ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಶ್ಲಾಘನೆ
ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದಿಂದ ವಿದ್ಯಾನಿಧಿ-ಧನಸಹಾಯ ವಿತರಣೆ
ಪುತ್ತೂರು: ಆರ್ಥಿಕವಾಗಿ ಹಿಂದುಳಿದ ಸರಕಾರಿ ಪ್ರಾಥಮಿಕ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ವರ್ಷಂಪ್ರತಿಯಂತೆ ಸಂಘದ ‘ಧರ್ಮಾರ್ಥ’ ಮತ್ತು ‘ವಿದ್ಯಾಸಂಸ್ಥೆʼ ನಿಧಿಯಿಂದ ಧನಸಹಾಯ ವಿತರಣೆ ನೀಡುವ ವಿಶೇಷ ಕಾರ್ಯಕ್ರಮ ಶನಿವಾರ ದರ್ಬೆ ಪ್ರಶಾಂತ್ ಮಹಲ್ ಸನ್ನಿಧಿ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲೊಟ್ಟು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಸವಣೂರು ಸೀತಾರಾಮ ರೈಯವರು ತಮ್ಮ ಬಾಲ್ಯ ಜೀವನದಲ್ಲಿ ತುಂಬಾ ಕಷ್ಟಪಟ್ಟು ಓದಿ, ಇಂದು ಉನ್ನತವಾದ ಸ್ಥಾನದಲ್ಲಿದ್ದಾರೆ. ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಸಿಗಲೆಂಬ ನಿಟ್ಟಿನಲ್ಲಿ ಅವರು ತಮ್ಮ ಆದರ್ಶ ಸಹಕಾರ ಸಂಸ್ಥೆಯ ಮೂಲಕ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಭ ಮಾಡಿರುವುದು ಉತ್ತಮವಾದ ಕಾರ್ಯವಾಗಿದೆ. ಆದರ್ಶ ಸಹಕಾರ ಸಂಸ್ಥೆಯನ್ನು ಆದರ್ಶಯುತವಾಗಿ ಬೆಳೆಸಿರುವ ಸವಣೂರು ಸೀತಾರಾಮ ರೈಯವರ ಶ್ರಮವನ್ನು ನಾವೆಲ್ಲರೂ ಮೆಚ್ಚಬೇಕು ಎಂದು ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ.ರೈಯವರು ಮಾತನಾಡಿ ಸರಕಾರಿ ಶಾಲೆಗಳಲ್ಲಿ ಕಲಿಯುವ ಬಡ ಮಕ್ಕಳ ಕಲಿಕೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸವಣೂರು ಕೆ.ಸೀತಾರಾಮ ರೈಯವರು ತಮ್ಮ ಆದರ್ಶ ಸಹಕಾರ ಸಂಸ್ಥೆಯ ಮೂಲಕ ವಿದ್ಯಾನಿಧಿ-ಧನಸಹಾಯ ಯೋಜನೆಯನ್ನು ಆರಂಭಿಸಿರುವುದು ಪುಣ್ಯದ ಕೆಲಸವಾಗಿದೆ ಎಂದು ಹೇಳಿದರು.

ಯೋಜನೆ ಭಾರೀ ಪ್ರಯೋಜನಕಾರಿ
ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ.ಜಯರಾಮ ರೈಯವರು ಮಾತನಾಡಿ, ಮಧ್ಯಮ ವರ್ಗದ ಮಕ್ಕಳು ಹೆಚ್ಚಾಗಿ ಕಲಿಯುತ್ತಿರುವ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸವಣೂರು ಸೀತಾರಾಮ ರೈಯವರು ಪ್ರಾರಂಭ ಮಾಡಿರುವ ವಿದ್ಯಾನಿಧಿ-ಧನಸಹಾಯ ಯೋಜನೆ ಭಾರೀ ಪ್ರಯೋಜನಕಾರಿಯಾಗಿದೆ. ಸೀತಾರಾಮ ರೈಯವರು ಆದರ್ಶ ಸಹಕಾರ ಸಂಸ್ಥೆಯನ್ನು ಜಿಲ್ಲಾಮಟ್ಟದಲ್ಲಿ ಉತ್ತಮ ರೀತಿಯಲ್ಲಿ ಕಟ್ಟಿ ಬೆಳೆಸಿದ್ದಾರೆ. ಈ ಸಂಸ್ಥೆಯ ಮೂಲಕ ಮತ್ತಷ್ಟು ಸೇವಾಕಾರ್ಯಗಳು ನಡೆಯಲಿ ಎಂದು ಆಶಿಸಿದರು.
ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಆದರ್ಶ ಸಹಕಾರ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮಂಗಳೂರು ಮತ್ತು ಈಶ್ವರಮಂಗಲದಲ್ಲಿ ಶಾಖೆಗಳನ್ನು ಆರಂಭಿಸಲಿದೆ. ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಬಿಸಿದ್ದೇವೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ನಿರ್ದೇಶಕ ಅಶ್ವಿನ್ ಎಲ್.ಶೆಟ್ಟಿ, ಮಹಾಪ್ರಬಂಧಕ ವಸಂತ ಜಾಲಾಡಿ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com









