ಡಾ. ಕುರಿಯನ್ ಕೊಡುಗೆ ಸ್ಮರಣೆಯೇ ಈ ದಿನದ ಪ್ರಮುಖ ಉದ್ದೇಶ
ಸ್ನೇಹಿತರೆ, ಪ್ರತಿವರ್ಷ ನವೆಂಬರ್ 26ರಂದು ಭಾರತದಲ್ಲಿ ರಾಷ್ಟ್ರೀಯ ಹಾಲು ದಿನಾಚರಣೆಯನ್ನು (National Milk Day) ಆಚರಿಸಲಾಗುತ್ತದೆ. ಈ ದಿನವು ಭಾರತದಲ್ಲಿ ‘ಶ್ವೇತಕ್ರಾಂತಿ’ಯ ಪಿತಾಮಹ ಎಂದು ಪ್ರಸಿದ್ಧರಾದ ಡಾ.ವರ್ಗೀಸ್ ಕುರಿಯನ್ ಅವರ ಜನ್ಮದಿನದ ಸವಿನೆನಪಿಗಾಗಿ ಆಚರಿಸಲಾಗುತ್ತದೆ. ಹಾಲು ಮತ್ತು ಡೈರಿ ಉತ್ಪನ್ನಗಳ ಮಹತ್ವವನ್ನು ಎತ್ತಿ ಹಿಡಿಯುವುದು ಹಾಗೂ ಈ ಕ್ಷೇತ್ರದಲ್ಲಿ ಡಾ.ಕುರಿಯನ್ ಅವರ ಕೊಡುಗೆಯನ್ನು ಸ್ಮರಿಸುವುದು ಈ ದಿನದ ಪ್ರಮುಖ ಉದ್ದೇಶ. ತಮಗೆಲ್ಲ ಗೊತ್ತಿರುವ ಹಾಗೆ ಡಾ. ವರ್ಗೀಸ್ ಕುರಿಯನ್ ಶ್ವೇತಕ್ರಾಂತಿಯ ರೂವಾರಿ. ಡಾ. ವರ್ಗೀಸ್ ಕುರಿಯನ್ (ನವೆಂಬರ್ 26, 1921 – ಸೆಪ್ಟೆಂಬರ್ 9, 2012) ರವರು ಒಬ್ಬ ಮಹಾನ್ ಸಾಮಾಜಿಕ ಉದ್ಯಮಿ ಮತ್ತು ವೃತ್ತಿಯಲ್ಲಿ ಒಬ್ಬ ಇಂಜಿನಿಯರ್. ಇಂಜಿನಿಯರಿಂಗ್ ವೃತ್ತಿಯನ್ನು ತೊರೆದು ಭಾರತಕ್ಕೆ ಬಂದ ಇವರು, ಆಗಿನ ಅಗತ್ಯತೆಗೆ ಅನುಗುಣವಾಗಿ ಭಾರತದ ಕ್ಷೀರ ಉದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಗುಜರಾತಿನ ಆನಂದ್ನಲ್ಲಿ ಸಹಕಾರಿ ಹಾಲಿನ ಉತ್ಪಾದಕರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಅಮುಲ್ (AMUL -Anand Milk Union Limited) ಎಂಬ ಬ್ರಾಂಡ್ನ ಯಶಸ್ಸಿಗೆ ಕಾರಣರಾದರು. 1970ರಲ್ಲಿ ಆರಂಭಗೊಂಡ ಆಪರೇಷನ್ ಫ್ಲಡ್ (Operation Flood) ಎಂಬ ವಿಶ್ವದ ಅತಿದೊಡ್ಡ ಡೈರಿ ಅಭಿವೃದ್ಧಿ ಕಾರ್ಯಕ್ರಮದ ಮುಖ್ಯ ಸೂತ್ರಧಾರ ಡಾ. ಕುರಿಯನ್. ಈ ಕಾರ್ಯಕ್ರಮದಿಂದಾಗಿ ಹಾಲಿನ ಕೊರತೆಯನ್ನು ಅನುಭವಿಸುತ್ತಿದ್ದ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿತು. ಲಕ್ಷಾಂತರ ಗ್ರಾಮೀಣ ರೈತರ ಜೀವನಮಟ್ಟವನ್ನು ಸುಧಾರಿಸಿ, ಅವರಿಗೆ ಆರ್ಥಿಕ ಸ್ವಾವಲಂಬನೆ ತಂದುಕೊಟ್ಟ ಹಿರಿಮೆ ಡಾ. ಕುರಿಯನ್ರವರಿಗೆ ಸಲ್ಲುತ್ತದೆ. ಭಾರತಕ್ಕೆ ಇವರ ಕೊಡುಗೆಯನ್ನು ಮನಗಂಡ ಭಾರತೀಯ ಡೈರಿ ಸಂಘ (Indian Dairy Association) 2014ರಲ್ಲಿ ಡಾ. ಕುರಿಯನ್ ಅವರ ಜನ್ಮದಿನವನ್ನು ರಾಷ್ಟ್ರೀಯ ಹಾಲು ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ದಿನವನ್ನು ಆಚರಿಸುವುದರ ಮೂಲಕ, ಹಾಲಿನ ಮಹತ್ವ ಮತ್ತು ಅದರ ಪೌಷ್ಟಿಕಾಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಮತ್ತು ಭಾರತದ ಆರ್ಥಿಕತೆ, ವಿಶೇಷವಾಗಿ ಗ್ರಾಮೀಣ ಜನರ ಜೀವನಕ್ಕೆ ಡೈರಿ ವಲಯವು ನೀಡಿದ ಮತ್ತು ನೀಡುತ್ತಿರುವ ಕೊಡುಗೆಯನ್ನು ಗುರುತಿಸಲಾಗುತ್ತದೆ. ಇಂದು ಸಹಕಾರಿ ಹೈನುಗಾರಿಕೆ ಮಾದರಿಯ ಮೂಲಕ ರೈತರನ್ನು ಸಶಕ್ತಗೊಳಿಸಿದ ಡಾ. ಕುರಿಯನ್ ಅವರ ದೂರದೃಷ್ಟಿ ಮತ್ತು ಸಾಧನೆಯನ್ನು ಸ್ಮರಿಸಲಾಗುತ್ತದೆ.
ಕ್ಷೀರ ಕ್ರಾಂತಿಯ ಮೂಲಕ ಭಾರತವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಿದ ಡಾ. ವರ್ಗೀಸ್ ಕುರಿಯನ್ ಅವರಿಗೆ ಈ ದಿನದಂದು ಗೌರವ ಸಲ್ಲಿಸಿ, ಅವರ ಆದರ್ಶಗಳನ್ನು ಮುಂದುವರೆಸುವ ಸಂಕಲ್ಪ ಮಾಡಬಹುದಲ್ಲವೇ???.
ಹ್ಯಾಪಿ ಬರ್ತೇ ಟು ಯು ಮಿಲ್ಕ್ ಮ್ಯಾನ್ ಆಫ್ ಇಂಡಿಯಾ.
ಲೇಖನ: ಪ್ರೊ. ಮೋಹನ್ ಎಸ್.ಶಿಂಘೆ
ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ
ಮಂಗಳೂರು ವಿಶ್ವವಿದ್ಯಾಲಯ

