ಮಂಗಳೂರು: ಪೂರ್ವ ಆಫ್ರಿಕಾದ ಇಥಿಯೋಪಿಯಾದ ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಡ್ಯಾಶೆನ್ ಬ್ಯಾಂಕ್ ಎಸ್.ಸಿ. ಇದರ ಆಡಳಿತ ಮಂಡಳಿಯ ಸದಸ್ಯರು ಶುಕ್ರವಾರ ಎಂಸಿಸಿ ಬ್ಯಾಂಕಿನ ಪ್ರಧಾನ ಕಚೇರಿಗೆ ಅಧಿಕೃತ ಸಂಸ್ಥಾತ್ಮಕ ಸಂವಹನ ಮತ್ತು ಜ್ಞಾನ ವಿನಿಮಯ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿದರು.
https://chat.whatsapp.com/FCEnlTkAKCC0MGPhXtX4i4
ವೃತ್ತಿಪರ ಸಂಬಂಧಗಳನ್ನು ಬೆಳೆಸುವುದು, ಭಾರತದ ಸಹಕಾರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು, ಬ್ಯಾಂಕಿಂಗ್ ಪರಿಣತಿಯನ್ನು ವಿನಿಮಯ ಮಾಡಿಕೊಳ್ಳುವುದು ಹಾಗೂ ಡಿಜಿಟಲ್ ಬ್ಯಾಂಕಿಂಗ್, ಕಾರ್ಯಾಚರಣ ದಕ್ಷತೆ ಮತ್ತು ತಾಂತ್ರಿಕ ಆಧುನೀಕರಣದ ಬೆಳವಣಿಗೆಗಳನ್ನು ಅನ್ವೇಷಿಸುವ ಉದ್ದೇಶದಿಂದ ಈ ಭೇಟಿಯನ್ನು ಆಯೋಜಿಸಲಾಗಿತ್ತು. ಡ್ಯಾಶೆನ್ ಬ್ಯಾಂಕ್ ಎಸ್.ಸಿ.ಯ ೧೩ ಮಂದಿ ಆಡಳಿತ ಮಂಡಳಿಯ ಹಿರಿಯ ನಿರ್ದೇಶಕರು ಭೇಟಿಯಲ್ಲಿ ಪಾಲ್ಗೊಂಡಿದ್ದರು. ಡ್ಯಾಶೆನ್ ಬ್ಯಾಂಕ್ ದೇಶದಾದ್ಯಂತ ೯೦೦ಕ್ಕೂ ಅಧಿಕ ಶಾಖೆಗಳು, ೯ ವಿದೇಶಿ ವಿನಿಮಯ ಕೇಂದ್ರಗಳು, ೧೧೦೦ಕ್ಕೂ ಅಧಿಕ ಎಟಿಎಂಗಳು ಹಾಗೂ ೨,೦೦೦ಕ್ಕೂ ಅಧಿಕ ಪಾಯಿಂಟ್-ಆಫ್-ಸೇಲ್ (POS) ಟರ್ಮಿನಲ್ಗಳ ಜಾಲವನ್ನು ಹೊಂದಿದೆ.
