ಗ್ರಾಹಕರ ಸಮಾವೇಶದಲ್ಲಿ ಎಸ್.ಕೆ ಗೋಲ್ಡ್ಸ್ಮಿತ್ಸ್ ಸೊಸೈಟಿಯ ಅಧ್ಯಕ್ಷ ಉಪೇಂದ್ರ ಆಚಾರ್ಯ ಅಭಿಪ್ರಾಯ
ಪುತ್ತೂರು: ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ಪ್ರಯುಕ್ತ ಪುತ್ತೂರು ಶಾಖೆಯ ಸದಸ್ಯ ಗ್ರಾಹಕರ ಸಮಾವೇಶ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯರು, ಸದಸ್ಯ ಗ್ರಾಹಕರಿಗೆ ಎರಡು ಲಕ್ಷ ರೂ.ನ ವಿಮೆ ಮಾಡಿಸಲಾಗಿದೆ. ಗ್ರಾಹಕರು ಹಾಗೂ ಬ್ಯಾಂಕಿನ ಬಾಂಧವ್ಯ ಹೀಗೆಯೇ ಮುಂದುವರಿಯಲಿ. ಸಂಸ್ಥೆಯ ಬೆಳವಣಿಗೆಗೆ ಗ್ರಾಹಕರು ಕಾರಣರಾಗಿದ್ದೀರಿ ಎಂದು ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಮುಖ್ಯ ಅತಿಥಿಯಾಗಿದ್ದ ಚಿದಾನಂದ ಬೈಲಾಡಿ ಮಾತನಾಡಿ, ಸಹಕಾರ ಬ್ಯಾಂಕ್ಗಳು ಕರಾವಳಿಯ ಗ್ರಾಹಕರ ಜೀವನಾಡಿಯಾಗಿ ಕೆಲಸ ನಿರ್ವಹಿಸುತ್ತಿವೆ. ಈ ಸಂಬಂಧವನ್ನು ಕೃಷ್ಣ -ಕುಚೇಲರಿಗೆ ಹೋಲಿಸಬಹುದು. ಕೃಷ್ಣ ಹಾಗೂ ಕುಚೇಲರ ನಡುವೆ ಇದ್ದ ಸಮಾನತೆಯನ್ನು ಇಲ್ಲಿ ನಾವು ಕಾಣಬಹುದು. ಎಸ್.ಕೆ. ಗೋಲ್ಡ್ಸ್ಮಿತ್ಸ್ ಸೊಸೈಟಿಯು ಗ್ರಾಹಕರನ್ನು ದೇವರ ಹಾಗೆ ಕಾಣುತ್ತಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಪರಿಣಾಮ ಸೊಸೈಟಿ 5 ಬಾರಿ ಸಾಧನಾ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ ಎಂದು ಶ್ಲಾಘಿಸಿದರು.

ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಿಗುವ ಸೇವೆಗೂ ಸಹಕಾರಿ ಸಂಘಗಳ ಸೇವೆಗೂ ಅಜಗಜಾಂತರ ವ್ಯತ್ಯಾಸವಿದೆ. ಗ್ರಾಹಕರಿಗೆ ಕೆಲವೇ ಗಂಟೆಗಳಲ್ಲಿ ಸೇವೆ ಸಿಕ್ಕಿದ್ದರೆ ಅದು ಸಹಕಾರ ಸಂಘಗಳಿಂದ ಮಾತ್ರ. ಸಹಕಾರ ಕ್ಷೇತ್ರವನ್ನು ಗ್ರಾಹಕರು ಉಳಿಸಿ ಬೆಳೆಸಬೇಕು. ಆಗ ಸಹಕಾರ ಕ್ಷೇತ್ರವು ಗ್ರಾಹಕರನ್ನು ಬೆಳೆಸುತ್ತದೆ ಎಂದರು.
ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಆಚಾರ್ಯ ಕೆ. ಮಾತನಾಡಿ, ಎಸ್.ಕೆ. ಗೋಲ್ಡ್ಸ್ಮಿತ್ಸ್ ಸೊಸೈಟಿಯ ಪುತ್ತೂರು ಶಾಖೆಗೆ 48 ವರ್ಷ. ಇದರಲ್ಲಿ ಕಳೆದ 47 ವರ್ಷಗಳಿಂದ ಬ್ಯಾಂಕ್ ಜೊತೆ ವ್ಯವಹಾರ ಸಂಬಂಧ ಇಟ್ಟುಕೊಂಡಿದ್ದೇನೆ. ಈ ಸಂಸ್ಥೆ ರಾಜ್ಯವ್ಯಾಪಿ ಹರಡಲಿ. ಮುಂದಿನ ಕೆಲ ಸಮಯಗಳಲ್ಲೇ ಸಂಸ್ಥೆಗೆ ಸ್ವಂತ ಕಟ್ಟಡ ಲಭಿಸಲಿದೆ ಎಂದರು.

