ವಿಶ್ವಕರ್ಮ ಸಹಕಾರ ಬ್ಯಾಂಕಿನ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎ ಶಾಂತಾರಾಮ ಶೆಟ್ಟಿ ಶ್ಲಾಘನೆ
ಮಂಗಳೂರು: ಐವತ್ತು ವರ್ಷಗಳ ಹಿಂದೆ ಬಿ.ಹರೀಶ್ಚಂದ್ರ ಆಚಾರ್ಯ ಅವರು ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಸಹಯೋಗದೊಂದಿಗೆ ನೆಟ್ಟ ಸಣ್ಣ ಸಸಿ ಇಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಎಂಬ ಹೆಸರಿನೊಂದಿಗೆ ವಿಶಾಲವಾಗಿ ಬೆಳೆದು ನಿಂತಿದೆ. ಮೂಲಭೂತವಾಗಿ ಒಂದು ಆರ್ಥಿಕ ಸಂಸ್ಥೆಯಾಗಿದ್ದರೂ, ಕೇವಲ ಹಣಕಾಸಿನ ವ್ಯವಹಾರವಷ್ಟೇ ಅಲ್ಲದೆ, ನಿರಂತರ ಸ್ವಚ್ಛ ಭಾರತ ಅಭಿಯಾನ, ಸದಸ್ಯರ ಮರಣ, ಅಪಘಾತ ಹಾಗೂ ಇನ್ನಿತರ ಸಂದರ್ಭದಲ್ಲಿ ಸಾಂತ್ವನ ಯೋಜನೆಯ ಹೆಸರಿನಲ್ಲಿ ನಿಧಿ ಸ್ಥಾಪಿಸಿ ಸಮಾಜಮುಖಿಯಾಗಿಯೂ ಮುಂಚೂಣಿಯಲ್ಲಿ ನಿಂತು ವಿಶ್ವಕರ್ಮ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಜೊತೆ, ತಮ್ಮ ಸದಸ್ಯರ ಜೊತೆ ನಾವಿದ್ದೇವೆ ಎಂಬ ಭಾವನೆ ಮೂಡಿಸಿ ಸದಸ್ಯರ ಸಮಗ್ರ ಕಲ್ಯಾಣದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ವಿಶ್ವಕರ್ಮ ಸಹಕಾರ ಬ್ಯಾಂಕಿನ ಸ್ವರ್ಣ ಜಯಂತಿ ವರ್ಷದ ಮುಂದಿನ ಹಂತದ ಕಾರ್ಯಕ್ರಮಗಳ ಚಾಲನೆ, ಸಂಸ್ಥಾಪನಾ ದಿನಾಚರಣೆ ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ ಉತ್ಪನ್ನಗಳ ಬಿಡುಗಡೆ ಹಾಗೂ ಸದಸ್ಯರ ಕೌಶಲ್ಯಾಭಿವೃದ್ಧಿ ಯೋಜನೆಯ ಚಾಲನೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ಕಡೆ ಆರ್ಬಿಐ ಮತ್ತೊಂದು ಕಡೆ ಸಹಕಾರ ಇಲಾಖೆ ಇವೆರಡರ ಮಧ್ಯೆ ಸಹಕಾರ ಬ್ಯಾಂಕುಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಅದರ ನಡುವೆಯೂ ತಮ್ಮ ಸದಸ್ಯರಿಗೆ ಮೌಲ್ಯವರ್ಧಿತ ಸೇವೆ ಸಿಗಬೇಕು ಎಂಬ ನಿಟ್ಟಿನಲ್ಲಿ ಸಹಕಾರ ಬ್ಯಾಂಕುಗಳು ಕೆಲಸ ಮಾಡುತ್ತಿವೆ. ಒಂದು ವರ್ಷದಿಂದ ಸ್ವಚ್ಛ ಭಾರತ ಅಭಿಯಾನದಂಥ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಲ್ಲದೆ, ಸದಸ್ಯರ ಸಾಂತ್ವನದ ಯೋಜನೆಯನ್ನು ರೂಪುಗೊಳಿಸಿ ಸದಸ್ಯರ ನೋವು ನಲಿವುಗಳಲ್ಲಿ ಜೊತೆಯಾಗುರುವುದು