ಬೋಳಾರದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 34ನೇ ನೂತನ ಶಾಖೆ ಉದ್ಘಾಟಿಸಿ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅಭಿಪ್ರಾಯ
ಮಂಗಳೂರು: ಆತ್ಮಶಕ್ತಿ ಎಂದರೆ ಧೈರ್ಯ. ಆತ್ಮಶಕ್ತಿ ಸಹಕಾರಿ ಸಂಘದಲ್ಲಿ ಠೇವಣಿ ಇಟ್ಟರೆ ಧೈರ್ಯ ಸಿಗುತ್ತದೆ. ಆತ್ಮಶಕ್ತಿಯ ಆತ್ಮಸ್ಥೈರ್ಯದಿಂದಲೇ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅಭಿಪ್ರಾಯಪಟ್ಟರು.
ಮಂಗಳಾದೇವಿ ಸಮೀಪದ ಬೋಳಾರ ಜೆಪ್ಪು ಮಾರ್ಕೆಟ್ ಭಗಿನಿ ಸಮಾಜದ ಬಳಿಯ ಯುನಿಕ್ ಸ್ಟಿಕ್ ಕಾಂಪ್ಲೆಕ್ಸ್ನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 34ನೇ ನೂತನ ಬೋಳಾರ ಶಾಖೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
https://chat.whatsapp.com/FCEnlTkAKCC0MGPhXtX4i4
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಅವರ ಪ್ರತಿಯೊಂದು ನಡೆಯಲ್ಲಿ ಏನಾದರೊಂದು ವಿಶೇಷತೆ ಇರುತ್ತದೆ. ಆತ್ಮಶಕ್ತಿ ಎಂಬ ಹೆಸರೇ ವಿಶೇಷವಾದುದು. ಈ ಹೆಸರು ಇಟ್ಟವರನ್ನೂ ಸನ್ಮಾನಿಸಬೇಕು. ಒಂದು ಸಹಕಾರಿ ಸಂಘದ ಶಾಖೆಯ ಉದ್ಘಾಟನೆ ವೇಳೆ ಸಹಕಾರಿ ಕ್ಷೇತ್ರದ ಅಧಿಕಾರಿಗಳು ಹಾಜರಿರುವುದು ಎಂದರೆ ಆತ್ಮಶಕ್ತಿ ಸಹಕಾರಿ ಸಂಘವು ಎಷ್ಟು ಗಟ್ಟಿಯಾಗಿ ಬೆಳೆದಿದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬಹುದು ಎಂದು ಕೃಷ್ಣ ಪಾಲೆಮಾರ್ ಹೇಳಿದರು.
ಸಹಕಾರಿ ಸಂಘಗಳು ಉನ್ನತ ಮಟ್ಟದ ಸಾಧನೆ ಮಾಡಿ ಬೆಳೆಯಬೇಕಾದರೆ ಸಹಕಾರಿಗಳ ಪರಸ್ಪರ ಸಹಕಾರ ಬೇಕು. 12 ವರ್ಷದಲ್ಲಿ 34 ಶಾಖೆಗಳನ್ನು ತೆರೆಯುವುದು ಎಂದರೆ ಸಾಮಾನ್ಯದ ಮಾತಲ್ಲ. ಇದಕ್ಕೆ ಆತ್ಮಶಕ್ತಿಯ ಜೊತೆಗೆ ಆತ್ಮಸ್ಥೈರ್ಯವೂ ಬೇಕು. ಸಂಘದ ನಿರ್ದೇಶಕರಲ್ಲಿ ಆ ರೀತಿಯ ಆತ್ಮಸ್ಥೈರ್ಯ ಇರುವುದರಿಂದಲೇ ಇಷ್ಟೊಂದು ಕಡಿಮೆ ಅವಧಿಯಲ್ಲಿ 34 ಶಾಖೆ ತೆರೆದು 300 ಕೋಟಿ ರೂ. ಮೀರಿದ ಠೇವಣಿ ಸಂಗ್ರಹ ಸಾಧ್ಯವಾಗಿದೆ. ಸಂಘದ ನಿರ್ದೇಶಕರು, ಸದಸ್ಯರು ಏಕ ಮನಸ್ಸಿನಿಂದ ಸಾಮಾಜಿಕ ಕಳಕಳಿ, ಸೇವಾ ಮನೋಭಾವದಿಂದ ಕೆಲಸ ಮಾಡಿದ್ದರಿಂದ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ. ಆತ್ಮಶಕ್ತಿ ಸಹಕಾರಿ ಸಂಘದಿಂದ ಜನರಿಗೆ ಆತ್ಮಸ್ಥೈರ್ಯ ತುಂಬಿಸುವ ಕೆಲಸವಾಗಲಿ ಎಂದು ಶುಭ ಹಾರೈಸಿದರು.
