ಕಂಪನಿಗಳಲ್ಲಿ ಮಾಡಿದ ಹೂಡಿಕೆ ಮೇಲಿನ ಲಾಭಾಂಶಕ್ಕೆ ವಿನಾಯಿತಿ: ಕೇಂದ್ರ ಬಜೆಟ್ ಘೋಷಣೆ
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ ಬಜೆಟ್ನಲ್ಲಿ ಸಹಕಾರಿ ವಲಯಕ್ಕೆ ಒಂದಷ್ಟು ಪೂರಕವಾದ ಅಂಶಗಳನ್ನು ಹೊಂದಿದೆ. ಸಹಕಾರಿ ವಲಯದ ಬೆನ್ನಿಗೆ ನಿಂತಿರುವ ಕೇಂದ್ರ ಸರಕಾರ ತೆರಿಗೆ ವಿನಾಯಿತಿ ಘೋಷಿಸಿದೆ.
https://chat.whatsapp.com/FCEnlTkAKCC0MGPhXtX4i4
ಇಷ್ಟರವರೆಗೆ ತೆರಿಗೆ ವಿನಾಯಿತಿಯನ್ನು ಪ್ರಾಥಮಿಕ ಸಹಕಾರಿ ಸಂಘಗಳ ಸದಸ್ಯರು ಉತ್ಪಾದಿಸಿದ ಹಾಲು, ಎಣ್ಣೆಬೀಜಗಳು, ಹಣ್ಣುಗಳು ಅಥವಾ ತರಕಾರಿಗಳನ್ನು ಪೂರೈಸುವಲ್ಲಿ ತೊಡಗಿರುವ ಸಂಘಕ್ಕೆ ಮತ್ತು ಅದೇ ಚಟುವಟಿಕೆಗಳಲ್ಲಿ ತೊಡಗಿರುವ ಇತರರಿಗೆ ನೀಡಲಾಗುತ್ತಿತ್ತು. ಪ್ರಸ್ತುತ ಇದರ ವ್ಯಾಪ್ತಿಯನ್ನು ಸದಸ್ಯರು ಉತ್ಪಾದಿಸುವ ಪಶು ಆಹಾರ ಮತ್ತು ಹತ್ತಿ ಬೀಜ ಪೂರೈಕೆಗೂ ವಿಸ್ತರಿಸಲಾಗುತ್ತಿದೆ. ಹೊಸ ತೆರಿಗೆ ಪದ್ಧತಿಯಡಿ ಸಹಕಾರಿ ಸಂಘದ ಲಾಭಾಂಶದ ಮೇಲೆಯೂ ತೆರಿಗೆ ವಿನಾಯಿತಿಯನ್ನು ವಿಸ್ತರಿಸಲಾಗಿದೆ. ಒಂದು ಸಹಕಾರ ಸಂಘವು ಬೇರೊಂದು ಸಹಕಾರ ಸಂಘದಿಂದ ಪಡೆಯುವ ಲಾಭಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಇದನ್ನು ಸದಸ್ಯರಿಗೆ ವಿತರಿಸಿದರೂ ಈ ಸೌಲಭ್ಯ ಲಭಿಸಲಿದೆ. ರಾಷ್ಟ್ರೀಯ ಸಹಕಾರ ಒಕ್ಕೂಟಗಳು ಜ.31ರವರೆಗೆ ಕಂಪನಿಗಳಲ್ಲಿ ಮಾಡಿದ ಹೂಡಿಕೆಯ ಮೇಲೆ ಬರುವ ಲಾಭಾಶಕ್ಕೆ ಮೂರು ವರ್ಷಗಳವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ತನ್ಮೂಲಕ ಗ್ರಾಮೀಣ ಆರ್ಥಿಕತೆ ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಏಪ್ರಿಲ್ 1ರಿಂದ ಹೊಸ ತೆರಿಗೆ ಕಾನೂನು
1961ರ ಹಳೆಯ ಆದಾಯ ತೆರಿಗೆ ಕಾನೂನಿನ ಬದಲಿಗೆ 2025ರ ಆದಾಯ ತೆರಿಗೆ ಕಾನೂನನ್ನು ಏಪ್ರಿಲ್ 1ರಿಂದ ಜಾರಿ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. 1961ರ ಕಾನೂನಿನ ಸಮಗ್ರ ಪರಿಶೀಲನೆ ಮಾಡುವುದಾಗಿ 2024ರ ಜುಲೈನಲ್ಲಿ ತಾವು ಪ್ರಕಟಿಸಿದ್ದು, ದಾಖಲೆಯ ಅಲ್ಪ ಅವಧಿಯಲ್ಲೇ ಅದನ್ನು ಪೂರ್ಣಗೊಳಿಸಲಾಗಿದೆ. 2026ರ ಏಪ್ರಿಲ್ 1ರಿಂದ ಅನುಷ್ಠಾನಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ. ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವಂತೆ ತೆರಿಗೆ ಫಾರ್ಮಗಗಳನ್ನು ಮರು ರೂಪಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಸಹಕಾರ ಸಚಿವಾಲಯಕ್ಕೆ 1744 ಕೋಟಿ ರೂ.
ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಸಹಕಾರ ಕ್ಷೇತ್ರಕ್ಕೆ ಈ ಬಾರಿ 1774.74 ಕೋಟಿ ರೂ. ಮೀಸಲಿಡಲಾಗಿದೆ. ದೇಶದ 67,930 ಕ್ರಿಯಾಶೀಲ ಪ್ಯಾಕ್ಸ್ಗಳ ಗಣಕೀಕರಣಕ್ಕೆ 364 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಸಹಕಾರಿ ಶಿಕ್ಷಣಕ್ಕೆ 300 ಕೋಟಿ ರೂ. ಮೀಸಲಿಡಲಾಗಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ಸಹಕಾರ ಕ್ಷೇತ್ರದ ವಿಸ್ತರಣೆಗೆ ದೊಡ್ಡ ಮೊತ್ತ ಹಂಚಿಕೆ ಮಾಡಿದ್ದು ಸಹಕಾರ ಕ್ಷೇತ್ರದತ್ತ ವಿಶೇಷ ಗಮನ ಹರಿಸಿದ್ದನ್ನು ದೃಢಪಡಿಸಿದೆ.
ಮೀನುಗಾರಿಕೆ ಕ್ಷೇತ್ರಕ್ಕೂ ಬಂಪರ್ ಕೊಡುಗೆ
ಬಜೆಟ್ನಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೂ ಬಂಪರ್ ಕೊಡುಗೆ ಘೋಷಿಸಲಾಗಿದೆ. ಒಳನಾಡು ಮೀನುಗಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ೫೦೦ ಜಲಾಶಯಗಳು ಹಾಗೂ ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ಪ್ರಕಟಿಸಲಾಗಿದೆ. ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ, ಜಲಚರ ಸಾಕಾಣೆ ಈ ವಲಯಗಳಲ್ಲಿ ಮೂಲಸೌಕರ್ಯ ಹಾಗೂ ತಂತ್ರಜ್ಞಾವನ್ನು ಮತ್ತಷ್ಟು ಸುಧಾರಿಸುವ ಮೂಲಕ ಮೀನುಗಾರಿಕಾ ವಲಯದಲ್ಲಿ ರಫ್ತು ಪ್ರಮಾಣವನ್ನು ವಿಸ್ತರಿಸಿ ಆದಾಯ ವೃದ್ಧಿಸುವ ಹಾಗೂ ಉದ್ಯೋಗಾವಕಾಶ ಹುಚ್ಚಿಸುವ ಗುರಿ ಇರಿಸಲಾಗಿದೆ. ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಉದ್ಯಮಗಳು, ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳು, ಮೀನು ಕೃಷಿಕರ ಉತ್ಪಾದಕ ಸಂಸ್ಥೆಗಳ ಮೂಲಕ ಮಾರುಕಟ್ಟೆ ಸಂಪರ್ಕವನ್ನು ಹೆಚ್ಚಿಸಿ ವಹಿವಾಟು ನಡೆಸಲು ಯೋಜನೆ ಮುಂದಿಡಲಾಗಿದೆ. ಕರಾವಳಿ ಭಾಗದ ಪ್ರಮುಖ ಆದಾಯದ ಮೂಲಗಳಲ್ಲೊಂದಾದ ಮೀನುಗಾರಿಕೆ ಹಾಗೂ ಸಮುದ್ರಾಹಾರ ಉತ್ಪನ್ನಗಳ ರಫ್ತು ಪ್ರಮಾಣ ಹೆಚ್ಚಿಸಲು ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com




