ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನಸಹಕಾರಿ ಮಾರಾಟ ಸಂಘದ 2024-25ನೇ ಸಾಲಿನಲ್ಲಿ 371 ಲಕ್ಷ ರೂ. ವ್ಯವಹಾರ ನಡೆಸಿದ್ದು, 20.37 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ರವೀಂದ್ರ ಕಂಬಳಿ ತಿಳಿಸಿದ್ದಾರೆ.
ಮಂಗಳವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಿಸಿದರು. ಸಂಘದ ಪಾಲು ಬಂಡವಾಳ 11.64 ಲಕ್ಷ ರೂ.ಗೂ ಮೀರಿದ್ದು 2,943 ಲಕ್ಷ ರೂ. ಠೇವಣಿ ಹೊಂದಿದೆ. 3,157 ಲಕ್ಷ ರೂ. ದುಡಿಯುವ ಬಂಡವಾಳವಿದ್ದು, ಯಾವುದೇ ಬ್ಯಾಂಕಿನ ಸಾಲವಿಲ್ಲದೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಸಂಘದಲ್ಲಿ 2,577 ಲಕ್ಷ ರೂ. ಠೇವಣಿಯನ್ನು ಹೂಡಿದೆ. 536 ಲಕ್ಷ ರೂ. ಹೊರಬಾಕಿ ಸಾಲ ನೀಡಲಾಗಿದೆ ಎಂದು ತಿಳಿಸಿದರು.
https://chat.whatsapp.com/EbVKVnWB6rlHT1mWtsgbch
ಸಂಘವು ಪ್ರಸಕ್ತ ಸಾಲಿನ ಲೆಕ್ಕಪರಿಶೋಧನೆ ವರದಿಯಲ್ಲಿ ‘ಎ’ ವರ್ಗ ಪಡೆದಿದೆ. ಬಿ.ಮೂಡ ಗ್ರಾಮದ ಪೊನ್ನೋಡಿಯಲ್ಲಿ ಸ್ವಂತ ನಿವೇಶನದಲ್ಲಿ ಕೇಂದ್ರ ಕಚೇರಿ ಕಾರ್ಯಾಚರಿಸುತ್ತಿದೆ. ಇಲ್ಲಿ ಆರು ಗೋದಾಮುಗಳನ್ನು ಹೊಂದಿದ್ದು ಒಂದು ಗೋದಾಮು ಪಡಿತರ ವಿತರಣೆಗೆ ಉಪಯೋಗಿಸಲಾಗುತ್ತಿದ್ದು, ನಾಲ್ಕು ಗೋದಾಮುಗಳನ್ನು ಬಾಡಿಗೆಗೆ ನೀಡಲಾಗಿದೆ. ಬಿ.ಸಿ.ರೋಡು ಮತ್ತು ತುಂಬೆಯಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ್ದು, ಇದನ್ನು ಬಾಡಿಗೆಗೆ ನೀಡಲಾಗಿದೆ. ಫರಂಗಿಪೇಟೆ ಶಾಖೆಯಲ್ಲಿ ವಿವಿಧ ಪಡಿತರ ವ್ಯವಸ್ಥೆ, ಸಾಲ ಸೌಲಭ್ಯ ಹಾಗೂ ಇ-ಸ್ಟ್ಯಾಂಪಿಂಗ್ ವ್ಯವಹಾರ ನಡೆಸಲಾಗುತ್ತಿದ್ದು ಈ ಶಾಖೆಯಲ್ಲಿಯೂ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಣಾ ವ್ಯವಸ್ಥೆ ಹೊಂದಿದೆ. ಎಲ್ಲಾ ಶಾಖೆಗಳು ಗಣಕೀಕೃತವಾಗಿದ್ದು, ಸಂಘವು ಸದಸ್ಯರ, ಸಿಬ್ಬಂದಿಗಳ ಸಹಕಾರದಿಂದ ಯಶಸ್ಸಿನತ್ತ ಮುನ್ನಡೆಯುತ್ತಿದೆ ಎಂದು ರವೀಂದ್ರ ಕಂಬಳಿ ಹೇಳಿದರು.

ಸಂಘದ ಉಪಾಧ್ಯಕ್ಷೆ ಉಪಾಧ್ಯಕ್ಷೆ ಶಶಿಕಲಾ ಉಡುಪ, ನಿರ್ದೇಶಕರಾದ ವೆಂಕಟ್ರಾಯ ಪ್ರಭು, ಬಿ.ಟಿ.ನಾರಾಯಣ ಭಟ್, ಜ್ಞಾನೇಶ್ವರ ಪ್ರಭು, ಪದ್ಮನಾಭ ಕಿದೆಬೆಟ್ಟು, ರಾಯಿ ಸುಂದರ ಭಂಡಾರಿ, ಮನೋರಾಜ್ ಎ.. ಪೂವಪ್ಪ, ರಾಮ ನಾಯ್, ರತ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಣೆಮಂಗಳೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ತ್ರಿತ್ತಾಯ ಮಹಾಸಭೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಧರ್ಮಪಾಲ ಭಂಡಾರಿ ಗತವರ್ಷದ ವರದಿ ವಾಚಿಸಿದರು. ನಿರ್ದೇಶಕ ಪೊಳಲಿ ವೆಂಕಟೇಶ್ ನಾವಡ ವಂದಿಸಿದರು.
ಬಂಟ್ವಾಳ ತಾಲೂಕು ಕೃಷಿ ಉತ್ಪನ್ನಸಹಕಾರಿ ಮಾರಾಟ ಸಂಘದ ಬಂಟ್ವಾಳ ಶಾಖೆಯಲ್ಲಿ ರೈತರ ಅನುಕೂಲಕ್ಕೆ ಕೃಷಿ ಉಪಕರಣ, ಕ್ರಿಮಿನಾಶಕ, ಇನ್ನಿತರ ಸಾಮಗ್ರಿಗಳ ಮಾರಾಟದ ವ್ಯವಸ್ಥೆ ಹೊಂದಿದೆ. ಅಲ್ಲದೆ ಬ್ಯಾಂಕಿಂಗ್ ವ್ಯವಹಾರ, ನ್ಯಾಯಬೆಲೆ ಅಂಗಡಿ ಮೂಲಕ ಜನರಿಗೆ ಪಡಿತರ ವಿತರಣೆ ವ್ಯವಸ್ಥೆಯೂ ಇದೆ.
ಕೆ.ರವೀಂದ್ರ ಕಂಬಳಿ
ಅಧ್ಯಕ್ಷರು, ಬಂಟ್ವಾಳ ತಾಲೂಕು ಕೃಷಿ ಉತ್ಪನ್ನಸಹಕಾರಿ ಮಾರಾಟ ಸಂಘ
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com








