ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ಅಭಿಪ್ರಾಯ
ಪುತ್ತೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನವು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದೆ. ಗ್ರಾಹಕರಿಗೆ ಅತ್ಯುತ್ತಮ ಹಾಗೂ ಅತ್ಯಂತ ಕ್ಷಿಪ್ರವಾದ ಸೇವೆ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ತಂತ್ರಜ್ಞಾನದಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಬ್ಯಾಂಕಿನ ಸಿಬ್ಬಂದಿಗಳು ಇಂತಹ ಕಾರ್ಯಾಗಾರಗಳಲ್ಲಿ ಪಡೆಯುವ ಮಾಹಿತಿಯನ್ನು ಸದುಪಯೋಗ ಪಡಿಸಿಕೊಂಡು ಗ್ರಾಹಕರಿಗೆ ನಿರಂತರ ಮತ್ತು ಗುಣಮಟ್ಟದ ಸೇವೆ ನೀಡಬೇಕು ಎಂದು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕಿನ ಅಧ್ಯಕ್ಷರಾದ ಎನ್. ಕಿಶೋರ ಕೊಳತ್ತಾಯ ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ಅವರು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ಸಿಬ್ಬಂದಿಗಳಿಗಾಗಿ ಆಯೋಜಿಸಲಾಗಿದ್ದ ಮೂರು ದಿನಗಳ ನೂತನ ತಂತ್ರಜ್ಞಾನ ಮಾಹಿತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ನಮ್ಮ ಬ್ಯಾಂಕಿನ ವತಿಯಿಂದ ಸಿಬ್ಬಂದಿಗಳಿಗೆ ಅಗತ್ಯವಿರುವ ತರಬೇತಿ ಹಾಗೂ ತಾಂತ್ರಿಕ ವ್ಯವಸ್ಥೆಗಳನ್ನು ಕಾಲಕಾಲಕ್ಕೆ ಮಾಡಿಕೊಡಲು ಬ್ಯಾಂಕ್ ಸದಾ ಸಿದ್ಧವಿದೆ. ತಂತ್ರಜ್ಞಾನ ಬದಲಾದಂತೆ ಸಿಬ್ಬಂದಿಗಳು ಕೂಡ ಸ್ವಯಂಪ್ರೇರಿತರಾಗಿ ಹೊಸ ಮಾಹಿತಿ ಪಡೆದುಕೊಂಡು ಅಪ್ಡೇಟ್ ಆಗಬೇಕು ಎಂದು ತಿಳಿಸಿದರು.
ತರಬೇತುದಾರರಾಗಿ ಆಗಮಿಸಿದ್ದ ವಿ-ಸೋಫ್ಟ್ ಟೆಕ್ನಾಲಜಿ ಕಂಪನಿಯ ಚೀಫ್ ಎಂಜಿನಿಯರ್ ಮಧುಸೂದನ್ ಸಕಲೇಶಪುರ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.
ಬ್ಯಾಂಕಿನ ತಾಂತ್ರಿಕ ಯೋಜನೆಗಳ ವಿವರಣೆ:
ಕಾರ್ಯಕ್ರಮ ನಿರ್ವಹಿಸಿ ಮಾತನಾಡಿದ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ ಶೆಟ್ಟಿ ಅವರು, ಪ್ರಸ್ತುತ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಡಿಜಿಟಲೀಕರಣದ ನಿಟ್ಟಿನಲ್ಲಿ ಬ್ಯಾಂಕು ಕೈಗೊಂಡಿರುವ ವಿವಿಧ ಯೋಜನೆಗಳು ಮತ್ತು ಅವುಗಳ ಅನುಷ್ಠಾನದ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಧರ ಗೌಡ, ನಿರ್ದೇಶಕರುಗಳಾದ ಚಂದ್ರಶೇಖರ ರಾವ್ ಬಪ್ಪಳಿಗೆ, ಮಲ್ಲೇಶ ಕುಮಾರ, ಸುಜೀಂದ್ರ ಪ್ರಭು, ಶ್ರೀಧರ ಪಟ್ಲ, ಗಣೇಶ ಕೌಕ್ರಾಡಿ, ಹರೀಶ್ ಭಿಜತ್ರೆ, ವೀಣಾ ಹಾಗೂ ಕೆ. ವಿಶ್ವಾಸ ಶೆಣೈ ಉಪಸ್ಥಿತರಿದ್ದರು. ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಪುತ್ತೂರು ಶಾಖೆಯ ಶಾಖಾಧಿಕಾರಿ ಚಿದಂಬರ ಸ್ವಾಗತಿಸಿದರು. ವಿಟ್ಲ ಶಾಖೆಯ ಶಾಖಾಧಿಕಾರಿ ಜ್ಯೋತಿ ಎನ್. ಎಸ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

