ಮೂಲ್ಕಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಹರಿಶ್ಚಂದ್ರ ಪಿ.ಸಾಲ್ಯಾನ್ ಶ್ಲಾಘನೆ
ಮೂಲ್ಕಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮೂಲ್ಕಿ ಶಾಖೆಯ ವತಿಯಿಂದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಹಾಗೂ ಶ್ರೀ ರಾಮ ಸೇವಾ ಮಂಡಳಿ ಕಾರ್ನಾಡು ಇವರ ಜಂಟಿ ಸಹಯೋಗದೊಂದಿಗೆ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವರ ನುರಿತ ತಜ್ಞ ವೈದ್ಯ ತಂಡದವರಿಂದ ಉಚಿತ ನೇತ್ರ ತಪಾಸಣಾ ಶಿಬಿರವು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಎದುರುಗಡೆಯ ನಾಗರಾಜ ಟವರ್ಸ್ನಲ್ಲಿ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಶಿಬಿರವನ್ನು ಮೂಲ್ಕಿ ನಗರ ಪಂಚಾಯತ್ನ ಮಾಜಿ ಮುಖ್ಯಾಧಿಕಾರಿ ಹಾಗೂ ಹೊಸ ಅಂಗಣ ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ.ಸಾಲ್ಯಾನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ೩೩ಕ್ಕೂ ಮಿಕ್ಕಿ ಶಾಖೆಗಳನ್ನು ಹೊಂದಿದ್ದು, ಬಹಳಷ್ಟು ಜನರಿಗೆ ಉದ್ಯೋಗವಕಾಶ ಒದಗಿಸಿಕೊಟ್ಟಿದೆ. ಪಿಗ್ಮಿ ಸಂಗ್ರಾಹಕರಿಗೂ ವಿಮಾ ಸೇವಾ ಸೌಲಭ್ಯ ಒದಗಿಸಿದೆ. ಪ್ರತಿವರ್ಷ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಮುಂದಾಳತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತ, ಸಂಘದ ಸದಸ್ಯರ ಜೊತೆಗೆ ಸಾರ್ವಜನಿಕರೂ ಇದರ ಉಪಯೋಗ ಪಡೆಯುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಇದರ ಅಧ್ಯಕ್ಷರಾದ ಲಯನ್ ಅನಿಲ್ ಕುಮಾರ್ ಮಾತನಾಡಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ವತಿಯಿಂದ ಈಗಾಗಲೇ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಈ ಬಾರಿ ಕೂಡ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದೊಂದಿಗೆ ಗುಣಮಟ್ಟದ ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಕೈ ಜೋಡಿಸಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಶ್ರೀ ರಾಮ ಸೇವಾ ಮಂಡಳಿ ಕಾರ್ನಾಡು ಮೂಲ್ಕಿ ಇದರ ಅಧ್ಯಕ್ಷರಾದ ಭಾಸ್ಕರ ಶೆಟ್ಟಿಗಾರ್ ಮಾತನಾಡಿ ಸಾರ್ವಜನಿಕರಿಗೆ ಸೇವೆ ಹಾಗೂ ಸಹಾಯ ಮಾಡುವ ಉದ್ದೇಶದಿಂದ ತಮ್ಮೊಂದಿಗೆ ಕೆಲವು ಸದಸ್ಯರನ್ನು ಒಟ್ಟುಗೂಡಿಸಿ ಈ ಬಾರಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದೊಂದಿಗೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕಾರ್ಯ ಮಾಡಲು ಶ್ರೀ ರಾಮ ಸೇವಾ ಮಂಡಳಿ ರವರಿಗೆ ಅವಕಾಶ ನೀಡರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ವರ್ಷ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆರೋಗ್ಯ ಶಿಬಿರ ಏರ್ಪಡಿಸುತ್ತ ಬಂದಿದ್ದು, ಈ ಶಿಬಿರವು ಸಾರ್ವಜನಿಕರಿಗೆ ತುಂಬ ಪ್ರಯೋಜನಕಾರಿಯಾಗಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕಳೆದ ೧೦ ವರ್ಷಗಳಿಂದ ನಿರಂತರವಾಗಿ ಆರೋಗ್ಯ ಶಿಬಿರ ನಡೆಯುತ್ತಿದ್ದು ಇದು ಸಂಘದ ೯೩ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ಮುಂಬರುವ ದಿನಗಳಲ್ಲಿ ೧೦೦ನೇ ವೈದ್ಯಕೀಯ ಶಿಬಿರವನ್ನು ವ್ಯವಸ್ಥಿತವಾಗಿ ಬಹಳ ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಲಾಗುವುದು. ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಕಾರುಣ್ಯ ಟ್ರಾವೆಲ್ಸ್ ಮಾಲಕರಾದ ಅನಿಲ್ ಕುಮಾರ್ ಕೊಲಕಾಡಿ, ಶ್ರೀ ರಾಮ ಸೇವಾ ಮಂಡಳಿ ಕಾರ್ನಾಡು ಇದರ ಕಾರ್ಯದರ್ಶಿ ಕೇಶವ ಸುವರ್ಣ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇದರ ವೈದ್ಯರಾದ ಡಾ.ಮೇಘನಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ಮೋಹನ್ದಾಸ್, ಎಲ್ಲಾ ಸಂಘ-ಸಂಸ್ಥೆಗಳ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ನೇತ್ರ ತಪಾಸಣೆ ನಡೆಸಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖಾಧಿಕಾರಿ ಭಾಗ್ಯಶ್ರೀ ಸ್ವಾಗತಿಸಿ, ಶಾಖಾಧಿಕಾರಿ ರಮ್ಯಾ ವಂದಿಸಿದರು. ಶಾಖಾಧಿಕಾರಿ ಚೈತ್ರಾ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