ಸಮಾಜ ಸೇವಕಿ ತಾರಾ ಹೇಮಚಂದ್ರ ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು. ಭದ್ರತಾಕೋಶ ಉದ್ಘಾಟನೆ ಮಾಡಿದ ಮಂಗಳೂರು ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿಯ ಅಧ್ಯಕ್ಷರಾದ ರಂಜನ್ ಮಿಜಾರ್ ಮಾತನಾಡಿ, ಮುಂದಿನ ಐದು ವರ್ಷದಲ್ಲಿ ಆತ್ಮಶಕ್ತಿ ಸಹಕಾರಿ ಸಂಘದ ಐವತ್ತು ಶಾಖೆಗಳು ಆಗಿ ಸಾವಿರಾರು ಜನರಿಗೆ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.
ಮೈಸೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಸಿ.ಪ್ರಸಾದ್ ರೆಡ್ಡಿ ಗಣಕೀಕೃತ ಬ್ಯಾಂಕಿಂಗ್ಗೆ ಚಾಲನೆ ನೀಡಿ ಮಾತನಾಡಿ, ಆತ್ಮಶಕ್ತಿ ಸಹಕಾರ ಸಂಘದ ದೃಢಚಿತ್ತದಿಂದ ಇಷ್ಟೊಂದು ಕಡಿಮೆ ಅವಧಿಯಲ್ಲಿ 34 ಶಾಖೆ ತೆರೆಯವಂತೆ ಆಗಿದೆ. ಯಾವುದೇ ಒಂದು ಸಹಕಾರಿ ಸಂಘ ಸ್ಥಾಪನೆ ಆದಾಗ ಅದಕ್ಕೊಂದು ವಿಷನ್ ಇರುತ್ತದೆ. ಆದರೆ ಅಷ್ಟೇ ಸಾಕಾಗದು. ಸೇವಾ ಮನೋಭಾವ, ದೃಢ ಸಂಕಲ್ಪ, ಧೈರ್ಯವೂ ಬೇಕು. ಇವೆಲ್ಲವೂ ಇದ್ದರೆ ಉನ್ನತ ಸಾಧನೆ ಮಾಡಬಹುದು. ಆತ್ಮಶಕ್ತಿ ಸಹಕಾರಿ ಸಂಘವು ಅದನ್ನು ಮಾಡಿ ತೋರಿಸಿದೆ. ನಿಸ್ವಾರ್ಥ ಮನೋಭಾವದಿಂದ ಇವೆಲ್ಲವನ್ನೂ ಮಾಡಿದರೆ ಪ್ರಗತಿ ಸಾಧಿಸಲು ಸಾಧ್ಯವಿದೆ. ನಂಬಿಕೆ ಇದ್ದರಷ್ಟೇ ಒಂದು ಸಹಕಾರಿ ಸಂಘದಲ್ಲಿ ಡಿಪಾಸಿಟ್ ಇಡುತ್ತಾರೆ. ಆ ನಂಬಿಕೆ ಆತ್ಮಶಕ್ತಿ ಸಹಕಾರಿ ಸಂಘದ ಮೇಲಿರುವುದರಿಂದಲೇ ದೊಡ್ಡ ಮಟ್ಟದಲ್ಲಿ ಠೇವಣಿ ಸಂಗ್ರಹಿಸಲೂ ಸಾಧ್ಯವಾಗಿದೆ. ಆತ್ಮಶಕ್ತಿ ಸಹಕಾರಿ ಸಂಘದ ಉದ್ಯೋಗಿಗಳಲ್ಲಿ ಶೇ.95ರಷ್ಟು ಮಹಿಳಾ ಸಿಬ್ಬಂದಿಗಳೇ ಇರುವುದು ಕೂಡ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಸಂಸ್ಥೆಯ ದೂರದೃಷ್ಟಿಯನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.


