ಮೊಳಹಳ್ಳಿ ಶಿವರಾವ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅಭಿಪ್ರಾಯ
ಮಂಗಳೂರು: ಮೊಳಹಳ್ಳಿ ಶಿವರಾವ್ ಜನ್ಮದಿನಾಚರಣೆ ಅಂಗವಾಗಿ ಸಹಕಾರಿಗಳು ಇಂದು ತೆಗೆದುಕೊಂಡ ಪ್ರಮಾಣವಚನದಲ್ಲಿ ಬೋಧಿಸಿದಂತೆ ಸಹಕಾರಿಗಳು ನಡೆದುಕೊಂಡರೆ ದೇಶದಲ್ಲೇ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಿದೆ. ಕರಾವಳಿ ಭಾಗದಲ್ಲಿ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಗಟ್ಟಿಯಾಗಿ ತಳವೂರಲು ಕರಾವಳಿ ಸಹಕಾರ ಕ್ಷೇತ್ರದ ಪಿತಾಮಹ ಮೊಳಹಳ್ಳಿ ಶಿವರಾವ್ ಅವರು ಹಾಕಿಕೊಟ್ಟ ಗಟ್ಟಿ ಅಡಿಪಾಯ ಕಾರಣ ಎಂದು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಹೇಳಿದರು.
https://chat.whatsapp.com/EbVKVnWB6rlHT1mWtsgbch
ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ದಿ.ಮೊಳಹಳ್ಳಿ ಶಿವರಾವ್ ಅವರ 145ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊಳಹಳ್ಳಿ ಶಿವರಾವ್ ಅವರು, ಸಹಕಾರ ಕ್ಷೇತ್ರವಲ್ಲದೆ ಶಿಕ್ಷಣ ಹಾಗೂ ಸ್ಥಳೀಯಾಡಳಿತ ಕ್ಷೇತ್ರಕ್ಕೂ ಕೊಡುಗೆ ಸಲ್ಲಿಸಿದ್ದಾರೆ. ಆ ಕ್ಷೇತ್ರದಲ್ಲೂ ಅನೇಕರನ್ನು ಬೆಳೆಸಿದ್ದಾರೆ. ಆದರೆ ಅವರ ಹೆಸರನ್ನು ನೆನಪು ಮಾಡಿಕೊಳ್ಳುತ್ತಿರುವುದು ಸಹಕಾರ ಕ್ಷೇತ್ರದವರು ಮಾತ್ರ. ಸಹಕಾರ ಕ್ಷೇತ್ರದವರು ಎಲ್ಲ ಕ್ಷೇತ್ರದವರನ್ನೂ ಬೆಳೆಸುವ ಛಾತಿ ಉಳ್ಳವರು ಎಂದು ಮಾರ್ಮಿಕವಾಗಿ ನುಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಸಾಲ ಶೇ.100ಕ್ಕೆ 100ರಷ್ಟೂ ಮರುಪಾವತಿಯಾಗುತ್ತದೆ. ಇಲ್ಲಿನ ರೈತರು ರೂಢಿಸಿಕೊಂಡಿರುವ ಶಿಸ್ತು ಇದಕ್ಕೆ ಕಾರಣ. ದೇಶದಲ್ಲಿ ಶೇ.100 ಕೃಷಿ ಸಾಲ ಮರುಪಾವತಿಯಾಗುವ ಜಿಲ್ಲೆಯೊಂದಿದ್ದರೆ ಅದು ಅವಿಭಜಿತ ದಕ್ಷಿಣ ಕನ್ನಡ ಮಾತ್ರ ಎಂದು ಡಾ.ರಾಜೇಂದ್ರ ಕುಮಾರ್ ಶ್ಲಾಘಿಸಿದರು. ನಮ್ಮ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಎಷ್ಟು ಬಲಿಷ್ಠವಾಗಿ ಬೆಳೆದಿದೆ ಎಂದರೆ, ನಮ್ಮ ಉಭಯ ಜಿಲ್ಲೆಗಳಲ್ಲಿ ಕೃಷಿ ಸಾಲದ ಪ್ರಕರಣಕ್ಕಾಗಿ ಒಂದೇ ಒಂದು ಆತ್ಮಹತ್ಯೆ ಪ್ರಕರಣಗಳು ನಡೆದಿಲ್ಲ. ಕೃಷಿಗೆ ಆರ್ಥಿಕ ಸೌಲಭ್ಯ ಸಿಕ್ಕಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡವರು ಇಲ್ಲ. ಇದರ ಕೀರ್ತಿ ಜಿಲ್ಲೆಯ ಸಹಕಾರಿಗಳಿಗೆ ಸಲ್ಲಬೇಕು ಎಂದು ಹೇಳಿದರು.