ಅನಿಸಿಕೆ ವ್ಯಕ್ತಪಡಿಸಿದ ಗ್ರಾಹಕ ಉಮೇಶ್, ಸಹಕಾರ ಸಂಘಗಳು ಹೇಗೆಂದರೆ ನೀರಲ್ಲಿ ಹೋಗುತ್ತಿದ್ದವನಿಗೆ ಹುಲ್ಲು ಕಡ್ಡಿ ಸಿಕ್ಕಿದಂತೆ. ಕೆಲವು ಸಂದರ್ಭ ನಾವು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕುತ್ತೇವೆ. ಆದರೆ ನಮ್ಮ ಪ್ರಾಮಾಣಿಕತೆ ಬಿಡಬಾರದು. ಅದು ನಮ್ಮನ್ನು ಜೀವನದಲ್ಲಿ ಯಶಸ್ವಿ ಆಗುವಂತೆ ಮಾಡುತ್ತದೆ. ಒಂದು ಕಾಲದಲ್ಲಿ ಸೈಕಲ್ ನಲ್ಲಿ ಹೋಗಲು ಕಷ್ಟ ಪಡುವ ದಿನವಿತ್ತು. ಆದರೆ ಇಂದು ಕಾರಲ್ಲಿ ಹೋಗುತ್ತಿರಬೇಕಾದರೆ ಅದಕ್ಕೆ ಎಸ್.ಕೆ.ಜಿ.ಐ. ಕಾರಣ ಎಂದರು.
ಕೆ.ಎಸ್.ಆರ್.ಟಿ.ಸಿ. ನಿವೃತ್ತ ಅಧಿಕಾರಿ ಆರ್.ಸಿ.ನಾಗರಾಜ್ ಮಾತನಾಡಿ, ಪುತ್ತೂರಿನ ಸಹಕಾರ ರಂಗದಲ್ಲಿ ಎಸ್.ಕೆ.ಜಿ.ಐ ಬ್ಯಾಂಕ್ ನೀಡಿದ ಸೇವೆ ಅನನ್ಯ. ಇಲ್ಲಿಯ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಿರುವುದರಿಂದ ಸಂಸ್ಥೆಯ ಮೇಲೆ ಪ್ರೀತಿ ಹೆಚ್ಚಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ, 1964ರಲ್ಲಿ ಪ್ರಾರಂಭವಾದ ಸಂಸ್ಥೆ ಸದಸ್ಯ ಗ್ರಾಹಕರ ಸಹಕಾರದಿಂದ ದೊಡ್ಡದಾಗಿ ಬೆಳೆದು ನಿಂತಿದೆ. ಪುತ್ತೂರು ಶಾಖೆ 1.3 ಕೋಟಿ ರೂ.ನಷ್ಟು ಲಾಭ ಗಳಿಸಿದೆ. ಆರ್ಥಿಕ ದೃಷ್ಟಿಕೋನದ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಕಳಕಳಿಯನ್ನು ನಿಭಾಯಿಸುತ್ತ ಬಂದಿದೆ ಎಂದರು.
ಇದೇ ಸಂದರ್ಭ ಠೇವಣಿದಾರರು ಹಾಗೂ ಗ್ರಾಹಕರನ್ನು ಸನ್ಮಾನಿಸಲಾಯಿತು. ಠೇವಣಿದಾರರ ಪರವಾಗಿ ದಾಮೋದರ್, ಪುರುಷೋತ್ತಮ್ ನೈತ್ತಾಡಿ ಅನಿಸಿಕೆ ವ್ಯಕ್ತಪಡಿಸಿದರು. ರಾಜೇಶ್ ಪ್ರಾರ್ಥಿಸಿ, ಸಂಸ್ಥೆಯ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಸ್ವಾಗತಿಸಿದರು. ಪುತ್ತೂರು ಶಾಖೆಯ ವ್ಯವಸ್ಥಾಪಕ ಕಿರಣ್ ಬಿ.ವಿ. ವಂದಿಸಿದರು. ಕಿಶನ್ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com