ಎಂಸಿಸಿ ಬ್ಯಾಂಕಿನ ಐಟಿ ವಿಭಾಗದ ಮುಖ್ಯಸ್ಥ ಆಲ್ವಿನ್ ಡಿಸೋಜ ಸ್ವಾಗತಿಸಿ, ಈ ಭೇಟಿ ಕೇವಲ ಅಧಿಕೃತ ಕಾರ್ಯಕ್ರಮವಷ್ಟೇ ಅಲ್ಲದೆ, ಎರಡೂ ಬ್ಯಾಂಕಿಂಗ್ ಸಂಸ್ಥೆಗಳ ನಡುವಿನ ಸಂಸ್ಥಾತ್ಮಕ ಸಹಕಾರ ಮತ್ತು ಪರಸ್ಪರ ಅರ್ಥೈಸಿಕೆಯನ್ನು ಬಲಪಡಿಸುವ ಮಹತ್ವದ ಅವಕಾಶವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಂಸಿಸಿ ಬ್ಯಾಂಕಿನ ನಿರ್ದೇಶಕರಾದ ಐರಿನ್ ರೆಬೆಲ್ಲೋ, ಹೆರಾಲ್ಡ್ ಜೆ. ಮೊಂತೇರೋ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೋ, ಸುಶಾಂತ್ ಸಲ್ಡಾನ್ಹಾ, ಮಹಾಪ್ರಬಂಧಕರಾದ ಸುನಿಲ್ ಮಿನೇಜಸ್ ಹಾಗೂ ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು. ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ಅವರ ಚುರುಕಾದ ನಾಯಕತ್ವ ಮತ್ತು ಪರಿವರ್ತನಾ ದೃಷ್ಟಿಕೋನವನ್ನು ಈ ಕಾರ್ಯಕ್ರಮದ ಅವಧಿಯಲ್ಲಿ ಪ್ರಶಂಸಿಸಲಾಯಿತು. ಎಂಸಿಸಿ ಬ್ಯಾಂಕಿನ ಆಧುನೀಕರಣ, ವಿಸ್ತರಣೆ ಹಾಗೂ ನಿರಂತರ ಬೆಳವಣಿಗೆಗೆ ಅವರು ನೀಡಿದ ಮಹತ್ವದ ಕೊಡುಗೆಯನ್ನು ಸಭೆಯಲ್ಲಿ ಗುರುತಿಸಲಾಯಿತು. ಬ್ಯಾಂಕಿನ ಕಾರ್ಯಾಚರಣ ದಕ್ಷತೆ, ತಾಂತ್ರಿಕ ಸಮನ್ವಯ, ಶಾಖೆಗಳ ವಿಸ್ತರಣೆ ಹಾಗೂ ಗ್ರಾಹಕಕೇಂದ್ರಿತ ಬ್ಯಾಂಕಿಂಗ್ ಸೇವೆಗಳನ್ನು ಬಲಪಡಿಸುವಲ್ಲಿ ಅವರ ಪ್ರಯತ್ನಗಳನ್ನು ವಿಶೇಷವಾಗಿ ಉಲ್ಲೇಖಿಸಿ, ಈ ಪ್ರಯತ್ನಗಳಿಂದ ಎಂಸಿಸಿ ಬ್ಯಾಂಕ್ ಕರ್ನಾಟಕದ ಪ್ರಮುಖ ನಗರ ಸಹಕಾರ ಬ್ಯಾಂಕುಗಳಲ್ಲಿ ಒಂದಾಗಿದೆ ಎಂಬುದನ್ನು ಡ್ಯಾಶೆನ್ ಬ್ಯಾಂಕ್ ನಿರ್ದೇಶಕರ ಗಮನಕ್ಕೆ ತರಲಾಯಿತು.
ಪರಿಚಯಾತ್ಮಕ ಅಧಿವೇಶನದಲ್ಲಿ ಡ್ಯಾಶೆನ್ ಬ್ಯಾಂಕ್ ಎಸ್.ಸಿ.ಯ ಪ್ರತಿನಿಧಿಗಳು ತಮ್ಮ ವೃತ್ತಿಪರ ಜವಾಬ್ದಾರಿಗಳು ಹಾಗೂ ಪರಿಣತಿ ಕ್ಷೇತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಅಧಿವೇಶನವು ಎರಡೂ ಸಂಸ್ಥೆಗಳ ಪ್ರತಿನಿಧಿಗಳ ನಡುವೆ ಮುಕ್ತ ಸಂವಾದ ಮತ್ತು ವೃತ್ತಿಪರ ವಿಚಾರ ವಿನಿಮಯಕ್ಕೆ ಉತ್ತೇಜನ ನೀಡುವ ಆತ್ಮೀಯ ಮತ್ತು ಸಂವಾದಾತ್ಮಕ ವಾತಾವರಣ ಸೃಷ್ಟಿಸಿತು.

