ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ
ಬಂಟ್ವಾಳ: ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ಅಡಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಸಹಕಾರಿಗಳು ಮತ್ತು ಗ್ರಾಹಕರಿಗೆ ದೇಶೀಯ ಉತ್ಪನ್ನಗಳ ಉತ್ಪಾದನೆ, ಬಳಕೆಗೆ ಹಾಗೂ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬದಲಾಗಿ ಸಾವಯವ ಗೊಬ್ಬರಗಳ ಬಳಕೆಗೆ ಉತ್ತೇಜನ ನೀಡಿದಾಗ ಭಾರತದ ಜಿಡಿಪಿ ಏರಿಕೆಯಾಗಿ ಪ್ರಾಥಮಿಕ ಸಹಕಾರ ಸಂಘಗಳು ಬಲವರ್ಧನೆಯಾಗುವುದರೊಂದಿಗೆ ಭಾರತ ಜಗತ್ತಿನಲ್ಲಿಯೇ ಅಗ್ರರಾಷ್ಟ್ರವಾಗಿ ಹೊರ ಹೊಮ್ಮಲ್ಲಿದ್ದು ಸಹಕಾರ ಸಂಘಗಳು ದೇಶೀಯ ಉತ್ಪನ್ನಗಳ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಸಹಕರಿಸಬೇಕು ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರಗಿದ ಸಂಘದ 2024-25ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ಗತವರ್ಷದಲ್ಲಿ ವಿವಿಧ ರೀತಿಯಲ್ಲಿ 122 ಕೋಟಿ ರೂ. ಸಾಲ ವಿತರಿಸಿ, 545 ಕೋಟಿ ರೂ. ವ್ಯವಹಾರದೊಂದಿಗೆ 1.93 ಕೋಟಿ ರೂ. ಲಾಭ ಗಳಿಸಿ ಸಂಘದ ಸದಸ್ಯರಿಗೆ ಶೇ.11ರಷ್ಟು ಲಾಭಾಂಶ ನೀಡಲಾಗುವುದು ಎಂದರು.
ಸಂಘದಲ್ಲಿ 3611 ‘ಎ’ ತರಗತಿ ಸದಸ್ಯರು, 1921 ‘ಡಿ ‘ ತರಗತಿ ಸದಸ್ಯರು ಸೇರಿದಂತೆ ಒಟ್ಟು 5532 ಸದಸ್ಯರನ್ನು ಹೊಂದಿದ್ದು, ವರದಿ ವರ್ಷದಲ್ಲಿ 2153 ಮಂದಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 47.40 ಕೋಟಿ ಸಾಲವನ್ನು ಮಂಗಳಾ ಕಿಸಾನ್ ಕಾರ್ಡ್ ಮೂಲಕ ವಿತರಿಸಲಾಗಿದ್ದು, ಶೇ.3 ಬಡ್ಡಿದರದಲ್ಲಿ ಕೃಷಿ ಅಭಿವೃದ್ದಿಗಾಗಿ 266 ಮಂದಿ ರೈತರಿಗೆ 8.28 ಕೋಟಿ ಸಾಲ ನೀಡಲಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಸುಗಳ ನಿರ್ವಹಣೆಗಾಗಿ ಶೂನ್ಯ ಬಡ್ಡಿದರದಲ್ಲಿ 3.91 ಕೋಟಿ ನೀಡಲಾಗಿದೆ. ಜಮೀನು ಅಡಮಾನ ಸಾಲ ಮತ್ತು ವೈಯಕ್ತಿಕ ಸಾಲ ಸೇರಿದಂತೆ ಒಟ್ಟು 19.08 ಕೋಟಿ ಸಾಲ ವಿತರಿಸಲಾಗಿದೆ. ಒಟ್ಟಿನಲ್ಲಿ 2419 ಸದಸ್ಯರಿಗೆ 123.33 ಕೋಟಿ ಸಾಲ ನೀಡಲಾಗಿದೆ ಎಂದರು.

