ಸಂಪೂರ್ಣ ಡಿಜಿಟಲೀಕರಣ ಸೇರಿದಂತೆ ಹಲವು ಹೊಸತನ: ಅಧ್ಯಕ್ಷ ಕಿಶೋರ್ ಕುಮಾರ್ ಕೊಳತ್ತಾಯ ಮಾಹಿತಿ
ಪುತ್ತೂರು: ಶತಮಾನ ಕಂಡಿರುವ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಗ್ರಾಹಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಹಲವು ಹೊಸತನಗಳೊಂದಿಗೆ ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳುತ್ತಿದ್ದು ಇದರ ಪ್ರಮುಖ ಯೋಜನೆಗಳಿಗೆ ಸೆ.14ರಂದು ನಡೆಯುವ 116ನೇ ವಾರ್ಷಿಕ ಮಹಾಸಭೆಯಲ್ಲಿ ಚಾಲನೆ ನೀಡಲಾಗುವುದು ಎಂದು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ್ ಕೊಳತ್ತಾಯ ಎನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
https://chat.whatsapp.com/EbVKVnWB6rlHT1mWtsgbch
2024-25ನೇ ಸಾಲಿನಲ್ಲಿ ನಮ್ಮ ಬ್ಯಾಂಕ್ ಇತಿಹಾಸದಲ್ಲಿ ಒಂದು ಹೊಸ ಮೈಲುಗಲ್ಲನ್ನು ಸಾಧಿಸಿದೆ. ವ್ಯವಹಾರದಲ್ಲಿ ಗಣನೀಯ ಹೆಚ್ಚಳ ಸಾಧಿಸಿದ್ದು, ಒಟ್ಟು ಠೇವಣಿ ರೂ.74.87 ಕೋಟಿ, ಒಟ್ಟು ಸಾಲ ರೂ.51.39 ಕೋಟಿಗಳಾಗಿದ್ದು, ಒಟ್ಟು ವ್ಯವಹಾರ ರೂ.126.26 ಕೋಟಿ ದಾಟಿದೆ. ಈ ವರ್ಷದ ನಿವ್ವಳ ಲಾಭ ರೂ.1.04 ಕೋಟಿ ಆಗಿದೆ. ಹಲವು ಯೋಜನೆಗಳಿಗೆ ಭಾನುವಾರದ ಮಹಾಸಭೆಯಲ್ಲಿ ಚಾಲನೆ ನೀಡಲಾಗುವುದು. ಈ ಆರ್ಥಿಕ ವರ್ಷಾಂತ್ಯದೊಳಗೆ ಬ್ಯಾಂಕನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವತ್ತ ನಮ್ಮ ಪ್ರಯತ್ನ ಸಾಗಲಿದೆ ಎಂದು ಮಾಹಿತಿ ನೀಡಿದರು.

ಆರ್ಬಿಐ ನಿಯಮಗಳ ಅನುಸಾರ ಬಲಿಷ್ಠ ಕೋ ಆಪರೇಟಿವ್ ಬ್ಯಾಂಕ್ ಎನಿಸಿಕೊಳ್ಳಲು ಬ್ಯಾಂಕಿನ ನಿವ್ವಳ ಅನುತ್ಪಾದಿತ ಆಸ್ತಿ ಶೇ.1ಕ್ಕಿಂತ ಕಡಿಮೆ ಇದೆ. ಲೆಕ್ಕಪರಿಶೋಧನೆಯಲ್ಲಿ ಎ ಗ್ರೇಡ್ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಗಳ ಪ್ರಕಾರ “ಆರ್ಥಿಕವಾಗಿ ಬಲಿಷ್ಠ ಮತ್ತು ಉತ್ತಮ ಆಡಳಿತ ಬ್ಯಾಕ್” ಎಂಬ ಸರ್ಟಿಫಿಕೆಟ್ ಪಡೆದುಕೊಂಡಿದೆ. ಸಿಕೆವೈಸಿ, ಸಿಐಬಿಐಎಲ್, ಸಿ.