ನಿರಖು ಠೇವಣಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಸರ್ವವ್ಯಾಪಿ, ಸರ್ವಸ್ಪರ್ಶಿ ಎಂಬ ಕಲ್ಪನೆಯಲ್ಲಿ ಆತ್ಮಶಕ್ತಿ ಸಹಕಾರಿ ಸಂಘದ ಕೆಲಸ ನಡೆದಿದೆ. 12 ವರ್ಷದಲ್ಲಿ 34 ಶಾಖೆ ತೆರೆಯುವುದು ಸುಲಭದ ಕೆಲಸವಲ್ಲ. ಸರ್ವವ್ಯಾಪಿ, ಸರ್ವಸ್ಪರ್ಶಿ ಎಂಬ ಕಲ್ಪನೆಯಿರುವುದರಿಂದಲೇ ಅದು ಸಾಧ್ಯವಾಗಿದೆ. ಒಂದು ಆರ್ಥಿಕ ಸಂಸ್ಥೆ ಲಾಭ ಗಳಿಕೆಯನ್ನಷ್ಟೇ ತಮ್ಮ ಕೆಲಸ ಎಂದು ಅಂದುಕೊಳ್ಳದೆ ನಿರಂತರ ಸೇವಾ ಮನೋಭಾವದಿಂದ ಕೆಲಸ ಮಾಡಿದಾಗಷ್ಟೇ ಉನ್ನತ ಪ್ರಗತಿ ದಾಖಲಿಸಬಹುದು. ಆತ್ಮಶಕ್ತಿ ಸಹಕಾರಿ ಸಂಘವು ಅದನ್ನು ಮಾಡಿ ತೋರಿಸಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್, ಹೊಸ ಶಾಖೆಗೆ ಇದುವರೆಗೆ ಮೂರು ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. ಈ ತಿಂಗಳಾಂತ್ಯದೊಳಗೆ 10 ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಇಡಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದು ಆಶಿಸಿದರು.
ಮಂಗಳಾದೇವಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಅಶೋಕ್ ಕುಮಾರ್ ಇ-ಮುದ್ರಾಂಕ ಸೇವೆಗೆ ಚಾಲನೆ ನೀಡಿದರು. ದ.ಕ ಜಿಲ್ಲಾ ಅಮೆಚೂರ್ ಕುಸ್ತಿ ಫೆಡರೇಷನ್ನ ಅಧ್ಯಕ್ಷರಾದ ದಿಲ್ರಾಜ್ ಆಳ್ವ ಭವಿಷ್ಯ ಸುರಕ್ಷಾ ಯೋಜನೆಗೆ ಚಾಲನೆ ನೀಡಿದರು. ಬಿಲ್ಲವ ಸಂಘ ಮಂಗಳಾದೇವಿಯ ಅಧ್ಯಕ್ಷರಾದ ರಾಜರತ್ನ ಸನಿಲ್ ಉಳಿತಾಯ ಖಾತೆಗೆ ಚಾಲನೆ ನೀಡಿದರು. ದ.ಕ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್ ಆವರ್ತನ ಠೇವಣಿಗೆ ಚಾಲನೆ ನೀಡಿದರು. ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಭಾನುಮತಿ ಪಿಗ್ಮಿ ಖಾತೆಗೆ ಚಾಲನೆ ನೀಡಿದರು. ಉದ್ಯಮಿ ರಮಾನಂದ ಪೂಜಾರಿ ಹಾಗೂ ಕಟ್ಟಡದ ಮಾಲಿಕರಾದ ಜೆನೆಟ್ ಮೆಲ್ವಿನ್ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ವಿಶ್ವನಾಥ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com

