ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಾಟೆಕಲ್ ಶಾಖೆಯ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ನಾಟೆಕಲ್ ಶಾಖೆಯಲ್ಲಿ ಜರುಗಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಂಘದ ಸದಸ್ಯರಾದ ಆನಂದ್ ಕೆ, ಎಸ್.ಜಯಪ್ರಸಾದ್, ಅಬ್ಬಾಸ್ ಎಂ., ಮಹಮ್ಮದ್ ಎ.ಎಸ್ ಹಾಗೂ ಮಾಲತಿ ಕೆ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ಆನಂದ್ ಕೆ ಮಾತನಾಡಿ ಯಾವುದೇ ಒಂದು ಸಂಘ ಬೆಳೆಯಬೇಕಾದರೆ ಎರಡು ಅಂಶಗಳು ಮುಖ್ಯವಾಗಿರುತ್ತದೆ. ಒಂದು ಸಂಸ್ಥೆಯನ್ನು ಮುನ್ನಡೆಸುವ ವ್ಯಕ್ತಿಯ ಆತ್ಮಸ್ಥೈರ್ಯ, ಇನ್ನೊಂದು ಅವರಿಗಿರುವ ವ್ಯಕ್ತಿತ್ವ. ಇವೆರಡು ನಮ್ಮ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರಲ್ಲಿ ಕಾಣಸಿಗುತ್ತದೆ. ಮುಖ್ಯವಾಗಿ ಇವರು ಸಂಘದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಹೀಗಾಗಿ ಸಂಘವು ನೀಡುತ್ತಿರುವ ಗುಣಮಟ್ಟದ ಸೇವೆಯೇ ಸಂಘವು ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದು ಶ್ಲಾಘಿಸಿದರು.


ಅಬ್ಬಾಸ್ ಎಂ ಮಾತನಾಡಿ ಮಂಜನಾಡಿ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಪ್ರಾರಂಭಿಸಿದ ಈ ಶಾಖೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತ ಬರುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಂಘದ ನಾಟೆಕಲ್ ಶಾಖೆಯು ಆರನೇ ವರ್ಷದ ಸಂಭ್ರಮದೊಂದಿಗೆ ಮುನ್ನಡೆಯುತ್ತಿದೆ. ಈ ಭಾಗದಲ್ಲಿ ಶಾಖೆ ಮಾಡಲು ತುಂಬ ಜನ ಸಹಕಾರ ನೀಡಿದ್ದಾರೆ. ನಾಟೆಕಲ್ ಶಾಖೆಯ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಸದಸ್ಯ ಗ್ರಾಹಕರಿಗೆ ಚಿನ್ನಾಭರಣಗಳಿಗೆ ಪ್ರತಿ ಗ್ರಾಂಗೆ ರೂ. ೧೦,೫೦೦/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡುತ್ತಿದ್ದೇವೆ. ಸಂಘದ ಎಲ್ಲಾ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೇವೆಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಅಗತ್ಯ ಸಂದರ್ಭಗಳಲ್ಲಿ ಗ್ರಾಹಕರ ಮನೆ ಬಾಗಿಲಗೆ ಹೋಗಿ ಸೇವೆ ನೀಡುತ್ತಿದ್ದೇವೆ. ಸಂಸ್ಥೆಯು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಮತ್ತು ವಾಹನ ವಿಮಾ ಸೌಲಭ್ಯಗಳನ್ನು ಹೊಂದಿರುತ್ತದೆ. ಜನರ ಆರೋಗ್ಯದ ಕಾಳಜಿಯಿಂದ ಆರೋಗ್ಯ ಶಿಬಿರವನ್ನು ಸತತವಾಗಿ ನಮ್ಮ ಸಂಘ ಹಮ್ಮಿಕೊಂಡು ಬರುತ್ತಿದೆ. ಜೊತೆಗೆ ಸಂಘದ ಸದಸ್ಯರ ಮಕ್ಕಳಿಗೆ ಒಳ್ಳೆಯ ಅಂಕ ಬಂದಾಗ ವಿದ್ಯಾರ್ಥಿವೇತನ ನೀಡಿ ಅವರನ್ನು ಪ್ರೋತ್ಸಾಹಿಸುತ್ತ ಬಂದಿದೆ. ಸಂಘದಲ್ಲಿ ಲಭ್ಯವಿರುವ ಪ್ರತಿಯೊಂದು ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು.
ಸಂಘದ ನಾಟೆಕಲ್ ಶಾಖೆಯ ಸಿಬ್ಬಂದಿ ಪವಿತ್ರಾ ಸ್ವಾಗತಿಸಿ, ನಿಶ್ಮಿತಾ ವಂದಿಸಿದರು. ಶಾಖಾಧಿಕಾರಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

