114 ವರ್ಷಗಳ ಇತಿಹಾಸ ಹೊಂದಿರುವ ಎಂಸಿಸಿ ಬ್ಯಾಂಕಿನಿಂದ 1,535 ಕೋಟಿ ರೂಪಾಯಿ ವ್ಯವಹಾರ: ಈ ವರ್ಷದ ಅಂತ್ಯದೊಳಗೆ 25 ಶಾಖೆ ಆರಂಭ: ಸಹಕಾರ ರತ್ನ ಅನಿಲ್ ಲೋಬೊ ಮಾಹಿತಿ
ಮಂಗಳೂರು: 114 ವರ್ಷಗಳ ಸೇವೆ ಪೂರ್ಣಗೊಳಿಸಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ ನ 22ನೇ ನೂತನ ಶಾಖೆಯು ಜೂನ್ 28ರಂದು ದೇರಳಕಟ್ಟೆಯಲ್ಲಿ ಉದ್ಘಾಟನೆಗೊಳ್ಳಲಿದ್ದು, ಆಗಸ್ಟ್ 2ರಂದು ಕಟಪಾಡಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ತಿಳಿಸಿದರು.
https://chat.whatsapp.com/FCEnlTkAKCC0MGPhXtX4i4
ಎಂಸಿಸಿ ಬ್ಯಾಂಕಿನ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಂಸಿಸಿ ಬ್ಯಾಂಕ್ 31 ಮಾರ್ಚ್ 2026ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಎಲ್ಲಾ ಪ್ರಮುಖ ವ್ಯವಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಮಾಹಿತಿ ನೀಡಿದರು. ಬ್ಯಾಂಕ್ ಒಟ್ಟು ವ್ಯವಹಾರ ವಹಿವಾಟಿನಲ್ಲಿ 22.89% ಬೆಳವಣಿಗೆಯೊಂದಿಗೆ ರೂ. 1,535 ಕೋಟಿ ಮೈಲಿಗಲ್ಲನ್ನು ತಲುಪಿದೆ. ಬ್ಯಾಂಕಿನ ನಿವ್ವಳ ಮೌಲ್ಯ ರೂ. 83.76 ಕೋಟಿಯಿಂದ ರೂ. 91.80 ಕೋಟಿಗೆ ಏರಿಕೆಯಾಗಿದ್ದು, ಎನ್ಆರ್ಐ ಗ್ರಾಹಕರ ಬೆಂಬಲ ಬ್ಯಾಂಕಿನ ಬೆಳವಣಿಗೆಗೆ ಪ್ರಮುಖ ಶಕ್ತಿಯಾಗಿದೆ. ಪ್ರಸ್ತುತ ಆಡಳಿತ ಮಂಡಳಿಯ ನೇತೃತ್ವದಲ್ಲಿ ಎಂಸಿಸಿ ಬ್ಯಾಂಕಿನ ಕಾರ್ಯವ್ಯಾಪ್ತಿ ಸಂಪೂರ್ಣ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದ್ದು ಬ್ಯಾಂಕ್ ಸಂಪೂರ್ಣ ಕೋರ್ ಬ್ಯಾಂಕಿಂಗ್ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಮಾನವಾಗಿ ವಿವಿಧ ಹಣಕಾಸು ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುತ್ತಿರುವ ಬ್ಯಾಂಕ್ ರಾಜ್ಯಾದ್ಯಂತ ಶಾಖಾ ಜಾಲ ವಿಸ್ತರಣೆಗೆ ಆದ್ಯತೆ ನೀಡುತ್ತಿದೆ.