ಮಾನವೀಯ ಕೆಲಸ. ಇದರ ಜೊತೆ ತಮ್ಮ ಸದಸ್ಯರಲ್ಲಿ ಆರ್ಥಿಕ ಅರಿವು ಮೂಡಿಸುವ ಅಭಿಯಾನವನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆಯುತ್ತಿರುವುದು ಬ್ಯಾಂಕಿನ ಜವಾಬ್ದಾರಿಯುತ ಹೊಣೆಗಾರಿಕೆಯನ್ನು ಪ್ರತಿಪಾದಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಗ್ರಾಹಕ -ಸದಸ್ಯ -ಸಿಬ್ಬಂದಿ ಕೇಂದ್ರಿತ ಯೋಜನೆಗಳು
ಪ್ರಾಸ್ತಾವಿಕವಾಗಿ ಆಶಯ ಮಾತುಗಳನ್ನಾಡಿದ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್. ಆರ್. ಹರೀಶ್ ಆಚಾರ್ಯ, ಬ್ಯಾಂಕಿನ ಸ್ವರ್ಣ ಜಯಂತಿ ಅಂಗವಾಗಿ ಪ್ರಸಕ್ತ ವರ್ಷ ಜಾರಿಗೆ ತರಲಾಗುವ ಹಲವಾರು ಗ್ರಾಹಕ -ಸದಸ್ಯ -ಸಿಬ್ಬಂದಿ ಕೇಂದ್ರಿತ ಯೋಜನೆಗಳ ಮಾಹಿತಿ ನೀಡಿದರು. ಜುಬಿಲಿಗಳು ಯಾವುದೇ ಸಂಸ್ಥೆಯ ಮರುನಿರ್ಮಾಣದ ಪ್ರಕ್ರಿಯೆಯ ಹಂತ. ಸಂಸ್ಥೆಯ ಅವಶ್ಯಕತೆಯನ್ನು ಅನುಸರಿಸಿ ಜ್ಯುಬಿಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಈ ಕಾರ್ಯಕ್ರಮಗಳ ಮೂಲಕ ಸಂಸ್ಥೆಯ ವ್ಯವಹಾರಿಕ ಅಭಿವೃದ್ಧಿ ಮತ್ತು ಸದಸ್ಯರ ಕಲ್ಯಾಣದ ಉದ್ದೇಶವನ್ನು ಹೊಂದಿರಬೇಕಾಗುತ್ತದೆ. ಹಾಗಾಗಿ ವಿಶ್ವಕರ್ಮ ಸಹಕಾರ ಬ್ಯಾಂಕಿನ ಸ್ವರ್ಣ ಸಂಭ್ರಮದ ಮುಂದಿನ ಹಂತದ ಕಾರ್ಯಕ್ರಮಗಳ ಭಾಗವಾಗಿ ಸದಸ್ಯ -ಗ್ರಾಹಕ -ಸಿಬ್ಬಂದಿ ಕೇಂದ್ರಿತ ಚಟುವಟಿಕೆಗಳನ್ನು ಜಾರಿಗೆ ತರಲಾಗುತ್ತಿದೆ. ಕಳೆದೊಂದು ವರ್ಷದಿಂದ ನಡೆಸಿಕೊಂಡು ಬಂದ ಸ್ವಚ್ಛ ಭಾರತ ಅಭಿಯಾನದ ಐವತ್ತು ಸ್ವಚ್ಛ ಭಾರತ ಕಾರ್ಯಕ್ರಮಗಳು ಸಮಾಜಮುಖಿ ಧೋರಣೆಯಿಂದ ಕೂಡಿದೆ. ಜೂನ್ 7ರಂದು ಇದರ ಸಮಾರೋಪ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ಸದಸ್ಯರ ಮಕ್ಕಳ ಕೌಶಲ್ಯಾಭಿವೃದ್ಧಿ ಯೋಜನೆಯನ್ನು ಪ್ರಕಟಿಸಿ ಅದರ ಮೂಲಕ ಸದಸ್ಯರ ಮಕ್ಕಳು ಐಟಿಐ ಮತ್ತು ಪಾಲಿಟೆಕ್ನಿಕ್ ಶಿಕ್ಷಣಕ್ಕೆ ಸೇರ್ಪಡೆಗೊಂಡಲ್ಲಿ ಅವರಿಗೆ ಹತ್ತು ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಈ ಮೂಲಕ ಉದ್ಯೋಗವನ್ನು ಕಂಡುಕೊಳ್ಳುವ ಕೌಶಲ್ಯಾಧಾರಿತ ಶಿಕ್ಷಣದ ಕಡೆಗೆ ಕುಶಲಕರ್ಮಿ ಸಮಾಜ ಸಾಗಬೇಕು ಎಂದು ಹರೀಶ್ ಆಚಾರ್ಯ ಅವರು ಹೇಳಿದರು.

