ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಅಭ್ಯಾಸ ವರ್ಗದಲ್ಲಿ ವಿದ್ಯಾ ವಿಜೇತ ಪೈ ವಿಶ್ಲೇಷಣೆ
ಗುರುವಾಯನಕೆರೆ: ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮವಾಗಿ ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪದಾಧಿಕಾರಿಗಳು ಹಾಗೂ ವಿವಿಧ ಸಹಕಾರಿ ಸಂಸ್ಥೆಗಳ ನಿರ್ದೇಶಕರ ಅಭ್ಯಾಸ ವರ್ಗ ಮಂಗಳವಾರ ಗುರುವಾಯನಕೆರೆಯ “ನಮ್ಮ ಮನೆ ಹವ್ಯಕ ಭವನ”ದಲ್ಲಿ ಜರಗಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿ ಕರ್ನಾಟಕ ರಾಜ್ಯ ಮಹಿಳಾ ಪ್ರಮುಖ್ ವಿದ್ಯಾ ವಿಜೇತ ಪೈ ಮಾತನಾಡಿ, ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ. ಮಹಿಳೆಯರು ಸಹಕಾರಿ ಕ್ಷೇತ್ರದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ, ಸಂಘಟನಾತ್ಮಕವಾಗಿ ಹೆಚ್ಚು ಹೆಚ್ಚು ತೊಡಗಿಸಿಕೊಂಡು ದಕ್ಷಿಣ ಕನ್ನಡ ಸಹಕಾರ ಭಾರತಿಗೆ ಮತ್ತಷ್ಟು ಶಕ್ತಿ ತುಂಬಿಸುವ ಕೆಲಸ ಆಗಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿ ಭಾರತಮಾತೆ ಹಾಗೂ ಸಹಕಾರ ಭಾರತಿ ಸಂಸ್ಥಾಪಕರಾದ ಲಕ್ಷ್ಮಣರಾವ್ ಇನಾಂದಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಉಜಿರೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪುಷ್ಪಾವತಿ ಆರ್ ಶೆಟ್ಟಿ ರಾಜ್ಯದಲ್ಲಿ ಪ್ರಪ್ರಥಮ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಭಾರತಿ ವತಿಯಿಂದ ಜಿಲ್ಲಾ ಮಹಿಳಾ ಅಭ್ಯಾಸ ವರ್ಗ ನಡೆಸಲಾಗುತ್ತಿದ್ದು, ಸಹಕಾರಿ ಭಾರತಿ ಬಂಧುಗಳು ಅಭ್ಯಾಸ ವರ್ಗದಲ್ಲಿ ಸಿಗುವಂತಹ ಮಾಹಿತಿ ಪಡೆದುಕೊಂಡು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಸಹಕಾರ ಭಾರತಿ ಕ್ಷೇತ್ರದ ಬಲವರ್ಧನೆಗೆ ಕಾರಣವಾಗಬೇಕು ಎಂದು ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಭಾರತಿ ಮಹಿಳಾ ಪ್ರಮುಖ್ ಸುಭದ್ರಾ ಎನ್.ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಭಾರತಿ ಮಹಿಳಾ ಸಹ ಪ್ರಮುಖ್ ಅಮೂಲ್ಯ ಶೆಟ್ಟಿ ಕಟೀಲು ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮೊದಲ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಸಹಕಾರ ಭಾರತಿ ರಾಷ್ಟ್ರೀಯ ಗ್ರಾಹಕ ಪ್ರಕೋಷ್ಠದ ಸಂಚಾಲಕಿ ಭಾರತಿ ಭಟ್ ಸಹಕಾರ ಭಾರತಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿ, ಕಳೆದ 46 ವರ್ಷಗಳಿಂದ ಸಹಕಾರಿ ರಂಗದಲ್ಲಿ ದೇಶದ ಏಕೈಕ ರಾಷ್ಟ್ರಮಟ್ಟದ ಸರಕಾರೇತರ ರಾಜಕೀಯ ರಹಿತ ಸ್ವಯಂಸೇವಾ ಸಂಸ್ಥೆಯಾಗಿರುವ ಸಹಕಾರ ಭಾರತಿಯು ಸಹಕಾರಿ ಕ್ಷೇತ್ರದ ಬಲವರ್ಧನೆಗಾಗಿ ನಡೆಸಿಕೊಂಡು ಬರುತ್ತಿರುವ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಎರಡನೇ ಅವಧಿಯಲ್ಲಿ ಶ್ರೀನಿವಾಸ್ ಮಹಾವಿದ್ಯಾಲಯ ಮಂಗಳೂರಿನ ಸಂಶೋಧನಾ ಪ್ರಾಧ್ಯಾಪಕಿ ಡಾ.ಸುಧಾ ಕೆ ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಅತ್ಯುತ್ತಮವಾದ ಅವಕಾಶಗಳಿದ್ದು, ಸಹಕಾರಿ ಸಂಸ್ಥೆಯ ನಿರ್ದೇಶಕರಾಗಿ ಆಡಳಿತ ನಿರ್ವಹಣೆ, ಸಹಕಾರಿ ಕಾಯಿದೆಗಳ ಬಗ್ಗೆ ಸರಿಯಾದ ಮಾಹಿತಿ ಮತ್ತು ಅನುಭವ ಪಡೆದುಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಸಮಾರೋಪ ಸಮಾರಂಭ
ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಭಾರತಿ ಮಹಿಳಾ ಪ್ರಮುಖ್ ಸುಭದ್ರಾ ಎನ್.ರಾವ್ ಪೆರ್ಮಂಕಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ದಕ್ಷಿಣ ಕನ್ನಡ ಬಾಲನ್ಯಾಯ ಮಂಡಳಿ ಸದಸ್ಯೆ ಹಾಗೂ ಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಸುಮನಾ ಶರಣ್ ಮಾತನಾಡಿ, ಮಹಿಳೆಯರನ್ನು ಉತ್ತಮ ಸಹಕಾರಿಗಳಾಗಿ ರೂಪಿಸುವ ಉದ್ದೇಶದಿಂದ ಮಹಿಳಾ ಅಭ್ಯಾಸ ವರ್ಗ ಆಯೋಜನೆ ಮಾಡಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡವರು ಉತ್ತಮ ಸಹಕಾರಿಗಳಾಗಿ ಸಹಕಾರ ಭಾರತಿಯ ಘನತೆ, ಗೌರವಗಳಿಗೆ ಚ್ಯುತಿಯಾಗದಂತೆ ನಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸಹಕಾರ ಭಾರತಿಯ ಜಿಲ್ಲಾ ಅಧ್ಯಕ್ಷರಾದ ಸುಧಾಕರ ರೈ ಬೋಳಂತೂರು ಮಾತನಾಡಿ, ಸಹಕಾರಿ ಕ್ಷೇತ್ರದ ಬೈಲಾ ಹಾಗೂ ಕಾಯ್ದೆಗಳಲ್ಲಿ ಕಾಲಕಾಲಕ್ಕೆ ಆಗುವ ಬದಲಾವಣೆಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು, ಸಹಕಾರಿ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಸಕ್ರಿಯವಾಗಿ ತೊಡಗಿಕೊಳ್ಳಬೇಕೆಂದು ತಿಳಿಸಿದರು. ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಮಾತನಾಡಿ, ರಾಜ್ಯದ 32 ಜಿಲ್ಲೆ ಮತ್ತು 3 ಮಹಾನಗರಗಳಲ್ಲಿ ಸಹಕಾರ ಭಾರತಿ ಸಕ್ರಿಯವಾದ ಜಿಲ್ಲಾ ಸಮಿತಿಗಳನ್ನು ಹೊಂದಿದ್ದು, ರಾಜ್ಯದ ಐದು ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಜಿಲ್ಲಾ ಮಹಿಳಾ ಸಮಿತಿಯ ರಚನೆಯಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಭಾರತಿ ಮಹಿಳಾ ಅಭ್ಯಾಸ ವರ್ಗವು ಸಂಖ್ಯಾತ್ಮಕವಾಗಿ ಹಾಗೂ ಗುಣಾತ್ಮಕವಾಗಿ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ನಡೆದಿದ್ದು, ಜಿಲ್ಲೆಯ ಸಂಘಟನಾತ್ಮಕ ಚಟುವಟಿಕೆಗಳಿಗೆ ವೇಗವನ್ನು ನೀಡುತ್ತಿರುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪ್ರಮುಖ್ ಸುಭದ್ರಾ ಎನ್.