2018ರಲ್ಲಿ ಸಹಕಾರ ರತ್ನ ಅನಿಲ್ ಲೋಬೊ ಮತ್ತು ಅವರ ತಂಡ ಆಡಳಿತ ವಹಿಸಿಕೊಂಡ ನಂತರ ಬ್ಯಾಂಕ್ ಗಮನಾರ್ಹ ಬೆಳವಣಿಗೆ ಕಂಡಿದೆ. ಠೇವಣಿಗಳು ರೂ. 304 ಕೋಟಿಯಿಂದ ರೂ. 876 ಕೋಟಿಗೆ ಏರಿಕೆಯಾಗಿದ್ದು, 188% ಬೆಳವಣಿಗೆ ದಾಖಲಿಸಿದೆ. ಸಾಲ ಮತ್ತು ಮುಂಗಡಗಳು ರೂ. 191 ಕೋಟಿಯಿಂದ ರೂ. 657 ಕೋಟಿಗೆ ಏರಿಕೆಯಾಗಿದ್ದು, 243% ಪ್ರಗತಿ ಸಾಧಿಸಿದೆ ಎಂದು ಮಾಹಿತಿ ನೀಡಿದರು.
ಷೇರು ಬಂಡವಾಳ ರೂ. 13 ಕೋಟಿಯಿಂದ ರೂ. 34 ಕೋಟಿಗೆ ಏರಿಕೆಯಾಗಿದ್ದು, 161% ಬೆಳವಣಿಗೆ ಕಂಡಿದೆ. ಮೀಸಲು ನಿಧಿ ರೂ. 29 ಕೋಟಿಯಿಂದ ರೂ. 85 ಕೋಟಿಗೆ ಏರಿಕೆಯಾಗಿದೆ. ವ್ಯವಹಾರ ವಹಿವಾಟು ರೂ. 496 ಕೋಟಿಯಿಂದ ರೂ. 1,535 ಕೋಟಿಗೆ ತಲುಪಿ, 209% ಬೆಳವಣಿಗೆ ದಾಖಲಿಸಿದೆ ಎಂದು ತಿಳಿಸಿದರು.
ದಕ್ಷ ಆಡಳಿತ ಮಂಡಳಿ, ಸಮರ್ಪಿತ ಸಿಬ್ಬಂದಿ ಮತ್ತು ಸಮರ್ಥ ಕಾರ್ಯತಂತ್ರದ ಯೋಜನೆಯಿಂದ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿರುವ ಎಲ್ಲಾ ನಿಯಮಗಳನ್ನು ಯಶಸ್ವಿಯಾಗಿ ಪೂರೈಸಿದೆ. 22 ವರ್ಷಗಳ ನಂತರ ಬ್ಯಾಂಕ್ ಬ್ರಹ್ಮಾವರ, ಬೆಳ್ತಂಗಡಿ, ಬೆಳ್ಳಣ್, ಬೈಂದೂರು ಮತ್ತು ಸಂತೆಕಟ್ಟೆಯಲ್ಲಿ ಹೊಸ ಶಾಖೆಗಳನ್ನು ಆರಂಭಿಸುವ ಮೂಲಕ ವಿಸ್ತರಣೆಗೆ ಚಾಲನೆ ನೀಡಿದೆ ಎಂದು ಹೇಳಿದ ಅನಿಲ್ ಲೋಬೊ ಅವರು, ಎಂಸಿಸಿ ಬ್ಯಾಂಕಿನ 22ನೇ ದೇರಳಕಟ್ಟೆ ಶಾಖೆಯನ್ನು ಜೂನ್ 28, 2026 ರಂದು ಹಾಗೂ 23ನೇ ಕಟಪಾಡಿ, ಉಡುಪಿ ಶಾಖೆಯನ್ನು ಆಗಸ್ಟ್ 2, 2026 ರಂದು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ದೇರಳಕಟ್ಟೆ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಿಲ್ ಲೋಬೊ ವಹಿಸಲಿದ್ದಾರೆ. ಪಾನೀರ್ ಅವರ್ ಲೇಡಿ ಆಫ್ ಮರ್ಸಿ ಚರ್ಚ್ನ ಧರ್ಮಗುರು ವಂ| ವಿಕ್ಟರ್ ಡಿಮೆಲ್ಲೊ ಅವರು ಆಶೀರ್ವದಿಸಲಿದ್ದಾರೆ. ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಆರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಭೆಯ ಸುಪೀರಿಯರ್ ಜನರಲ್ ಸಿಸ್ಟರ್ ಮಿಲ್ಲಿ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ಆಡಳಿತಾಧಿಕಾರಿ ವಂ| ನಿಲೇಶ್ ಕ್ರಾಸ್ತಾ, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಸತೀಶ್ ಶೆಟ್ಟಿ ಹಾಗೂ ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಎಂ. ಸತ್ತಾರ್ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.


