ಬಂಟ್ವಾಳ: ಸಹಕಾರ ಸಂಘಗಳಲ್ಲಿನ ಸದಸ್ಯರ ಅನುಕೂಲಕ್ಕೆ ಜಾರಿಯಲ್ಲಿರುವ ಹಾಗೂ ಫಲಾನುಭವಿಗಳ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ವೈದ್ಯಕೀಯ ಚಿಕಿತ್ಸಾ ವೆಚ್ಚದ ನಗದುರಹಿತ ಸೌಲಭ್ಯದೊಂದಿಗೆ ಚಾಲ್ತಿಯಲ್ಲಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು 2025-26ನೇ ಸಾಲಿಗೆ ಸಂಬಂಧಿಸಿ ಮರುಜಾರಿಗೊಳಿಸಲಾಗಿದ್ದು,ಈಗಾಗಲೇ ಈ ಯೋಜನೆಯಲ್ಲಿ ನೋಂದಾಯಿಸಿಕೊಂಡ ಸದಸ್ಯರು ನವೀಕರಣ ಮಾಡಬಹುದಾಗಿದೆ. ನೋಂದಣಿ ಮಾಡಿಕೊಳ್ಳದ ಸದಸ್ಯರಿಗೆ ಹೊಸದಾಗಿ ನೋಂದಾಯಿಸಿಕೊಳ್ಳಲೂ ಅವಕಾಶ ಕಲ್ಪಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಈ ಯೋಜನೆ 2025-26ನೇ ಸಾಲಿಗೆ ಸಂಬಂಧಿಸಿ ಚಿಕಿತ್ಸಾ ಅವಧಿಯನ್ನು 01-04-2026ರಿಂದ 31-03-2027ರವರೆಗೆ ನಿಗದಿಗೊಳಿಸಿದ್ದು, 2026ರ ಜನವರಿ 3ರಿಂದ ನೋಂದಣಿಯನ್ನು ಪ್ರಾರಂಭಿಸಿದ್ದು, 2026ರ ಮಾರ್ಚ್ ಅಂತ್ಯದ ತನಕ ನೋಂದಣಿ ದಿನಾಂಕ ನಿಗದಿಗೊಳಿಸಲಾಗಿದೆ. ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಇಚ್ಚಿಸುವ ಸಹಕಾರ ಸಂಘಗಳಲ್ಲಿನ ಸದಸ್ಯರು ಆಧಾರ್ ಕಾರ್ಡ್, ಪಡಿತರ ಚೀಟಿಯ ಜೆರಾಕ್ಸ್ ಪ್ರತಿ ಮತ್ತು ಭಾವಚಿತ್ರದೊಂದಿಗೆ ತಾವು ಸದಸ್ಯರು ಆಗಿರುವ ಸಂಘದಲ್ಲಿ ಅರ್ಜಿ ಸಲ್ಲಿಸಬಹುದು. ಸಂಬಂಧಿತ ರೈತ ಸದಸ್ಯರು ಯಾವುದಾದರೂ ಒಂದು ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿ ಒಂದು ತಿಂಗಳು ಪೂರ್ಣಗೊಂಡಿದ್ದರೆ ಈ ಯೋಜನೆಗೆ ಅರ್ಹರಾಗುತ್ತಾರೆ. ಗ್ರಾಮೀಣ ಸಹಕಾರ ಸಂಘಗಳ ವ್ಯಾಪ್ತಿಗೆ ಸಂಬಂಧಿಸಿ ಕುಟುಂಬದಲ್ಲಿ ನಾಲ್ಕು ಮಂದಿ ಸದಸ್ಯರು ಇರುವ ತನಕ ರೂ. 500 ಪಾವತಿಸತಕ್ಕದ್ದು. ಪಡಿತರ ಚೀಟಿಯಲ್ಲಿ 4 ಸದಸ್ಯರ ನಂತರದ ಹೆಚ್ಚಿನ ಪ್ರತಿ ಸದಸ್ಯರಿಗೆ ತಲಾ ರೂ 100 ಪಾವತಿಸತಕ್ಕದ್ದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ಜಾತಿ ಪ್ರಮಾಣಪತ್ರದ ಪ್ರತಿ ಹಾಜರು ಪಡಿಸಿದ್ದಲ್ಲಿ ಉಚಿತವಾಗಿ ನೋಂದಣಿ ಮತ್ತು ನವೀಕರಣ ಮಾಡಿಕೊಡಲಾಗುವುದು. ಆಸಕ್ತ ರೈತ ಸದಸ್ಯರು ಹಾಗೂ ಕುಟುಂಬದವರು ತಮ್ಮ ಕಾರ್ಯವ್ಯಾಪ್ತಿಯ ಸಮೀಪದ ಪ್ರಾಥಮಿಕ ಸಹಕಾರ ಸಂಘಗಳನ್ನು ಸಂಪರ್ಕಿಸಿ ಅಗತ್ಯ ದಾಖಲಾತಿಯೊಂದಿಗೆ ನೋಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆಯಬೇಕಾಗಿ ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

