ಮಡಂತ್ಯಾರಿನಲ್ಲಿ ಜಿಲ್ಲಾಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿಕೆ
ಬೆಳ್ತಂಗಡಿ: ಕರಾವಳಿ ಭಾಗದ ಸಹಕಾರಿ ಪಿತಾಮಹ ಎನಿಸಿಕೊಂಡ ಮೊಳಹಳ್ಳಿ ಶಿವರಾಯರಿಂದ ಬೆಳೆದುಬಂದ ಸಹಕಾರ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಅನೇಕ ಕೊಡುಗೆಗಳನ್ನು ನೀಡಿದ್ದು ಈ ಕ್ಷೇತ್ರಕ್ಕೆ ಮೆರುಗನ್ನು ನೀಡುತ್ತಿದ್ದಾರೆ. ಒಂದು ಕಾಲದಲ್ಲಿ ಸೂರಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ ಅನೇಕ ಸಹಕಾರಿ ಸಂಘಗಳ ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 170ರಷ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಇಂದು ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸುವಂತಾಗಲು ಡಾ.ರಾಜೇಂದ್ರ ಕುಮಾರ್ ಅವರ ಕೊಡುಗೆ ಸಾಕಷ್ಟಿದೆ ಎಂದು ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅಭಿಪ್ರಾಯಪಟ್ಟರು.
https://chat.whatsapp.com/JVAtKKe2M19AFO3W5629ZS?mode=ems_copy_t
ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯ ಕಾರ್ಯಕ್ರಮವನ್ನು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಅಧಿಕಾರಿಗಳ, ಆಡಳಿತ ಮಂಡಳಿಯ ಸೇವೆಯು ಸಹಕಾರಿ ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರ್ಥಿಕ ಭದ್ರತೆ ಮೂಡಿಸುವುದರ ಜತೆಗೆ ಸಹಕಾರಿ ತತ್ವವನ್ನು ಪಾಲಿಸಿಕೊಂಡು ಮುನ್ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರವು ಇಂದು ದೇಶಕ್ಕೆ ಮಾದರಿಯಾಗಿ ಬೆಳೆದಿದೆ. ಇಲ್ಲಿನ ಸಹಕಾರಿ ಸಂಘಗಳು ಬಾನೆತ್ತರಕ್ಕೆ ಬೆಳೆದು ನಿಲ್ಲಲು ಕಾರಣ ಅವುಗಳ ಸದಸ್ಯರು ಶ್ಲಾಘಿಸಿದರು. ಹಿರಿಯರ ಮಾರ್ಗದರ್ಶನ, ತ್ಯಾಗದ ಫಲದಿಂದ ಇಲ್ಲಿನ ಸಹಕಾರಿ ಸಂಘಗಳು ಬೆಳೆದು ನಿಂತಿವೆ. ಇಂದಿನ ದಿನಗಳಲ್ಲಿ ಯುವಜನರು ಸಹಕಾರಿ ರಂಗದತ್ತ ಆಕರ್ಷಿತರಾಗುತ್ತಿರುವುದು ಶ್ಲಾಘನೀಯ. ದೇಶದ ಅತ್ಯಂತ ಶಕ್ತಿಶಾಲಿಯಾದ ಸಹಕಾರಿ ರಂಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಿನ ಬಲ ತುಂಬುವ ಜತೆ ಕೃಷಿಕರಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದರು.
ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜೋಯೆಲ್ ಮೆಂಡೋನ್ಸಾ ಮಾತನಾಡಿ ಸಹಕಾರಿ ರಂಗವು ಸ್ವಉದ್ಯೋಗ ಕೃಷಿ ಅಭಿವೃದ್ಧಿಯೊಂದಿಗೆ ದೇಶವನ್ನು ಬೆಳೆಸುತ್ತಿದೆ ಎಂದರು.



ಸಹಕಾರಿ, ಕೃಷಿ, ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ 179 ಮಂದಿಯನ್ನು ಸನ್ಮಾನಿಸಲಾಯಿತು. ಮಡಂತ್ಯಾರು ಪೇಟೆಯಿಂದ ಸಹಕಾರಿ ಜಾಥಾ ಜರಗಿತು. ಪುರಾತನ ಕೃಷಿ ಸಾಮಗ್ರಿ, ಆಧುನಿಕ ಕೃಷಿ ಸಾಮಗ್ರಿ ಸಹಿತ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿಚಾರ ಮಂಡನೆಯನ್ನು ಮೂಡುಬಿದಿರೆ ಧವಳಾ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಸಂತೋಷ ಶೆಟ್ಟಿ ನಡೆಸಿಕೊಟ್ಟರು. ಸಹಕಾರಿ ಕ್ಷೇತ್ರಕ್ಕೆ ಒಬ್ಬ ಎಂಎಲ್ ಸಿಯನ್ನು ಆಯ್ಕೆ ಮಾಡಲು ಅವಕಾಶ ನೀಡಬೇಕೆಂದು ಮುಂಡಾಜೆ ಪ್ಯಾಕ್ಸ್ ವತಿಯಿಂದ ಸಹಕಾರಿ ಸಚಿವರಿಗೆ, ಸಂಸದರಿಗೆ, ಶಾಸಕರಿಗೆ ಹಾಗೂ ಸಹಕಾರಿ ಅಧಿಕಾರಿಗಳಿಗೆ ಮನವಿ ನೀಡಲಾಯಿತು.
ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಪಿ.ಕುಶಾಲಪ್ಪ ಗೌಡ, ಜಿಲ್ಲಾ ಹಾಲು ಒಕ್ಕೂಟದ ಪ್ರಭಾಕರ ಆರಂಬೋಡಿ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್, ಪುತ್ತೂರು ವಿಭಾಗದ ಸಹಾಯಕ ನಿಬಂಧಕ ಎಸ್.ಎಂ.ರಘು, ಸಿಡಿಒ ಪ್ರತಿಮಾ, ಮಾಲಾಡಿ ಗ್ರಾಪಂ ಅಧ್ಯಕ್ಷ ಪುನೀತ್ ಕುಮಾರ್, ಮಡಂತ್ಯಾರು ಗ್ರಾಪಂ ಅಧ್ಯಕ್ಷೆ ರೂಪಾ ನವೀನ್, ಮಡಂತ್ಯಾರು ಚರ್ಚಿನ ಧರ್ಮಗುರು ಡಾ.ಸ್ಟ್ಯಾನಿ ಗೋವಿಯಸ್, ಕೆಮ್ಮಾಜೆ ಮಸೀದಿ ಅಧ್ಯಕ್ಷ ಎ.ಪಿ.ಅಶ್ರಫ್ ಮುಸ್ಲಿಯಾರ್, ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ನೀಲಯ ಎಂ.ಅಗರಿ, ತಾಲೂಕಿನ 24 ಫ್ಯಾಕ್ಸ್ ಗಳ ಅಧ್ಯಕ್ಷರು, ಮಡಂತ್ಯಾರು ಪ್ಯಾಕ್ಸ್ ಸಿಇಒ ಜೋಕಿಂ ಡಿಸೋಜ ಉಪಸ್ಥಿತರಿದ್ದರು.
ಎಸ್ ಕೆ ಡಿ ಆರ್ ಡಿ ಪಿಯ ಕೃಷಿ ಅಧಿಕಾರಿ ಅಬ್ರಹಾಂ ಸಹಕಾರಿ ಜಾಥಾಕ್ಕೆ ಚಾಲನೆ ನೀಡಿದರು.
ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಎಸ್.ವಿ. ಹಿರೇಮಠ ವಂದಿಸಿದರು.