ಆರ್ ಎಸ್ಎಐ ಪೂರ್ಣಗೊಳಿಸಿದೆ. ಐಎಸ್ ಆಡಿಟ್, ಸೈಬರ್ ಸೆಕ್ಯೂರಿಟಿ ಆಡಿಟ್ ಮಾಡಲಾಗಿದೆ. ವಿಟ್ಲದಲ್ಲಿ ಶಾಖೆ ಆರಂಭಿಸಿ ಉತ್ತಮ ವ್ಯವಹಾರ ನಡೆಯುತ್ತಿದೆ. 2025-26ನೇ ಸಾಲಿನಲ್ಲಿ ಇನ್ನೊಂದು ಶಾಖೆ ತೆರೆಯಲು ಯೋಜನೆ ಹಾಕಿಕೊಂಡಿದ್ದೇವೆ. ಬ್ಯಾಂಕಿಗೆ ಸೋಲಾರ್ ವಿದ್ಯುತ್ ಗ್ರಿಡ್ ಸ್ಥಾಪಿಸಿ ವಿದ್ಯುತ್ ಶಕ್ತಿ ಯೋಜನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಸವಾಲಾಗಿರುವ ಸಾಲಗಳನ್ನು ವಸೂಲು ಮಾಡಲಾಗಿದೆ. ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಎರಡು ಅಂಗಡಿ ಕೊಠಡಿಗಳನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಬ್ಯಾಂಕಿನ ಭದ್ರತೆಗಾಗಿ ಸಿಸಿಟಿವಿ ಅಳವಡಿಸಿದ್ದೇವೆ. ಹಗಲು, ರಾತ್ರಿ ಕಾವಲುಗಾರರನ್ನು ನೇಮಿಸಲಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸೈನ್ ಇನ್ ಸೆಕ್ಯೂರಿಟಿ ಸಹಾಯದಿಂದ 24 ಗಂಟೆಗಳ ಕಾಲ ಕಂಟ್ರೋಲ್ ರೂಮ್ ಮುಖಾಂತರ ಭದ್ರತೆ ಮೇಲೆ ಕಣ್ಣಾವಲು ಇಡುವ ವ್ಯವಸ್ಥೆ ಮಾಡಲಾಗಿದೆ. ಬ್ಯಾಂಕ್ನಲ್ಲಿ ಚಿನ್ನಾಭರಣ, ಗೃಹ, ಆಸ್ತಿ ಅಡಮಾನ, ವಾಹನ ಸಾಲ, ಆಸ್ತಿ ಭದ್ರತೆಯ ಮೇಲೆ ಓವರ್ ಡ್ರಾಫ್ಟ್ ಸೌಲಭ್ಯ ಮೊದಲಾದ ಹಲವು ಸಾಲ ಯೋಜನೆ ಆರಂಭಿಸಿದ್ದೇವೆ ಎಂದು ಕಿಶೋರ್ ಕೊಳತ್ತಾಯ ಹೇಳಿದರು.



ಹಲವು ಹೊಸ ಯೋಜನೆಗಳಿಗೆ ಮಹಾಸಭೆಯಲ್ಲಿ ಚಾಲನೆ
ಕಾಲ ಬದಲಾಗುತ್ತಿದ್ದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಯುವ ಪೀಳಿಗೆಯನ್ನು ನಮ್ಮ ಬ್ಯಾಂಕಿನತ್ತ ಸೆಳೆಯಬೇಕಾದ ಅವಶ್ಯಕತೆ ಇದೆ. ಇತರ ಬ್ಯಾಂಕುಗಳ ಜೊತೆಗೆ ಸ್ಪರ್ಧಿಸುವ ಅವಶ್ಯಕತೆಯೂ ಇದೆ. ಈ ನಿಟ್ಟಿನಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಕ್ರಾಂತಿಕಾರಿ ಹೆಜ್ಜೆಯಿಡಲು ಯೋಚಿಸಲಾಗಿದೆ. ಹಾಗಾಗಿ ಬ್ಯಾಂಕ್ ಗ್ರಾಹಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದಕ್ಕೆ ಮಹಾಸಭೆಯಲ್ಲಿ ಚಾಲನೆ ನೀಡಲಾಗುವುದು. ಗ್ರಾಹಕರಿಗೆ ಚೆಕ್ ಕಲೆಕ್ಷನ್ಗೆ ಈ ಹಿಂದೆ 3 ದಿನ ತಗಲುತ್ತಿತ್ತು. ಈಗ ಸಿಟಿಎಸ್ ಕ್ಲಿಯರಿಂಗ್ ಕ್ಷೇತ್ರಕ್ಕೆ ಬ್ಯಾಂಕ್ ಕಾಲಿಟ್ಟಿದೆ. ಇನ್ವರ್ಡ್ ಮತ್ತು ಔಟ್ವರ್ಡ್ ಕ್ಲಿಯರಿಂಗ್ ಎರಡರಲ್ಲೂ ಸಿಟಿಎಸ್ ಕ್ಲಿಯರಿಂಗ್ ವ್ಯವಸ್ಥೆ ಪ್ರಾರಂಭಿಸಲಾಗುತ್ತಿದೆ. ನೇರ ಹಣ ವರ್ಗಾವಣೆಗಾಗಿ ನೇರ ಆರ್ಟಿಜಿಎಸ್ ಮತ್ತು ನೆಫ್ಟ್ ವ್ಯವಸ್ಥೆ ಜಾರಿಗೊಳಿಸಿದ್ದು,ಆ್ಯಕ್ಸಿಸ್ ಬ್ಯಾಂಕ್ ಸಹಕಾರದಲ್ಲಿ ಬ್ಯಾಂಕ್ ಐಎಫ್ಎಸ್ಸಿ ಕೋಡ್ ಹೊಂದಿದ್ದು,ನೇರ ಹಣ ವರ್ಗಾವಣೆ ಮಾಡಲಾಗುವುದು. ಮೊಬೈಲ್ ಬ್ಯಾಂಕಿಂಗ್ಗೂ ಚಾಲನೆ ನೀಡಲಾಗುವುದು ಜೊತೆಗೆ ಎಟಿಎಮ್ ಕಾರ್ಡ್ಗೆ ಚಾಲನೆ ನೀಡಲಾಗುವುದು ಎಂದು ಕಿಶೋರ್ ಕೊಳತ್ತಾಯ ಎನ್. ಹೇಳಿದರು.



ಮೊಬೈಲ್ ಬ್ಯಾಂಕಿಂಗ್ :
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ ಶೆಟ್ಟಿ ಮಾತನಾಡಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಅನುಕೂಲ ಆಗುವಂತೆ ಮೊಬೈಲ್ ಬ್ಯಾಂಕಿಂಗ್ ಪ್ರಮುಖ ಅಂಶ. ಸದ್ಯಕ್ಕೆ ಮೊಬೈಲ್ನಲ್ಲಿ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಗ್ರಾಹಕರು ತಮ್ಮ ಖಾತೆಯ ವಿವರ ಮತ್ತು ಎಮ್ ಪಾಸ್ ಬುಕ್ ಪಡೆಯಬಹುದು. ಸದ್ಯ ನಾವು ಗ್ರಾಹಕರಿಗೆ ಬ್ಯಾಂಕ್ನಲ್ಲೇ ಆ್ಯಪ್ ಅಳವಡಿಸಿಕೊಡುತ್ತೇವೆ. ಸೈಬರ್ ಕ್ರೈಮ್ ಮುನ್ನೆಚ್ಚರಿಕೆಯಾಗಿ ಸದಸ್ಯ ಗ್ರಾಹಕರ ಇ ಮೇಲ್ಗೆ ಆ್ಯಪ್ ಲಿಂಕ್ ಕಳುಹಿಸುತ್ತೇವೆ. ಅವರು ಅದನ್ನು ಡೌನ್ಲೋಡ್ ಮಾಡಿ ಮೊಬೈಲ್ ಬ್ಯಾಂಕಿಂಗ್ ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಬ್ಯಾಂಕ್ ಉಪಾಧ್ಯಕ್ಷ ಶ್ರೀಧರ ಗೌಡ ಕೆ., ನಿರ್ದೇಶಕರಾದ ರಾಮಚಂದ್ರ ಕಾಮತ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ಕಿರಣ್ ಕುಮಾರ್ ರೈ, ಸುಜೀಂದ್ರ ಪ್ರಭು, ಮಲ್ಲೇಶ್ ಕುಮಾರ್, ಶ್ರೀಧರ ಪಟ್ಟ, ಗಣೇಶ್ ಕೌಕ್ರಾಡಿ, ಸೀಮಾ ಎಂ.ಬಿ, ವೀಣಾ, ರಾಜು ಶೆಟ್ಟಿ, ಹರೀಶ್ ಬಿಜತ್ರೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