ಸದಸ್ಯರ ಸಂಪರ್ಕ ಅಭಿಯಾನ
ವಿಶ್ವಕರ್ಮ ಬ್ಯಾಂಕ್ನಲ್ಲಿ 20,000ಕ್ಕೂ ಅಧಿಕ ಸದಸ್ಯರಿದ್ದು ಅವರೆಲ್ಲರನ್ನೂ ಸಂಪರ್ಕಿಸಿ ಅವರಿಗೆ ಆರ್ಥಿಕ ಅರಿವು ಹಾಗೂ ಬ್ಯಾಂಕಿನ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುವ ಅಭಿಯಾನವನ್ನು ರೂಪಿಸಲಾಗಿದೆ. ಮುಂದಿನ ಒಂದು ವರ್ಷ ಎಲ್ಲ ಸದಸ್ಯರ ಮನೆಗಳಿಗೆ ಬ್ಯಾಂಕಿನ ಸಿಬ್ಬಂದಿಗಳು ಭೇಟಿ ನೀಡಿ ಅವರಿಗೆ ಆರ್ಥಿಕ ಶಿಸ್ತು ಹಾಗೂ ಬ್ಯಾಂಕಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಇದರ ಜೊತೆಗೆ ಸದಸ್ಯರಿಗೆ ಕನಿಷ್ಠ ಆರ್ಥಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಈ ಅಭಿಯಾನದ ಮೂಲಕ ವಿಶ್ವಕರ್ಮ ಬ್ಯಾಂಕ್ ಅನ್ನು ಮರುರೂಪಿಸುವ ಕೆಲಸ ಮಾಡಲಾಗುವುದು ಎಂದು ಡಾ. ಎಸ್ ಆರ್ ಹರೀಶ್ ಆಚಾರ್ಯ ತಿಳಿಸಿದರು.
ಬ್ಯಾಂಕ್ ಸಿಬ್ಬಂದಿಗಳು ಸದಸ್ಯರ ಕುಟುಂಬದ ವೈದ್ಯರಂತೆ
ಮೂಡುಬಿದಿರೆ ಎನ್.ಎಸ್ ಪಾಲಿಟೆಕ್ನಿಕ್ನ ಉಪನ್ಯಾಸಕರಾದ ಡಾ. ಎಸ್. ಪಿ. ಗುರುದಾಸ್ ಸಂಸ್ಥಾಪನಾ ಸಂದೇಶ ನೀಡಿ, ಗ್ರಾಹಕರು ಬ್ಯಾಂಕಿಗೆ ಸಹಾಯ (ಹೆಲ್ಪ್) ಮತ್ತು ಭರವಸೆ(ಹೋಪ್) ಬಯಸಿ ಬರುತ್ತಾರೆ. ಅವರನ್ನು ಆದರದಿಂದ ಕಂಡು ಸಿಬ್ಬಂದಿಗಳು ಗ್ರಾಹಕರಿಗೆ ಕುಟುಂಬದ ವೈದ್ಯರಂತೆ ಸಲಹೆ ಮತ್ತು ನೆರವು ನೀಡಬೇಕು ಎಂದು ಹೇಳಿದರು. 1970ರ ದಶಕದಲ್ಲಿ ಬ್ಯಾಂಕಿನಲ್ಲಿ ಸಾಲ ಕೇಳಲು ಹೋದ ಚಿನ್ನದ ಕೆಲಸ ಮಾಡುವ ಹಿರಿಯರಿಗೆ ಆದ ಅವಮಾನವೇ ವಿಶ್ವಕರ್ಮ ಬ್ಯಾಂಕಿನ ಉಗಮಕ್ಕೆ ಕಾರಣವಾಯಿತು ಎಂದು ಅಂದಿನ ಘಟನೆಗಳನ್ನು ಸ್ಮರಿಸಿದ ಅವರು, ವಿಶ್ವಕರ್ಮ ಸಮಾಜ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಕುಶಲಕರ್ಮಿ ಸಮುದಾಯದ ಆರ್ಥಿಕತೆ ಬಲಗೊಳ್ಳಬೇಕು ಎಂಬ ಮೂಲ ಉದ್ದೇಶದಿಂದ ಆರಂಭವಾದ ವಿಶ್ವಕರ್ಮ ಸಹಕಾರ ಬ್ಯಾಂಕ್ ಇಂದು ಉನ್ನತಿಯ ಮೇರು ಹಾದಿಯಲ್ಲಿದೆ. ವಿಶ್ವಕರ್ಮ ಬ್ಯಾಂಕನ್ನು ಇನ್ನಷ್ಟು ಬಲಶಾಲಿಯಾಗಿ ಕಟ್ಟಬೇಕು ಎಂಬ ಉದ್ದೇಶದಿಂದ ಕಳೆದ ವರ್ಷ ಸಂಸ್ಥಾಪನಾ ದಿನಾಚರಣೆಯ ವೇಳೆ ಪ್ರಾರಂಭವಾದ ಹಲವು ಸಮಾಜಮುಖಿ ಚಟುವಟಿಕೆಗಳು ಇಂದು ಸದಸ್ಯರು ಮತ್ತು ಸಮಾಜದ ಮುಂದೆ ಇದೆ. ಅದರ ಮುಂದುವರಿದ ಭಾಗವಾಗಿ ಮುಂದಿನ ಹಂತದ ಸದಸ್ಯರ ಕೌಶಲ್ಯಾಭಿವೃದ್ಧಿ ಯೋಜನೆ ಹಾಗೂ ಸದಸ್ಯರ ಅರಿವು ಮತ್ತು ಜಾಗೃತಿ ಅಭಿಯಾನದ ಯೋಜನೆಗಳು ಸಮಗ್ರ ಅಭಿವೃದ್ಧಿ ಕೇಂದ್ರಿತವಾಗಿದೆ ಎಂದರು.
ಬ್ಯಾಂಕಿನ ಸಿಬ್ಬಂದಿಗಳು ಬ್ಯಾಂಕ್ ಸ್ಥಾಪನೆಯ ಮೂಲ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಬ್ಯಾಂಕಿನ ವಿವಿಧ ಯೋಜನೆಗಳ ಬಗ್ಗೆ ಮೊದಲು ತಾವು ತಿಳಿದುಕೊಂಡು ನಂತರ ಬ್ಯಾಂಕಿಗೆ ಬರುವ ಗ್ರಾಹಕರಿಗೆ, ಸದಸ್ಯರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಸಿಬ್ಬಂದಿಗಳಲ್ಲಿ ಅರಿವಿನ ಕೊರತೆ ಇದ್ದರೆ ಯಾವುದೇ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಗ್ರಾಹಕರ ಜೊತೆ, ಸದಸ್ಯರ ಜೊತೆ ಸಿಬ್ಬಂದಿಗಳು ಮಾನವೀಯ ಸಂಬಂಧಗಳನ್ನು ಹೊಂದಿರಬೇಕು. ಹೈ ಸ್ಪೀಡ್ ಸರ್ವೀಸ್, ಹೈ ಕ್ವಾಲಿಟಿ ಸರ್ವೀಸ್ ಬಯಸಿ ಬರುವ ಗ್ರಾಹಕರಿಗೆ ಅದನ್ನು ಒದಗಿಸಲು ಸಿದ್ಧರಿರಬೇಕು. ಬ್ಯಾಂಕಿನ ಸದಸ್ಯರ ಮಾಹಿತಿಗಳು ಸಿಬ್ಬಂದಿಗಳ ಬೆರಳ ತುದಿಯಲ್ಲಿರಬೇಕು ಎಂದು ಕಿವಿಮಾತು ಈ ಸಂದರ್ಭದಲ್ಲಿ ಹೇಳಿದರು.