ಎಂಸಿಸಿ ಬ್ಯಾಂಕಿನ ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೋ ಮಾತನಾಡಿ, ಕರಾವಳಿ ಕರ್ನಾಟಕದ ಪ್ರಮುಖ ಬ್ಯಾಂಕಿಗ್ ಹಾಗೂ ಶೈಕ್ಷಣಿಕ ಕೇಂದ್ರವಾಗಿರುವ ಮಂಗಳೂರಿನ ಐತಿಹಾಸಿಕ ಮತ್ತು ಸಾಮಾಜಿಕ-ಆರ್ಥಿಕ ಮಹತ್ವದ ಕುರಿತು ವಿವರಣಾತ್ಮಕ ಮಾಹಿತಿ ನೀಡಿದರು. ಈ ಪ್ರದೇಶದ ಬಲಿಷ್ಠ ಸಹಕಾರ ಸಂಸ್ಕೃತಿ ಮತ್ತು ಉದ್ಯಮಶೀಲ ಮನೋಭಾವವು ಸಹಕಾರ ಬ್ಯಾಂಕಿಂಗ್ ಸಂಸ್ಥೆಗಳ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿರುವುದನ್ನು ವಿವರಿಸಿ, ಬ್ಯಾಂಕಿನ ಇತಿಹಾಸ ಮತ್ತು ಬೆಳವಣಿಗೆಯ ಕುರಿತು ಮಾಹಿತಿ ನೀಡಿದರು. ನೈತಿಕ ಬ್ಯಾಂಕಿಂಗ್ ಪದ್ಧತಿ, ಹಣಕಾಸು ಶಿಸ್ತು, ಸಮುದಾಯ ಸೇವೆ ಹಾಗೂ ಗ್ರಾಹಕ ಕೇಂದ್ರಿತ ಕಾರ್ಯಾಚರಣೆಗಳತ್ತ ಬ್ಯಾಂಕಿನ ಬದ್ಧತೆಯನ್ನು ವಿವರಿಸಿದರು. ಬದಲಾಗುತ್ತಿರುವ ಬ್ಯಾಂಕಿಂಗ್ ವಾತಾವರಣಕ್ಕೆ ಹೊಂದಿಕೊಳ್ಳುತ್ತ ತನ್ನ ಮೂಲ ಸಹಕಾರ ಮೌಲ್ಯಗಳು ಮತ್ತು ಸಂಸ್ಥಾತ್ಮಕ ಅಖಂಡತೆಯನ್ನು ಬ್ಯಾಂಕ್ ಹೇಗೆ ಉಳಿಸಿಕೊಂಡಿದೆ ಎಂಬುದನ್ನೂ ವಿವರಿಸಿದರು.
ಪರಸ್ಪರ ಸಂವಾದದ ನಂತರ ಎಂಸಿಸಿ ಬ್ಯಾಂಕಿನ ೧೧೪ ವರ್ಷಗಳ ಪರಂಪರೆಯನ್ನು ಪರಿಚಯಿಸುವ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು. ೨೦೧೮ರ ನಂತರ ಅನಿಲ್ ಲೋಬೋ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಎಂಸಿಸಿ ಬ್ಯಾಂಕ್ನಲ್ಲಿ ನಡೆದ ಪರಿವರ್ತನಾ ಹಂತದ ಕುರಿತಾದ ಮಾಹಿತಿಯನ್ನೂ ಪ್ರಸ್ತುತಪಡಿಸಲಾಯಿತು. ಬ್ಯಾಂಕಿನ ವ್ಯವಹಾರ ವಹಿವಾಟು, ಠೇವಣಿಗಳು, ಮುಂಗಡ ಸಾಲಗಳು, ಶಾಖೆಗಳ ವಿಸ್ತರಣೆ ಹಾಗೂ ತಾಂತ್ರಿಕ ಅಭಿವೃದ್ಧಿಯಲ್ಲಿ ಸಾಧಿಸಿದ ಗಣನೀಯ ಬೆಳವಣಿಗೆಗಳನ್ನು ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಾಯಿತು.
ನಂತರ ಸಂವಾದಾತ್ಮಕ ಚರ್ಚಾ ಸಭೆ ನಡೆಯಿತು. ಎರಡೂ ಬ್ಯಾಂಕುಗಳ ಪ್ರತಿನಿಧಿಗಳು ವಿವಿಧ ಸಮಕಾಲೀನ ಬ್ಯಾಂಕಿಂಗ್ ವಿಷಯಗಳು ಹಾಗೂ ಕಾರ್ಯಾಚರಣಾ ಪದ್ಧತಿಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com



