ವಿಧೇಯಕದ ಪರ 23, ವಿರುದ್ಧ 26 ಮತಗಳು ಚಲಾವಣೆ, ಸರ್ಕಾರಕ್ಕೆ ಮುಜುಗರ
ಬೆಂಗಳೂರು: ಹಲವಾರು ತಿದ್ದುಪಡಿಗಳೊಂದಿಗೆ ವಿಧಾನಸಭೆಯಲ್ಲಿ ಮಂಗಳವಾರವಷ್ಟೇ ಮಂಡನೆಯಾಗಿದ್ದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ ವಿಧಾನ ಪರಿಷತ್ತಿನಲ್ಲಿ ತಿರಸ್ಕೃತಗೊಂಡಿದೆ. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ವಿಧಾನ ಪರಿಷತ್ನಲ್ಲಿ ತಿರಸ್ಕೃತಗೊಳ್ಳುವ ಮೂಲಕ ರಾಜ್ಯ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿದೆ.
https://chat.whatsapp.com/EbVKVnWB6rlHT1mWtsgbch
ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿರುದ್ಧ 26 ಮತಗಳು ಬಂದರೆ, ಪರ 23 ಮತಗಳಷ್ಟೇ ಚಲಾವಣೆಯಾದವು. ಇದರಿಂದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಧಾನಪರಿಷತ್ನಲ್ಲಿ ತಿರಸ್ಕೃತಗೊಂಡಂತಾಗಿದೆ. ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಚಾರವಾಗಿ ಸುದೀರ್ಘ ಚರ್ಚೆಯಾಗಿ ಅಂಗೀಕಾರಗೊಂಡಿತ್ತು. ಬುಧವಾರ ಕಾನೂನು ಸಚಿವ ಎಚ್.ಕೆ ಪಾಟೀಲ್ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ನಲ್ಲಿ ಮಂಡಿಸಿದರು.
ಈ ಕುರಿತು ಚರ್ಚೆಯಾಗಿ ಪ್ರತಿಪಕ್ಷಗಳು ಈ ವಿಧೇಯಕವನ್ನು ಮತಕ್ಕೆ ಹಾಕುವಂತೆ ಮನವಿ ಮಾಡಿದವು. ಸಭಾಪತಿ ಬಸವರಾಜ ಹೊರಟ್ಟಿಯವರು ವಿಧೇಯಕವನ್ನು ಮತಕ್ಕೆ ಹಾಕಲು ಮುಂದಾದರು. ಮತಕ್ಕೆ ಹಾಕುವ ಮೊದಲೇ ಎದ್ದು ನಿಂತ ಸಚಿವ ಎಚ್.ಕೆ ಪಾಟೀಲ್, ಇದು ಪ್ರತಿಪಕ್ಷಗಳ ಘನತೆಗೆ ತಕ್ಕದ್ದಲ್ಲ. ವಿಧಾನ ಪರಿಷತ್ ಇತಿಹಾಸದಲ್ಲಿ ಇದು ಕಪ್ಪುಚುಕ್ಕೆಯಾಗಿ ಉಳಿಯುತ್ತದೆ. ನಾನು ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟ ಮೇಲೂ, ಮತಕ್ಕೆ ಹಾಕುವುದು ಅನವಶ್ಯಕವಾಗಿದೆ. ಈ ವಿಷಯದಲ್ಲಿ ರಾಜಕಾರಣ ತರುವುದು ಒಳ್ಳೆಯದಲ್ಲ ಎಂದು ಹೇಳಿದರು. ಈ ಸಂದರ್ಭ ಸಭಾಪತಿ ಹೊರಟ್ಟಿಯವರು ಮತಕ್ಕೆ ಹಾಕಬೇಕಾ? ಬೇಡವಾ? ಎಂದು ಮತ್ತೊಮ್ಮೆಕೇಳಿದರು. ಪ್ರತಿಪಕ್ಷಗಳು ಮತಕ್ಕೆ ಹಾಕುವಂತೆ ಒಕ್ಕೊರಲನಿಂದ ಹೇಳಿದ ಮೇಲೆ, ಸಭಾಪತಿ ಬಸವರಾಜ ಹೊರಟ್ಟಿ ವಿಧೇಯಕವನ್ನು ಮತಕ್ಕೆ ಹಾಕಿದರು. ಆಗ ವಿಧೇಯಕದ ಪರವಾಗಿ 23 ಮತಗಳು ಮತ್ತು ವಿರುದ್ಧವಾಗಿ 26 ಮತಗಳು ಬಂದು ವಿಧೇಯಕ ತಿರಸ್ಕೃತಗೊಂಡಿತು.
ಕಾಂಗ್ರೆಸ್ನ ಯು.ಬಿ.ವೆಂಕಟೇಶ್, ಪ್ರಕಾಶ್ ರಾಥೋಡ್ ಅವರ ಸದಸ್ಯತ್ವ ಅವಧಿ ಮುಕ್ತಾಯಗೊಂಡಿದೆ. ಕಾಂಗ್ರೆಸ್ನಿಂದ ಸಿ.ಪಿ.ಯೋಗೇಶ್ವರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಕಾರಣದಿಂದ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಬಲ ಕಡಿಮೆಯಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com