ದೇರಳಕಟ್ಟೆಯಲ್ಲಿ ಬ್ಯಾಂಕಿನ 15ನೇ ಎಟಿಎಂ ಕೂಡ ಅಂದು ಉದ್ಘಾಟನೆಗೊಳ್ಳಲಿದೆ. ಮೊರ್ಗನ್ಸ್ ಗೇಟ್ ಶಾಖೆಯನ್ನು ಜುಲೈ 25ರಂದು, ಮೂಡಬಿದಿರೆ ಶಾಖೆಯನ್ನು ಆಗಸ್ಟ್ 22ರಂದು ಸ್ಥಳಾಂತರಿಸಿ, ಕಾರ್ಕಳ ಆಗಸ್ಟ್ 26ರಂದು ಸ್ವಂತ ಕಟ್ಟಡಕ್ಕೆ ಸ್ಥಳಂತರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕಟಪಾಡಿ ಶಾಖೆಯ ಉದ್ಘಾಟಣೆಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪ್ರಮುಖರಾದ ಗೀತಾoಜಲಿ ಸುವರ್ಣ, ಇಸ್ಮಾಯಿಲ್ ಕಟಪಾಡಿ, ಪ್ರೀತೀಶ್ ಡೇಸಾ ಮೊದಲಾದವರು ಪಾಲ್ಗೊಳ್ಳುವರು ಎಂದರು.
ಎಂಸಿಸಿ ಬ್ಯಾಂಕ್ ಕಡಿಮೆ ವೆಚ್ಚದ ಲಾಕರ್ ಸೌಲಭ್ಯ ದೇಶೀ ಹಾಗೂ ವಿದೇಶಿ ಶಿಕ್ಷಣಕ್ಕಾಗಿ ಶಿಕ್ಷಣ ಸಾಲ, ಎಮ್ಎಸ್ಎಮ್ಇ ಸಾಲ, ವಾಹನ ಸಾಲ, ಗೃಹ ಸಾಲ, ಮನೆ ದುರಸ್ತಿ, ವಿವಾಹ ಹಾಗೂ ಗೃಹೋಪಯೋಗಿ ವಸ್ತುಗಳ ಖರೀದಿ ಸಾಲ ಸೇರಿದಂತೆ ಹಲವು ಹಣಕಾಸು ಸೇವೆಗಳನ್ನು ನೀಡುತ್ತಿದೆ. ಯಾವುದೇ ಪ್ರೊಸೆಸಿಂಗ್ ಶುಲ್ಕವಿಲ್ಲದೆ ಚಿನ್ನದ ಸಾಲ ಸೌಲಭ್ಯ ಹಾಗೂ ಉಚಿತ ಎಟಿಎಂ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಬ್ಯಾಂಕಿನ ಠೇವಣಿಗಳು ಆರ್ಬಿಐ ಮಾರ್ಗಸೂಚಿಯಂತೆ ಡಿಐಸಿಜಿಸಿ ಅಡಿಯಲ್ಲಿ ವಿಮೆಗೊಂಡಿವೆ ಎಂದು ಹೇಳಿದರು.
ಎಂಸಿಸಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರು ಡಿಸೋಜ, ಡಾ.ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೋ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜ, ಎಲ್ರೋಯ್ ಕಿರಣ್ ಕ್ಲಾಸ್ಕೊ, ಹೆರಾಲ್ಡ್ ಮೊಂತೆರೋ, ರೋಶನ್ ಡಿಸೋಜ, ಮೆಲ್ವಿನ್ ವಾಸ್, ವಿನ್ವೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ದಾನ್ಹ, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೆಜಸ್ ಹಾಗೂ ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