ನಮ್ಮ ಜಿಲ್ಲೆ ವಾಣಿಜ್ಯ ಬ್ಯಾಂಕುಗಳ ತವರೂರು ಎಂದು ಕರೆಯಲ್ಪಟ್ಟಿದೆ. ಆದರೆ ಇಲ್ಲಿನ ಬ್ಯಾಂಕುಗಳು ಪರಸ್ಪರ ವಿಲೀನಗೊಳ್ಳುತ್ತಿವೆ. ಆದರೆ ಇಲ್ಲಿನ ಸಹಕಾರ ಸಂಘಗಳು ಜನರ ಬಳಿ ಹೋಗಿ ಸೇವೆ ನೀಡುತ್ತಿವೆ. ನಮ್ಮ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳು ಮೊದಲ ಆದ್ಯತೆ ನೀಡುವುದು ಕೃಷಿ ಕ್ಷೇತ್ರಕ್ಕೆ. ಅನಂತರ ವಾಣಿಜ್ಯ ಉದ್ದೇಶಗಳಿಗೆ ಸಾಲ ನೀಡುತ್ತವೆ. ನಾವು ಇನ್ನಷ್ಟು ಬೆಳೆಯಬೇಕು. ವಾಣಿಜ್ಯ ಬ್ಯಾಂಕಗಳನ್ನು ಮೀರಿಸಿ ಸಹಕಾರ ಬ್ಯಾಂಕ್ಗಳು ಅಭಿವೃದ್ಧಿ ಹೊಂದಬೇಕು ಎಂಬ ಬಗ್ಗೆ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಆಶಯ ವ್ಯಕ್ತಪಡಿಸಿದರು.








ಯಾರೂ ಸೋಲಬಾರದು: ಇದು ಸಹಕಾರದ ನಿಜವಾದ ತತ್ವ
ಮೊಳಹಳ್ಳಿ ಶಿವರಾವ್ ಬಗ್ಗೆ ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು ಮಾತನಾಡಿ, ಮಹಾತ್ಮ ಗಾಂಧೀಜಿಯವರು ಪ್ರತಿಪಾದಿಸಿದ ಸಹಕಾರ, ಸ್ವದೇಶಿ ಹಾಗೂ ಸ್ವಾವಲಂಬನೆಯ ವಿಷಯಗಳನ್ನು ಮೊಳಹಳ್ಳಿ ಶಿವರಾವ್ ಅವರು, ಬಹಳ ಹಿಂದೆಯೇ ಪ್ರಸ್ತಾಪಿಸಿದ್ದರು. ಕರಾವಳಿ ಜಿಲ್ಲೆಗಳು ಅಭಿವೃಧ್ಧಿಯಾಗಲು ಮೊಳಹಳ್ಳಿ ಶಿವರಾವ್ ಅವರು ಹಾಕಿಕೊಟ್ಟ ಸಹಕಾರ ಮತ್ತು ಶಿಕ್ಷಣದ ಭದ್ರ ಅಡಿಪಾಯದ ಕೊಡುಗೆ ಇದೆ. ಡಾ.ಶಿವರಾಮ ಕಾರಂತರು ಹಾಗೂ ಮೊಳಹಳ್ಳಿ ಶಿವರಾಯರು ಪುತ್ತೂರಿಗೆ ಬಂದು ನೆಲೆಸಿದ ಮೇಲೆ ಸಾಕಷ್ಟು ಪ್ರಗತಿಯಾಗಿದೆ. ಎರಡನೇ ಮಹಾಯುದ್ಧದ ಕಾಲದಲ್ಲಿ ಆಹಾರ ಧಾನ್ಯಗಳ ಪೂರೈಕೆಗೆ ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ಮೊಳಹಳ್ಳಿಯವರು ಸಹಕಾರ ಸಂಘಗಳ ಮೂಲಕ ಆಹಾರ ಪೂರೈಕೆಗೆ ವ್ಯವಸ್ಥೆ ಮಾಡಿದ್ದರು ಎಂದರು. ಎಳವೆಯೇ ಪ್ರಾಯದಲ್ಲೇ ವಿದ್ಯಾರ್ಥಿಗಳಲ್ಲಿ ಸಹಕಾರ ಮನೋಭಾವ ಬೆಳೆದುಬರಲಿ ಎಂಬುದು ಅವರ ಆಶಯವಾಗಿತ್ತು ಎಂದು ಪ್ರತಿಪಾದಿಸಿದರು. ಯಾರೂ ಸೋಲಬಾರದು ಎಂಬ ಮಹತ್ವಾಕಾಂಕ್ಷೆ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರದ್ದು. ಇದು ಸಹಕಾರದ ನಿಜವಾದ ತತ್ವ. ಸರ್ವೋದಯದ ಕಲ್ಪನೆ ಸಾಕಾರಗೊಳ್ಳುವ ಕೆಲಸ ಆಗಬೇಕು ಎಂದು