ಸಂಘವು ನಿರಂತರವಾಗಿ ಪ್ರಗತಿ ಸಾಧಿಸಿದ್ದಕ್ಕಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೆಚ್ಚುಗೆ ವ್ಯಕ್ತ ಪಡಿಸಿದೆ. ಸತತವಾಗಿ ಈ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿದೆ. 2024-25ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಯನ್ವಯ 449 ಕುಟುಂಬಗಳ 1486 ಸದಸ್ಯರು ನೋಂದಣಿ ಮಾಡಿಸಲಾಗಿದ್ದು, ಒಟ್ಟು 2.70 ಲಕ್ಷ ಪ್ರೀಮಿಯಂ ಮೊತ್ತವನ್ನು ಸರಕಾರಕ್ಕೆ ಪಾವತಿಸಲಾಗಿದೆ ಎಂದು ಹೇಳಿದರು.
ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ‘ಎ’ ಗ್ರೇಡ್ ಬಂದಿದ್ದು, ಶೇ.98 ಸಾಲ ವಸೂಲಾತಿ ಪ್ರಗತಿ ಸಾಧಿಸಲಾಗಿದ್ದು , ಪ್ರಸಕ್ತ ಸಾಲಿನಲ್ಲಿ ಶೇ.100 ಸಾಲ ವಸೂಲಾತಿ ಸಾಧಿಸುವಲ್ಲಿ ಸದಸ್ಯರು ಸಹಕಾರ ನೀಡಬೇಕೆಂದರು.

ನುಡಿನಮನ, ಶ್ರದ್ದಾಂಜಲಿ
ಇತ್ತೀಚಿಗೆ ನಿಧನರಾದ ಸಂಘದ ನಿವೃತ್ತ ಸಿಬ್ಬಂದಿ ಜನಾರ್ಧನ ಶೆಟ್ಟಿಗಾರ್ ಅವರಿಗೆ ಶ್ರದ್ದಾಂಜಲಿ ಹಾಗೂ
ಸಂಘದಲ್ಲಿ ಸದಸ್ಯರಾಗಿದ್ದು, ಮರಣ ಹೊಂದಿದ 36 ಸದಸ್ಯರಿಗೆ ಮಹಾಸಭೆಯಲ್ಲಿ ನುಡಿನಮನ ಸಲ್ಲಿಸಲಾಯಿತು.
ಸಂಘದ ವ್ಯಾಪ್ತಿಯ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಒತ್ತು ನೀಡುವ ಉದ್ದೇಶದಿಂದ ಸ್ವಾವಲಂಬನೆ ಬದುಕು ನಿರ್ವಹಿಸಲು ಪ್ರೋತ್ಸಾಹ ನೀಡುವ ಹಿನ್ನಲೆಯಲ್ಲಿ ಸುಮಾರು 60 ಮಂದಿ ಮಹಿಳೆಯರಿಗೆ ಉಚಿತ ಮಂಗಳೂರು ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಸಹಯೋಗದಲ್ಲಿ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯನ್ನು ರೋಟರಿ ಕ್ಲಬ್ ಸಹಯೋಗದಲ್ಲಿ ಸಂಘದ ಸಭಾಂಗಣದಲ್ಲಿ ಸಂಘದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ.
ಸಾಲ ಮಿತಿ ಹೆಚ್ಚಳ ಬಗ್ಗೆ ಸರಕಾರದ ಸುತ್ತೋಲೆ ಅನುಷ್ಠಾನಕ್ಕೆ ಒತ್ತಾಯ
0% ಸಾಲ 3 ಲಕ್ಷದಿಂದ-5 ಲಕ್ಷ ಶೇ. 3ರ ಬಡ್ಡಿ ದರದ 10 ಲಕ್ಷದಿಂದ 15 ಲಕ್ಷವರೆಗಿನ ಸಾಲ ಮಿತಿಯ ಬಗ್ಗೆ ಸರಕಾರದ ಸುತ್ತೋಲೆ ಅನುಷ್ಠಾನಕ್ಕೆ ಮತ್ತು ಬಾಕಿ ಸಾಲ ಮನ್ನಾ ಹಣ ಬಿಡುಗಡೆಗೆ ಸದಸ್ಯರು
ಬೇಡಿಕೆ ಸಲ್ಲಿಸಿದರು.