ರಾವ್ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನೆಲ್ಲ ತಾಲೂಕುಗಳಿಂದ ಬಹು ಸಂಖ್ಯೆಯಲ್ಲಿ ಉತ್ಸಾಹದಿಂದ ಮಹಿಳೆಯರು ಪಾಲ್ಗೊಂಡಿರುವುದು ಸಹಕಾರಿ ಭಾರತಿ ಸಂಘಟನೆಗೆ ಇನ್ನಷ್ಟು ಶಕ್ತಿ ತುಂಬುವಂತಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೂಡ ಮಹಿಳಾ ಅಭ್ಯಾಸ ವರ್ಗಗಳನ್ನು ನಡೆಸಿ, ತಳಮಟ್ಟದವರೆಗೆ ಸಂಘಟನೆಯ ಜಾಲವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಸಹಕಾರ ಭಾರತಿ ರಾಜ್ಯ ಮಹಿಳಾ ಪ್ರಮುಖ್ ವಿದ್ಯಾ ವಿಜೇತ ಪೈ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಬಿ.ಆರ್, ರಾಜ್ಯ ಸಹ ಕಾರ್ಯದರ್ಶಿ ಗಣೇಶ್ ಶೆಣೈ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಆಳ್ವ, ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್, ಜಿಲ್ಲಾ ಉಪಾಧ್ಯಕ್ಷರಾದ ವಿಶ್ವನಾಥ ಎಮ್, ಕೆ.ವಿ ಪ್ರಸಾದ್, ಕೆಎಂಎಫ್ ಮಂಗಳೂರಿನ ನಿರ್ದೇಶಕರುಗಳಾದ ಭರತ್ ನೆಕ್ರಾಜೆ, ಪ್ರಭಾಕರ್, ಸವಿತಾ ಎನ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಭಾರತಿ ಉಪಾಧ್ಯಕ್ಷೆ ವಿಮಲಾ ಸೋಮಶೇಖರ್ ಪೈಕ ಅರಂತೋಡು, ಜಿಲ್ಲಾ ಕಾರ್ಯದರ್ಶಿ ಶ್ರೀಲತಾ ಕೆ.ಶೆಟ್ಟಿ ಕರೋಪಾಡಿ, ಸಹಕಾರ ಭಾರತಿ ಮಂಗಳೂರು ತಾಲೂಕು ಮಹಿಳಾ ಪ್ರಮುಖ್ ಲತಾ ಹೆಗ್ಡೆ, ಕಡಬ ತಾಲೂಕು ಪ್ರಮುಖ್ ಭಾರತಿ ದಿನೇಶ್, ಬಂಟ್ವಾಳ ತಾಲೂಕು ಪ್ರಮುಖ್ ಶಾಂತ ಡಿ ಚೌಟ, ಬೆಳ್ತಂಗಡಿ ತಾಲೂಕು ಪ್ರಮುಖ್ ಭಾರತಿ ಕೆ ಕಣಿಯೂರು, ಜಿಲ್ಲಾ ಪ್ಯಾಕ್ಸ್ ಪ್ರಕೋಷ್ಠದ ಪ್ರಮುಖರಾದ ಈಶ್ವರ ನಾಯ್ಕ್, ಮಂಗಳೂರು ಗ್ರಾಮಾಂತರ ಅಧ್ಯಕ್ಷರಾದ ದಯಾನಂದ ಪೈ, ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರಾದ ವೆಂಕಪ್ಪಯ್ಯ ಕಾರ್ಯದರ್ಶಿ ಪ್ರವೀಣ್ ರೈ, ಸಹಕಾರ ಭಾರತಿ ಜಿಲ್ಲಾ ಹಾಲು ಪ್ರಕೋಷ್ಠದ ಸಂಚಾಲಕ ಪದ್ಮನಾಭ ಶೆಟ್ಟಿ ಅರ್ಕಜೆ ಮೊದಲಾದವರು ಉಪಸ್ಥಿತರಿದ್ದರು.
ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕಿ ವಿಜಯ ಪ್ರಕಾಶ್ ಸಹಕಾರ ಗೀತೆ ಹಾಡಿದರು. ಧರ್ಮಾವತಿ ವಿಟ್ಲ ಸ್ವಾಗತಿಸಿ, ಶೋಭಾ ನಲ್ಲೂರಾಯ ವಂದಿಸಿದರು. ಧನ್ಯ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com