ವಿಶ್ವಕರ್ಮ ಸಮುದಾಯದವರದ್ದು ಮಾನವೀಯ ಹೃದಯ
ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್ ರೈ ಮುಖ್ಯ ಅತಿಥಿಯಾಗಿ ಮಾತನಾಡಿ, ವಿಶ್ವಕರ್ಮ ಸಮುದಾಯದವರದ್ದು ಮಾನವೀಯ ಹೃದಯ ಎಂದು ಕೊಂಡಾಡಿದರು. ದಕ್ಷಿಣ ಕನ್ನಡ -ಉಡುಪಿ ಜಿಲ್ಲೆಗಳಲ್ಲಿ ಸಹಕಾರ ಚಳವಳಿ ಬಲವಾಗಿ ಬೇರೂರಲು ಇಲ್ಲಿನ ಸಹಕಾರ ಸಂಘಗಳು ಜನರಿಗೆ ಒದಗಿಸುತ್ತಿರುವ ಆರ್ಥಿಕ ಶಕ್ತಿ ಹಾಗೂ ಸೇವೆಗಳು ಕಾರಣ. ದೇಶ -ವಿದೇಶಗಳ ಹಲವಾರು ಅಧ್ಯಯನ ಸಂಸ್ಥೆಗಳು ದಕ್ಷಿಣ ಕನ್ನಡ -ಉಡುಪಿ ಜಿಲ್ಲೆಗೆ ಆಗಮಿಸಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಅಧ್ಯಯನ ಮಾಡಿ ಹೋಗುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಕಳೆದ ವರ್ಷ ಜಾರಿಗೆ ತರಲಾದ ತಲಾ 10,000 ರೂ.ಗಳ ಸದಸ್ಯರ ಮರಣ ಸಾಂತ್ವನ ನಿಧಿಯನ್ನು 14 ಫಲಾನುಭವಿಗಳಿಗೆ ಅರ್ಪಿಸಲಾಯಿತು. ಒಬ್ಬರಿಗೆ ಚಿಕಿತ್ಸಾ ವೆಚ್ಚ ಭರಿಸಲಾಯಿತು. ಬ್ಯಾಂಕಿನಿಂದ ಹೊರತರಲಾದ ಕ್ಯೂಆರ್ ಕೋಡ್, ಮೊಬೈಲ್ ಆಪ್, ಸದಸ್ಯರ ಕೌಶಲ್ಯಭಿವೃದ್ಧಿ ಯೋಜನೆಯನ್ನು ಬಿಡುಗಡೆ ಮಾಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷರಾದ ಕೆ.ಎಲ್ ಹರೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಜಗದೀಶ್ ಆಚಾರ್ಯ ಪಡುಪಣಂಬೂರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಸಂತ ಅಡ್ಯಂತಾಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕರಾದ ಭಾಸ್ಕರ ಆಚಾರ್ಯ ಡಿ., ಸೀತಾರಾಮ ಆಚಾರ್ಯ ಬಿ, ಕಪ್ಪೆಟ್ಟು ಜಗದೀಶ್ ಆಚಾರ್ಯ, ಗುರುಪ್ರಸಾದ್ ಶೆಟ್ಟಿ ಬಿ., ಹರಿಪ್ರಸಾದ್, ಶರತ್ ಕೆ. ಆಚಾರ್ಯ, ಜಯಶ್ರೀ ಎಸ್.ವಿ ಆಚಾರ್, ರೇಷ್ಮಾ ಚಂದನ್, ಬಿಜು ಜಯ, ಪಿ. ಪ್ರಶಾಂತ್ ಆಚಾರ್ಯ, ಬಿ.ಜಯಪ್ರಕಾಶ್ ಆಚಾರ್ಯ ಹಾಜರಿದ್ದರು. ನಿರ್ದೇಶಕರಾದ ಭರತ್ ನಿಡ್ಪಳ್ಳಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪಿ ವಂದಿಸಿದರು. ವಾರುಣಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

