ಅಕ್ಟೋಬರ್ನಲ್ಲಿ ಸಂತೆಕಟ್ಟೆಯಲ್ಲಿ 21ನೇ ಶಾಖೆ ಕಾರ್ಯಾರಂಭ: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಮಾಹಿತಿ
ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಂಸಿಸಿ ಬ್ಯಾಂಕ್ನ ನೂತನ 20ನೇ ಶಾಖೆ ಬೈಂದೂರಿನಲ್ಲಿ ಆಗಸ್ಟ್ 3ರಂದು ಉದ್ಘಾಟನೆಗೊಳ್ಳಲಿದೆ.
ನೂತನ ಶಾಖೆಯ ಉದ್ಘಾಟನೆ ಬಗ್ಗೆ ಬುಧವಾರ ಮಂಗಳೂರಿನ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ, ಎಂಸಿಸಿ ಬ್ಯಾಂಕ್ ಕರ್ನಾಟಕ ರಾಜ್ಯಾದ್ಯಂತ ಕಾರ್ಯವ್ಯಾಪ್ತಿ ಹೊಂದಿದ್ದು, ಮಂಗಳೂರಿನಲ್ಲಿ ನವೀಕೃತಗೊಂಡ ಸುಸಜ್ಜಿತ ಆಡಳಿತ ಕಚೇರಿಯೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 19 ಶಾಖೆಗಳನ್ನು ಹೊಂದಿದೆ. 20ನೇ ಶಾಖೆ ಬೈಂದೂರಿನಲ್ಲಿ ಮುಂದಿನ ವಾರ ಉದ್ಘಾಟನೆಗೊಳ್ಳಲಿದ್ದು, 21ನೇ ಶಾಖೆ ಅಕ್ಟೋಬರ್ 5ರಂದು ಕಾರ್ಯಾರಂಭಗೊಳ್ಳಲಿದೆ ಎಂದು ತಿಳಿಸಿದರು.
https://chat.whatsapp.com/EbVKVnWB6rlHT1mWtsgbch
ಪ್ರಸಕ್ತ ವಿತ್ತೀಯ ವರ್ಷದಲ್ಲಿ ಎಂಸಿಸಿ ಬ್ಯಾಂಕ್ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯು ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಇಡೀ ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಿದೆ. ಎಂಸಿಸಿ ಬ್ಯಾಂಕ್ ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇತರ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಲಭ್ಯವಿರುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳು ದೊರೆಯುತ್ತಿವೆ. ಶೀಘ್ರವಾಗಿ ಕರ್ನಾಟಕ ರಾಜ್ಯಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸುವ ಕಾರ್ಯಯೋಜನೆಯನ್ನೂ ರೂಪಿಸಿದೆ ಎಂದು ಮಾಹಿತಿ ನೀಡಿದರು.



ಎಂಸಿಸಿ ಬ್ಯಾಂಕ್ನಲ್ಲಿ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿಯು 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 2018ರಿಂದ 2025ರ ವಿತ್ತೀಯ ವರ್ಷದಲ್ಲಿ ಅಭೂತಪೂರ್ವ ಪ್ರಗತಿ ದಾಖಲಿಸಿದೆ. ರೂ. 304 ಕೋಟಿ ಇದ್ದ ಬ್ಯಾಂಕಿನ ಠೇವಣಿಯು 2025ರಲ್ಲಿ ರೂ. 728 ಕೋಟಿಗೆ ತಲುಪಿದ್ದು, ಶೇಕಡಾ 139ರಷ್ಟು ಪ್ರಗತಿ ದಾಖಲಿಸಿದೆ. ರೂ. 191 ಕೋಟಿ ಇದ್ದ ಸಾಲ ಮತ್ತು ಮುಂಗಡಗಳು ರೂ. 572 ಕೋಟಿಗೆ ತಲುಪಿದ್ದು, ಶೇಕಡಾ 199ರಷ್ಟು ಪ್ರಗತಿ ದಾಖಲಿಸಿದೆ. ರೂ. 13 ಕೋಟಿ ಇದ್ದ ಪಾಲು ಬಂಡವಾಳ ರೂ. 33 ಕೋಟಿಗೆ ತಲುಪಿದ್ದು, ಶೇಕಡಾ 154ರಷ್ಟು ಪ್ರಗತಿ ದಾಖಲಿಸಿದೆ. ಬ್ಯಾಂಕಿನ ರಿಸರ್ವ್ ರೂ. 29 ಕೋಟಿಯಿಂದ ರೂ. 79 ಕೋಟಿಗೆ ತಲುಪಿದ್ದು, ಶೇಕಡಾ 172ರಷ್ಟು ಪ್ರಗತಿ ದಾಖಲಾಗಿದೆ. ರೂ. 496 ಕೋಟಿ ಇದ್ದ ವ್ಯವಹಾರ ರೂ. 1300 ಕೋಟಿಗೆ ತಲುಪಿದ್ದು, ಶೇಕಡಾ 162ರಷ್ಟು ಪ್ರಗತಿಯಾಗಿದೆ. ಶೇಕಡಾ 11.70 ಇದ್ದ ಬ್ಯಾಂಕಿನ CRAR (Capital to Risk Assets Ratio) ಪ್ರಮಾಣವು ಶೇಕಡಾ 19.82 ತಲುಪಿದ್ದು ಶೇಕಡಾ 62ರಷ್ಟು ಪ್ರಗತಿ ದಾಖಲಿಸಿದೆ. ಶೇಕಡಾ 0.56 ಇದ್ದ ಬ್ಯಾಂಕಿನ ರಿಟರ್ನ್ ಆನ್ ಅಸೆಟ್ಸ್ ಮೌಲ್ಯವು ಶೇಕಡಾ 1.40ಗೆ ತಲುಪಿ ಶೇಕಡಾ 150 ಪ್ರಗತಿ ದಾಖಲಿಸಿದೆ ಎಂದು ಅನಿಲ್ ಲೋಬೊ ಮಾಹಿತಿ ನೀಡಿದರು.
