29.50 ಕೋಟಿ ರೂ. ಒಟ್ಟು ವ್ಯವಹಾರ; 8ನೇ ವಾರ್ಷಿಕ ಮಹಾಸಭೆಯಲ್ಲಿ ಶೇ.10ರಷ್ಟು ಲಾಭಾಂಶ ಘೋಷಣೆ
ರಾಯಚೂರು: ರಾಯಚೂರು ನಗರದ ಮಾಣಿಕ ಪ್ರಭು ಲೇಔಟ್ನಲ್ಲಿರುವ ಮಾಣಿಕ ಪ್ರಭು ಅಂಧ ಮಕ್ಕಳ ಶಾಲೆಯಲ್ಲಿ ವೀರಶೈವ ವಿಕಾಸ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ 8ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಅಧ್ಯಕ್ಷರಾದ ಪ್ರಭುದೇವರು ಹೆಚ್.ಎಂ. ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಸಹಕಾರಿ ಪಿತಾಮಹ ಸಿದ್ದನಗೌಡ ಸಣ್ಣ ರಾಮನಗೌಡ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮತ್ತು ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳ ಪ್ರಾಥನೆ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಹಾಸಭೆಯಲ್ಲಿ ಸಂಸ್ಥೆಯ ವಾರ್ಷಿಕ ಆರ್ಥಿಕ ಪ್ರಗತಿಯ ವಿವರಗಳನ್ನು ಮಂಡಿಸಲಾಗಿದ್ದು, ಸಹಕಾರಿಯು ಪ್ರಸಕ್ತ ಸಾಲಿನಲ್ಲಿ 26 ಲಕ್ಷ 90 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯ ಒಟ್ಟು ವ್ಯವಹಾರ 29 ಕೋಟಿ 50 ಲಕ್ಷ ರೂ. ತಲುಪಿದೆ. ಸಹಕಾರಿಯ ಠೇವಣಿ 16 ಕೋಟಿ 37 ಲಕ್ಷ ರೂ. ಆಗಿದ್ದು, ಸದಸ್ಯರಿಗೆ ನೀಡಿರುವ ಸಾಲದ ಮೊತ್ತ 13 ಕೋಟಿ 20 ಲಕ್ಷ ರೂ. ಆಗಿದೆ. ಸಂಸ್ಥೆಯ ಆರ್ಥಿಕ ಪ್ರಗತಿ ಹಾಗೂ ಉತ್ತಮ ಕಾರ್ಯನಿರ್ವಹಣೆಯ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ.10ರಷ್ಟು ಲಾಭಾಂಶ ಘೋಷಿಸಲಾಯಿತು.

“ಸದಸ್ಯರ ವಿಶ್ವಾಸವೇ ನಮ್ಮ ಶಕ್ತಿ”
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರಭುದೇವರು ಹೆಚ್.ಎಂ. ಮಾತನಾಡಿ, “ಸದಸ್ಯರ ವಿಶ್ವಾಸ ಮತ್ತು ಸಹಕಾರವೇ ನಮ್ಮ ಸಂಸ್ಥೆಯ ಬೆಳವಣಿಗೆಯ ಪ್ರಮುಖ ಶಕ್ತಿ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಒಗ್ಗಟ್ಟಿನ ಪ್ರಯತ್ನದಿಂದ ಸಹಕಾರಿ ಉತ್ತಮ ಪ್ರಗತಿ ಸಾಧಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಸದಸ್ಯರಿಗೆ ಉತ್ತಮ ಸೇವೆ ನೀಡುವ ಮೂಲಕ ಸಂಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು” ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ವಿ. ಅಶಾಪೂರ ಮಾತನಾಡಿ, “ಸದಸ್ಯರ ನಿರಂತರ ವಿಶ್ವಾಸದಿಂದ ಸಂಸ್ಥೆ ಉತ್ತಮ ಆರ್ಥಿಕ ಸಾಧನೆ ಮಾಡಿದೆ. 16.37 ಕೋಟಿ ರೂ. ಠೇವಣಿ, 13.20 ಕೋಟಿ ರೂ. ಸಾಲ ಹಾಗೂ 26.90 ಲಕ್ಷ ರೂ. ನಿವ್ವಳ ಲಾಭ ಗಳಿಸಿರುವುದು ನಮ್ಮೆಲ್ಲರ ಒಗ್ಗಟ್ಟಿನ ಪ್ರಯತ್ನದ ಫಲವಾಗಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಗೆ ಇನ್ನಷ್ಟು ಉತ್ತಮ ಹಾಗೂ ಆಧುನಿಕ ಸೇವೆಗಳನ್ನು ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ” ಎಂದು ತಿಳಿಸಿದರು.
ಮಹಾಸಭೆಯಲ್ಲಿ ಸಂಸ್ಥೆಯ ವಾರ್ಷಿಕ ವರದಿ, ಲೆಕ್ಕಪತ್ರಗಳು, ಲಾಭ-ನಷ್ಟದ ವಿವರಗಳು ಹಾಗೂ ಮುಂದಿನ ಸಾಲಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು. ಸದಸ್ಯರ ಹಿತಾಸಕ್ತಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ, ಸದಸ್ಯರ ಸಲಹೆಗಳನ್ನು ಪರಿಗಣಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು. ಸಹಕಾರಿಯ ನಿರ್ದೇಶಕ ವೀರಯ್ಯಸ್ವಾಮಿ ಆಶಾಪುರ ಸ್ವಾಗತಿಸಿದರು. ಶಶಿಕುಮಾರ್ ಎನ್. ಹಿರೇಮಠ ಕಾರ್ಯಕ್ರಮದ ನಿರೂಪಿಸಿದರು. ಕೆ ಶ್ರೀನಿವಾಸ್ ರಾವ್ ವಂದಿಸಿದರು.











