ತುಮಕೂರು: ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಎನ್ ರಾಜಣ್ಣ ಬೆಂಬಲಿಗರು ಭರ್ಜರಿ ಜಯಭೇರಿ ದಾಖಲಿಸಿದ್ದಾರೆ. ಎಲ್ಲ 14 ಸ್ಥಾನದಲ್ಲೂ ಕೆ.ಎನ್.ರಾಜಣ್ಣ ಬೆಂಬಲಿಗರು ಆಯ್ಕೆಯಾಗುವ ಮೂಲಕ ಏಳನೇ ಬಾರಿ ತುಮಕೂರು ಡಿಸಿಸಿ ಬ್ಯಾಂಕ್ನಲ್ಲಿ ರಾಜಣ್ಣ ಹಿಡಿತ ಸಾಧಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಎಂಟು ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದ್ದು ಆರು ಸ್ಥಾನಗಳಿಗೆ ಮತದಾನ ನಡೆಯಿತು. 14 ನಿರ್ದೇಶಕರ ಸ್ಥಾನಗಳ ಪೈಕಿ ಎ ಕೆಟಗರಿಯ ನಾಲ್ವರು, ಬಿ, ಸಿ, ಡಿ ಹಾಗೂ ಡಿ1 ಕೆಟಗರಿಯ ತಲಾ ಓರ್ವ ನಿರ್ದೇಶಕ ಸ್ಥಾನ ಸೇರಿ ಒಟ್ಟು ಎಂಟು ನಿರ್ದೇಶಕರ ಅವಿರೋಧ ಆಯ್ಕೆಯಾಗಿತ್ತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎ ಕೆಟಗರಿಯ ಕುಣಿಗಲ್, ತಿಪಟೂರು, ಪಾವಗಡ, ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ಸಿರಾ ತಾಲೂಕುಗಳ ತಲಾ ಒಂದು ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಿತು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ ಆರು ಸ್ಥಾನಗಳಿಗೆ ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸಿ ಚುನಾವಣೆ ನಡೆಸಿದ್ದ, ಈ ಮೇಲಿನ ಆರು ತಾಲೂಕುಗಳ ಅರ್ಹ ಮತದಾರರು ಡಿಸಿಸಿ ಬ್ಯಾಂಕ್ಗೆ ಆಗಮಿಸಿ ಮತದಾನ ಮಾಡಿದರು. ಚಿಕ್ಕನಾಯಕನಹಳ್ಳಿ ತಾಲೂಕಿನ 23 ಮತದಾರರು, ಗುಬ್ಬಿ ತಾಲೂಕಿನ 21, ಕುಣಿಗಲ್ 18, ಪಾವಗಡ 20, ತಿಪಟೂರು 18, ಸಿರಾ 29 ಸಹಕಾರಿ ಸಂಘದ ಪ್ರತಿನಿಧಿಗಳಾಗಿರುವ ಮತದಾರರು ಡಿಸಿಸಿ ಬ್ಯಾಂಕ್ನಲ್ಲಿ ಮತ ಚಲಾಯಿಸಿದರು.

ಮತದಾನ ನಡೆದ ಸ್ಥಾನಗಳಲ್ಲಿ ಕುಣಿಗಲ್ ಸ್ಥಾನದಿಂದ ಬಿ.ಶಿವಣ್ಣ, ತಿಪಟೂರಿನಿಂದ ಶಾಸಕ ಕೆ.ಷಡಕ್ಷರಿ, ಸಿರಾದಿಂದ ಹಾಲಿ ನಿರ್ದೇಶಕ ಜಿ.ಎಸ್ ರವಿ, ಪಾವಗಡದಿಂದ ಶಾಸಕ ಎಚ್.ವಿ.ವೆಂಕಟೇಶ್(ತುಮುಲ್ ಅಧ್ಯಕ್ಷ), ಚಿಕ್ಕನಾಯಕನಹಳ್ಳಿಯಿಂದ ಸಿಂಗದಹಳ್ಳಿ ರಾಜಕುಮಾರ್, ಗುಬ್ಬಿ ತಾಲೂಕಿನಿಂದ ಪ್ರಭು ಜಯ ಸಾಧಿಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎ ಕೆಟಗರಿ ವರ್ಗದಿಂದ ಶಾಸಕ ಕೆ.ಎನ್.ರಾಜಣ್ಣ, ತುರುವೇಕೆರೆಯಿಂದ ಎಂ.ಸಿದ್ದಲಿಂಗಪ್ಪ, ಮಧುಗಿರಿಯಿಂದ ಜಿ.ಜೆ.ರಾಜಣ್ಣ, ಕೊರಟಗೆರೆಯಿಂದ ಎನ್.ಹನುಮಾನ್, ಬಿ ವರ್ಗದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಪಟ್ಟಣ ಸಹಕಾರ ಬ್ಯಾಂಕ್ಗಳು, ವ್ಯವಸಾಯೇತರ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ಎಸ್.ಲಕ್ಷ್ಮೀನಾರಾಯಣ, ಡಿ ವರ್ಗದ ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೇತ್ರದಿಂದ ಬಿ.ನಾಗೇಶ್ಬಾಬು ಹಾಗೂ ಡಿ1 ವರ್ಗದ ಮಹಿಳಾ ಸಂಘಗಳ ಕ್ಷೇತ್ರದಿಂದ ಮಾಲತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com