ಬ್ಯಾಂಕಿನ ಪ್ರಗತಿಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಸಮರ್ಥ ಆಡಳಿತ ಮಂಡಳಿ, ಅದಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದ ಶ್ರಮ ಹಾಗೂ ಬ್ಯಾಂಕಿನ ಆರ್ಥಿಕ ಪ್ರಗತಿಯತ್ತ ಗಮನಹರಿಸಿ ಕಾರ್ಯಯೋಜನೆ ಹಮ್ಮಿಕೊಂಡಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕಿನ ಎಲ್ಲಾ ಮಾನದಂಡಗಳನ್ನು ಪೂರೈಸಿ ಎಂಸಿಸಿ ಬ್ಯಾಂಕ್ 22 ವರ್ಷಗಳ ನಂತರ ಬ್ರಹ್ಮಾವರ, ಬೆಳ್ತಂಗಡಿ ಮತ್ತು ಬೆಳ್ಳಣ್ನಲ್ಲಿ ಮೂರು ಶಾಖೆಗಳನ್ನು ತೆರೆದಿದ್ದು, ಶಾಖೆಗಳ ಒಟ್ಟು ಸಂಖ್ಯೆಯು 16ರಿಂದ 19ಕ್ಕೆ ತಲುಪಿತ್ತು. ಇನ್ನೆರಡು ಶಾಖೆಗಳ ಕಾರ್ಯಾರಂಭದೊಂದಿಗೆ ಶಾಖೆಗಳ ಸಂಖ್ಯೆ 21ಕ್ಕೇರಲಿದೆ ಎಂದು ತಿಳಿಸಿದರು.
ಬೈಂದೂರು ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್ನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸುವರು. ಬೈಂದೂರಿನ ಹೋಲಿಕ್ರಾಸ್ ಚರ್ಚ್ನ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಕುವೆಲ್ಲೊ ಶಾಖೆಯನ್ನು ಆಶೀರ್ವದಿಸಲಿದ್ದಾರೆ. ಶಾಸಕ ಗುರುರಾಜ್ ಗಂಟಿಹೊಳೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾಬು ಶೆಟ್ಟಿ, ಬೈಂದೂರು ಸೇಂಟ್ ಥಾಮಸ್ ರೆಸಿಡೆನ್ಸಿಯಲ್ ಸ್ಕೂಲ್ನ ಪ್ರಾಂಶುಪಾಲ ವಂದನೀಯ ಫಿಲಿಪ್ ನೆಲಿವಿಲ್ಲ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ. ಪಡುವರಿ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಪ್ಸಿನೂರ್ ಮೊಹಮ್ಮದ್, ನಾಡದೋಣಿ ರಾಜ್ಯ ಸಂಘದ ಅಧ್ಯಕ್ಷ ನಾಗೇಶ್ ಖಾರ್ವಿ, ಬೈಂದೂರಿನ ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ. ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದರ ಜೊತೆಯಲ್ಲೇ ಆಗಸ್ಟ್ 9ರಂದು ಬೆಳ್ಮಣ್ನಲ್ಲಿ 9ನೇ ಎಟಿಎಂ, 10ರಂದು ಸುರತ್ಕಲ್ ನಲ್ಲಿ 10ನೇ ಎಟಿಎಂ, 17ರಂದು ಕುಲಶೇಖರ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮತ್ತು 11ನೇ ಎಟಿಎಂ ಉದ್ಘಾಟನೆಗೊಳ್ಳಲಿದೆ. ಸೆಪ್ಟೆಂಬರ್ 14ರಂದು ಕಿನ್ನಿಗೋಳಿಯಲ್ಲಿ 12ನೇ ಎಟಿಎಂ, 27ರಂದು ಉಡುಪಿ ಶಾಖೆಯಲ್ಲಿ 13ನೇ ಎಟಿಎಂ ಅಕ್ಟೋಬರ್ 5ರಂದು 14ನೇ ಎಟಿಎಂ ಸಂತೆಕಟ್ಟೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅನಿಲ್ ಲೋಬೊ ತಿಳಿಸಿದರು.



ಎಂಸಿಸಿ ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಡಾ.ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ.ರೊಡ್ರಿಗಸ್, ಡೇವಿಡ್ ಡಿಸೋಜ, ಎಲ್ರಾಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ.ಪಿಂಟೊ, ಸುಶಾಂತ್ ಸಲ್ದಾನ್ಹಾ, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್, ಬ್ಯಾಂಕಿನ ಮಹಾಪ್ರಬಂಧಕರಾದ ಸುನಿಲ್ ಮಿನೇಜಸ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