ಸಾಧಕರಿಗೆ ಸನ್ಮಾನ, ಅಭಿನಂದನೆ
ಸಿದ್ದಕಟ್ಟೆ ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿರುವ ಶ್ರೀನಿವಾಸ ನಾಯ್ಕ ಮತ್ತು ಪಶುಪಾಲನೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕಾಂತಪ್ಪ ನಾಯ್ಕ ಹಾಗೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಯಶೋಧರ ಶೆಟ್ಟಿಗಾರ್ ಅವರನ್ನು ಗೌರವಿಸಿ ಅಭಿನಂದಿಸಿದರು.
ಪ್ರಧಾನ ಕಛೇರಿ ಸೇರಿದಂತೆ ರಾಯಿ, ಆರಂಬೋಡಿ, ಮಾವಿನಕಟ್ಟೆ, ಅರಳ ಶಾಖೆಗಳು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು, ಸದಸ್ಯರ ಪ್ರತಿಕ್ರಿಯೆ ಧನಾತ್ಮಕವಾಗಿ ಲಾಭದತ್ತ ಸಾಗುತ್ತಿದೆ. ನಿರ್ದೇಶಕರಾದ ಸತೀಶ್ ಪೂಜಾರಿ, ದಿನೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ, ವೀರಪ್ಪ ಪರವ, ಜಾರಪ್ಪ ನಾಯ್ಕ, ಮಂದರಾತಿ ಎಸ್ ಶೆಟ್ಟಿ, ಪುಷ್ಪಲತಾ ಎಸ್ ಆರ್, ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ, ನವೀನ್ ಹೆಗ್ಡೆ ಉಪಸ್ಥಿತರಿದ್ದರು. ಮಹಾಸಭೆಯಲ್ಲಿ ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ರತ್ನಕುಮಾರ್ ಚೌಟ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಕುಮಾರ್ ಸಂಗಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ ಕುಲಾಲ್, ಪ್ರಮುಖರಾದ, ಸಂದೀಪ್ ಶೆಟ್ಟಿ ಪೊಡುಂಬ, ಕಿರಣ್ ಕುಮಾರ್ ಮಂಜಿಲ, ಡಾ! ಶ್ರೀಧರ್ ಶೆಟ್ಟಿ, ಲಕ್ಷ್ಮೀಧರ ಶೆಟ್ಟಿ, ಜಗದೀಶ್ ಆಳ್ವ, ರಂಜನ್ ಕುಮಾರ್ ಶೆಟ್ಟಿ, ಲಿಂಗಪ್ಪ ಪೂಜಾರಿ, ನಾರಾಯಣ ನಾಯಕ್ ಕೆ, ಸದಾಶಿವ ಕರ್ಪೆ, ಹರೀಶ್ ಆಚಾರ್ಯ, ಉಮೇಶ್ ಗೌಡ, ಅರುಣಾ ಶೆಟ್ಟಿ, ವಸಂತ ಕುಮಾರ್ ಅಣ್ಣಳಿಕೆ, ವಸಂತ ಗೌಡ, ಮಾಧವ ಶೆಟ್ಟಿಗಾರ್, ಚಂದ್ರಶೇಖರ ಗೌಡ, ಗೋಪಾಲ ರೈ, ಜಯರಾಮ ಅಡಪ, ವಸಂತ ಕುಮಾರ್ ಜೈನ್, ಮೈಕಲ್ ಡಿಕೋಸ್ತ, ರಾಜೇಶ್ ಶೆಟ್ಟಿ ಸೀತಾಳ, ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ವಾರ್ಷಿಕ ವರದಿ ಮಂಡಿಸಿ ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ ಸ್ವಾಗತಿಸಿ, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಶ್ಮಿತ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