ತಿಳಿಸಿದರು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಸ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಿ, ಪಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಹಕಾರಿ ಯೂನಿಯನ್ನ ಉಪಾಧ್ಯಕ್ಷ ನೀಲಯ ಎಂ ಅಗರಿ, ನಿರ್ದೇಶಕರಾದ ಚಿತ್ತರಂಜನ್ ಬೋಳಾರ್, ಸುಧಾಕರ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಸತೀಶ್ ಕೆ ಪೆರಾಡಿ, ವಿಷ್ಣು ಭಟ್, ಮಂಜುನಾಥ ಎನ್ ಎಸ್, ಸಂಜೀವ ಪೂಜಾರಿ, ಸವಿತಾ ಎನ್ ಶೆಟ್ಟಿ, ಜಾಯ್ಲಸ್ ವಿಲ್ಫ್ರೆಡ್ ಡಿಸೋಜ, ಪ್ರವೀಣ್ ಪಿಂಟೋ, ಸಾವಿತ್ರಿ ರೈ, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್ ರಮೇಶ್, ಎಸ್ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು. ಯೂನಿಯನ್ನ ಸಿಇಒ ಎಸ್.ವಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಯೂನಿಯನ್ನ ನಿರ್ದೇಶಕ ಡಾ. ಎಸ್ ಆರ್ ಹರೀಶ್ ಆಚಾರ್ಯ ವಂದಿಸಿದರು.
ಕರಾವಳಿ ಸಹಕಾರಿ ಮಾಸಪತ್ರಿಕೆ ಬಿಡುಗಡೆ
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಹೊರತರಲಾದ ಮಾಸಪತ್ರಿಕೆ ಕರಾವಳಿ ಸಹಕಾರಿಯನ್ನು ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಬಿಡುಗಡೆ ಮಾಡಿದರು. ಬಳಿಕ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಮೊಳಹಳ್ಳಿ ಶಿವರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಸಹಕಾರ ಪ್ರತಿಜ್ಞೆ ಕೈಗೊಳ್ಳಲಾಯಿತು.
ಕರಾವಳಿ ಸಹಕಾರಿ ಪತ್ರಿಕೆ ಉಪಯುಕ್ತ ದಾಖಲೆ
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ನಿಂದ ಹೊರತಂದಿರುವ ಕರಾವಳಿ ಸಹಕಾರಿ ಮಾಸಪತ್ರಿಕೆಯು ಉಪಯುಕ್ತ ದಾಖಲೆಯಾಗಿ ಹೊರಹೊಮ್ಮಲಿ ಎಂದು ಡಾ.ಉದಯಕುಮಾರ್ ಇರ್ವತ್ತೂರು ಹಾರೈಸಿದರು. ಇತಿಹಾಸದ ಬಗ್ಗೆ ಅರಿವಿಲ್ಲದೆ ಇದ್ದರೆ ಭವಿಷ್ಯದ ನಿರ್ಮಾಣ ಕಷ್ಟ. ಕರಾವಳಿ ಸಹಕಾರಿ ಮಾಸಪತ್ರಿಕೆಯು ಭವಿಷ್ಯದ ದಿನಗಳಲ್ಲಿ ಈ ಕಾಲದ ಸಹಕಾರ ಚಳುವಳಿಗಳ ಬಗ್ಗೆ ಮಾಹಿತಿ ನೀಡುವಂತೆ ಮೂಡಿಬರಲಿ ಎಂದು ಸಲಹೆ ನೀಡಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

