ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಐವನ್ ಡಿಸೋಜ ಅಭಿಮತ
ಉಡುಪಿ: ಸಹಕಾರ ಸಂಘಗಳು ಹೆಚ್ಚಿನ ಪತ್ರ ವ್ಯವಹಾರವಿಲ್ಲದೇ, ಸರಳ ರೀತಿಯಲ್ಲಿ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಲ ಸೌಲಭ್ಯ ಒದಗಿಸುತ್ತವೆ. ಇದರಿಂದಾಗಿ ಜನರು ಸಹಕಾರ ಸಂಘಗಳಲ್ಲಿ ವ್ಯವಹಾರ ನಡೆಸಲು ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಜನರಲ್ಲಿ ಆರ್ಥಿಕ ಉಳಿತಾಯ ಮನೋಭಾವ ಬೆಳೆಸುವಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಮಹತ್ತರದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅಭಿಪ್ರಾಯಪಟ್ಟರು.
https://chat.whatsapp.com/EbVKVnWB6rlHT1mWtsgbch
ಉಡುಪಿ ಶೋಕಮಾತಾ ದೇವಾಲಯ ಆವರಣದಲ್ಲಿರುವ ‘ಆವೇ ಮರಿಯಾ’ ಸಭಾಂಗಣದಲ್ಲಿ ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 28ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಹಕಾರ ಸಂಘಗಳು ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡಿದಂತೆ, ಸಾಲ ಪಡೆದ ಸದಸ್ಯರು ಸಮಯಕ್ಕೆ ಸರಿಯಾಗಿ ಸಾಲಗಳನ್ನು ಮರುಪಾವತಿ ಮಾಡಿದ್ದಲ್ಲಿ ಸಂಘವು ಅಭಿವೃದ್ಧಿಯ ಉತ್ತುಂಗಕ್ಕೇರುತ್ತದೆ. ಇಂದು ಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸಮನಾಗಿ ಸೇವೆಯನ್ನು ನೀಡಿ, ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು. ಉಡುಪಿ ಶೋಕಮಾತಾ ದೇವಾಲಯದ ಸಹಾಯಕ ಧರ್ಮಗುರುಗಳಾದ ವಂದನೀಯ ಫಾ|ಲಿಯೋ ಪ್ರವೀಣ್ ಡಿಸೋಜ ಆಶೀರ್ವಚನ ನೀಡಿದರು.



ಸಂಘದ ಅಧ್ಯಕ್ಷರಾದ ಲೂವಿಸ್ ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂಘದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹಿಂದಿನ ಆರ್ಥಿಕ ವರ್ಷದಲ್ಲಿ ಸಂಘವು ರೂ. 250 ಕೋಟಿಗೂ ಮೀರಿ ವ್ಯವಹಾರ ಮಾಡಿದ್ದು ರೂ.94 ಲಕ್ಷ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ 18% ಲಾಭಾಂಶ ಘೋಷಣೆ ಮಾಡಿದರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ಸಂದೀಪ್ ಫೆರ್ನಾಂಡಿಸ್ ವಾರ್ಷಿಕ ವರದಿ ವಾಚಿಸಿದರು. ಸಂಘದ ಸ್ಥಾಪಕ ಸಂಚಾಲಕರು, ಮಾಜಿ ಅಧ್ಯಕ್ಷರಾದ ದಿ. ಲೂವಿಸ್ ಡಿ’ಅಡಾ ಅವರು 28 ವರ್ಷಗಳ ಸೇವೆ ನೀಡಿದಕ್ಕಾಗಿ ಅವರ ಪತ್ನಿ ವಯ್ಲೆಟ್ ಡಿ’ಲಿಡಾ ಅವರು ಸನ್ಮಾನ ಸ್ವೀಕರಿಸಿದರು ಹಾಗೂ ಸಂಘದ ವಿಶ್ರಾಂತ ನಿರ್ದೇಶಕರುಗಳಾದ ಫೆಲಿಕ್ಸ್ ಪಿಂಟೋ, ಫ್ರಾಂಕ್ಲಿನ್ ಮಿನೇಜಸ್, ಜೆಸಿಂತಾ ಡಿಸೋಜ, ಕೇವಿನ್ ಆರ್. ಪಿರೇರಾ ಮತ್ತು ಗಿಲ್ಬರ್ಟ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಸಿ.ಎ. ಪರಿಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ವಿಧ್ಯಾರ್ಥಿ ವೇತನ, 13 ವ್ಯಕ್ತಿಗಳಿಗೆ ಮತ್ತು ಎರಡು ಸಂಸ್ಥೆಗಳಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು.
ಸಂಘದ ಉಪಾಧ್ಯಕ್ಷರಾದ ಜೇಮ್ಸ್ ಡಿಸೋಜ ಸ್ವಾಗತಿಸಿ, ನಿರ್ದೇಶಕರಾದ ಆರ್.ಮಾಕ್ಸಿಂ ಡಿ’ಸೋಜ ವಂದಿಸಿದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಂಘದ ನಿರ್ದೇಶಕರುಗಳಾದ ಇಗ್ನೇಷಿಯಸ್ ಮೋನಿಸ್, ಪರ್ಸಿ ಜೆ.ಡಿ’ಸೋಜ, ಆರ್ಚಿಬಾಲ್ಸ್ ಎಸ್. ಡಿಸೋಜ, ಡಾ| ನೇರಿ ಕರ್ನೆಲಿಯೋ, ಲಾಯ್ಸಟ್ ಜೆ. ಕರ್ನೇಲಿಯೋ, ರಿಚರ್ಡ್ ಡಾಯಸ್, ಡಾಲ್ಪಿ ವಿ. ಲೂವಿಸ್, ವಿಲಿಯಂ ಮಚಾದೋ, ಓನಿಲ್ ಜೆ. ಡಿಸೋಜ, ಜೆನೆವೀವ್ ಎಂ. ಮಿನೇಜಸ್, ಫ್ರಾಂಕ್ ಪೀಟರ್ ಕಾರ್ಡೊಜಾ, ಸಂಘದ ಸಿಬ್ಬಂದಿ ವರ್ಗ ಮತ್ತು ಸದಸ್ಯರು ಉಪಸ್ಥಿತರಿದ್ದರು.

