಗಿದ್ದು, ಶೀಘ್ರದಲ್ಲೇ ಕಟಪಾಡಿಯಲ್ಲಿ ಹೊಸ ಶಾಖೆಯನ್ನು ಉದ್ಘಾಟಿಸಲಾಗುವುದು ಎಂದು ಘೋಷಿಸಿದರು. ಈ ವಿಸ್ತರಣೆಯ ಹಿಂದೆ ಬಿಷಪ್ಗಳು ಹಾಗೂ ಸ್ಥಳೀಯ ಧರ್ಮಗುರುಗಳ ನಿರಂತರ ಆಶೀರ್ವಾದ ಮತ್ತು ಬೆಂಬಲವೇ ಪ್ರಮುಖ ಕಾರಣ ಎಂದು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಡಾ| ಜೆರಾಲ್ಡ್ ಐಸಾಕ್ ಲೋಬೋ, ಎನ್ಆರ್ಐ ಉದ್ಯಮಿ, ದಾನಿ ಮೈಕಲ್ ಡಿಸೋಜ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರು, ಶಾಖಾ ವ್ಯವಸ್ಥಾಪಕರು, ಗಣ್ಯರು, ಧರ್ಮಗುರುಗಳು, ಚಾರ್ಟರ್ಡ್ ಅಕೌಂಟೆಂಟ್ಸ್ ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರು ಭಾಗವಹಿಸಿದ್ದರು. ಖ್ಯಾತ ಎನ್ಆರ್ಐ ಉದ್ಯಮಿ ಮೈಕಲ್ ಡಿಸೋಜ ಅವರಿಗೆ ವಿಶೇಷ ಗೌರವ ಸಲ್ಲಿಸಿ ಬ್ಯಾಂಕಿನ ಅಭಿವೃದ್ಧಿ ಹಾಗೂ ಸಮುದಾಯಮುಖಿ ಕಾರ್ಯಕ್ರಮಗಳಿಗೆ ಅವರು ನೀಡಿದ ಬೆಂಬಲ ಮತ್ತು ಮಾರ್ಗದರ್ಶನವನ್ನು ಶ್ಲಾಘಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಡಾ| ಲೆಸ್ಲಿ ಕ್ಲಿಫರ್ಡ್ ಡಿಸೋಜ ಹಾಗೂ ನಿವೃತ್ತ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರನ್ನು ಸನ್ಮಾನಿಸಲಾಯಿತು.
ಸಂದೇಶ ನೀಡಿದ ನಿವೃತ್ತ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೋ ಪ್ರತಿಯೊಂದು ಯಶಸ್ವಿ ಸಂಸ್ಥೆಗೆ ದೃಢವಾದ ದೃಷ್ಟಿಕೋನ ಮತ್ತು ಧ್ಯೇಯ ಅಗತ್ಯವಿದ್ದು, ಎಂ.ಸಿ.ಸಿ. ಬ್ಯಾಂಕಿನ ಸಾಧನೆಗಳು ಅದರ ಸಷ್ಟ ಉದ್ದೇಶ ಮತ್ತು ಸಮಾಜಮುಖಿ ಬದ್ಧತೆಯ ಫಲವಾಗಿದೆ. ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಮರಳಿ ಕೊಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಯಾರೂ ಬಡವರಾಗಿ ಉಳಿಯಬಾರದು ಎಂಬುದು ತಮ್ಮ ದೀರ್ಘಕಾಲದ ಕನಸು. ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗಾಗಿ ಒಗ್ಗಟ್ಟಿನ ಪ್ರಯತ್ನ ಅಗತ್ಯವೆಂದು ಹೇಳಿದರು.
ಬ್ಯಾಂಕಿನ ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೋ ಧನ್ಯವಾದ ಸಮರ್ಪಿಸಿ ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

