ಸಂವಾದದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ ಕಮ್ಮರಡಿ ಹೇಳಿಕೆ
ಶಿರಸಿ: ಅಡಕೆ ಹಾಳೆಯಿಂದ ತಯಾರಿಸಿದ ಪರಿಸರ ಸ್ನೇಹಿ ಊಟದ ತಟ್ಟೆ, ಲೋಟ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ತರ್ಕವೇ ಹಾಸ್ಯಾಸ್ಪದ. ಅಮೆರಿಕಾಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮನವರಿಕೆ ಮಾಡಿಕೊಟ್ಟು, ಈ ಉತ್ಪನ್ನಗಳ ಮೇಲೆ ಹೇರಲಾಗಿರುವ ನಿಷೇಧವನ್ನು ವಾಪಸ್ ತೆಗೆಸುವಂತೆ ಮಾಡಬೇಕು ಎಂದು ಕೃಷಿ ಆರ್ಥಿಕ ತಜ್ಞ ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ ಕಮ್ಮರಡಿ ಹೇಳಿದ್ಧಾರೆ.
https://chat.whatsapp.com/EbVKVnWB6rlHT1mWtsgbch
ಶಿರಸಿಯಲ್ಲಿ ಟಿಎಸ್ಎಸ್ ಸಹಕಾರ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಡಕೆ ಉತ್ಪನ್ನಗಳ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ಅಡಕೆ ಕ್ಯಾನ್ಸರ್ ಕಾರಕವಲ್ಲ, ಅಡಕೆ ಹಾಳೆಯಿಂದ ತಯಾರಿಸಿದ ಉತ್ಪನ್ನ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂಬುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಅಮೆರಿಕಾ ಸಂಯುಕ್ತ ಸಂಸ್ಥಾನದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಅಡಕೆ ಹಾಳೆ ಉತ್ಪನ್ನಗಳನ್ನು ನಿಷೇಧಿಸಿದೆ. ಇವುಗಳ ಬಳಕೆಯಿಂದ ಅಡಕೆಯೊಳಗಿನ ಅತ್ಯಂತ ನೈಸರ್ಗಿಕ ಅಂಶವಾದ ಕ್ಷಾರ ಅಥವಾ ಚೊಗರು ತಿನ್ನುವ ಆಹಾರದೊಳಗೆ ಸೇರಿ ಆರೋಗ್ಯಕ್ಕೆ ಹಾನಿಕರವಾಗಿ, ಕ್ಯಾನ್ಸರ್ಗೂ ಕಾರಣವಾಗಬಹುದು ಎಂಬ ಅರ್ಥಹೀನ ಕಾರಣ ನೀಡಿದೆ. ಯಾವುದೇ ವೈಜ್ಞಾನಿಕ ಸಂಶೋಧನೆ ಇಲ್ಲದೆ ಇಂಥ ಕ್ರಮ ತೆಗೆದುಕೊಂಡಿರುವುದು ಜಾಗತಿಕ ಮಟ್ಟದಲ್ಲಿ ಅಡಕೆ ವಿರುದ್ಧ ಮಾಡಿರುವ ದೊಡ್ಡ ಸಂಚು ಎಂದು ಆರೋಪಿಸಿದರು.
ಅಡಕೆ ಮಧುಮೇಹ, ವ್ಯದ್ಯಾಪ್ಯದ ಮರೆವು ಅಲ್ಲದೆ, ಕೆಲವು ವಿಧದ ಕ್ಯಾನ್ಸರ್ಗೂ ಪರಿಹಾರ ಎಂಬುದು ಉನ್ನತ ಸಂಶೋಧನೆಗಳಿಂದ ತಿಳಿದುಬಂದಿದೆ. ಹಾಗಿದ್ದರೂ ಇದರ ಬಳಕೆಯಿಂದ ಆರೋಗ್ಯಕ್ಕೆ ದುಷ್ಪರಿಣಾಮವಾಗುತ್ತದೆ, ಕ್ಯಾನ್ಸರ್ಗೂ ಕಾರಣವಾಗುತ್ತದೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ಅಡಕೆ ಕ್ಯಾನ್ಸರ್ಕಾರಕವಲ್ಲ ಎಂದು ದೃಢಪಡಿಸುವ ಸಂಶೋಧನೆ ಮಾಡುವ ಬದಲು ಅಡಕೆಯಲ್ಲಿರುವ ಆರೋಗ್ಯ ಹಾಗೂ ಔಷಧಿಯ ಗುಣಗಳ ಬಗ್ಗೆ ನಾವು ಪೇಟೆಂಟ್ ಪಡೆಯಬೇಕು ಎಂದು ಆಗ್ರಹಿಸಿದರು.
ಅಡಕೆ ಎಂಬುದು ಆಹಾರ ವಸ್ತು, ಅಗೆದು ಅಗೆದು ತಿನ್ನುವ ಆಹಾರವಾಗಿತ್ತು. ಅದೀಗ ಜಗಿದು ಜಗಿದು ಉಗುಳುವ ಸ್ಥಿತಿಗೆ ಬಂದಿದೆ. ಅಡಕೆ ಬಳಕೆಯ ಪರಿವರ್ತನೆ ಆಧಾರದಲ್ಲಿ ಅಡಕೆ ಬೆಲೆಗಷ್ಟೇ ನಾವು ಚಿಂತನೆ ನಡೆಸಿದ್ದೇವೆ. ಬೆಲೆ ವ್ಯಾಮೋಹದಿಂದ ಹೊರಬಂದು ಬೆಳೆಗಾರರು, ಬೆಳೆಗಾರ ಸಂಸ್ಥೆಗಳು, ಜನಪ್ರತಿನಿಧಿಗಳು ಜಾಗೃತರಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಅಡಕೆಯ ಕಳಂಕ ದೂರ ಮಾಡಬೇಕು. ಅಮೆರಿಕಾದ ಏಕಪಕ್ಷೀಯ ಕ್ರಮ ವಿಶ್ವವ್ಯಾಪಾರ ಒಪ್ಪಂದಕ್ಕೆ ಹೊಂದಿಕೆಯಾಗುತ್ತದೆಯೇ? ಅಡಕೆ ಹಾಳೆ ತಟ್ಟೆಗಳ ಬಳಕೆಯಿಂದ ಆಹಾರ ಮಲಿನವಾಗಿ ಆರೋಗ್ಯಕ್ಕೆ ಹಾನಿಕಾರಕ ಎಂಬುದರ ಬಗ್ಗೆ ಸ್ಪಷ್ಟ ವೈಜ್ಞಾನಿಕ ಪುರಾವಣೆಗಳನ್ನು ಆ ದೇಶದಿಂದ ಪಡೆಯಬೇಕು. ದೇಶದ ಪ್ರತಿಷ್ಠಿತ ಆಹಾರ, ಆರೋಗ್ಯ, ಕೃಷಿ ವಿಚಾರಗಳ ಮೇಲೆ ಉನ್ನತ ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳ ಸಹಾಯದಿಂದ ಅಡಕೆ ಮೇಲಿನ ಈ ಅಪಪ್ರಚಾರಕ್ಕೆ ಸಂಪೂರ್ಣ ತಡೆ ಹಾಕಬೇಕು ಎಂದು ಆಗ್ರಹಿಸಿದರು.
ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ವಿಜ್ಞಾನಿ ತೇಜಸ್ವಿನಿ ಪ್ರಕಾಶ, ಮಂಜುನಾಥ ಶಿವಮೊಗ್ಗ, ಪರಿಸರ ಬರಹಗಾರ ಶಿವಾನಂದ ಕಳವೆ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com