ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಕ್ಷಿಕೆರೆ ಶಾಖೆಯ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಗ್ರಾಹಕರ ಸಭೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಪಕ್ಷಿಕೆರೆ ಶಾಖೆಯಲ್ಲಿ ಜರುಗಿತು.
ಸಂಘದ ಸದಸ್ಯರಾದ ಸುಧಾಕರ್ ರಾವ್, ಯೋಗೀಶ್ ಶೆಟ್ಟಿ, ಕುಶಾಲ ಎಸ್.ಕುಕ್ಯಾನ್, ಶಿವಪ್ಪ ಶೆಟ್ಟಿ, ಪೂರ್ಣಿಮಾ ಹಾಗೂ ಸಾರಿಕಾ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಸುಧಾಕರ್ ರಾವ್ ಮಾತನಾಡಿ ಪಕ್ಷಿಕೆರೆಯಲ್ಲಿ ಶಾಖೆ ತೆರೆದು ಬ್ಯಾಂಕಿಂಗ್, ವಿಮೆ, ಆರೋಗ್ಯ ಕಾರ್ಡ್ ಈ ಎಲ್ಲಾ ವ್ಯವಸ್ಥೆ ಒಂದೇ ಸೂರಿನಲ್ಲಿ ಕಲ್ಪಿಸಿದಕ್ಕೆ ಸಂಘಕ್ಕೆ ಧನ್ಯವಾದ ಸಲ್ಲಿಸಿ, ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಹೊಂದಲಿ ಎಂದು ಶುಭ ಹಾರೈಸಿದರು.
https://chat.whatsapp.com/EbVKVnWB6rlHT1mWtsgbch
ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ “ಸಂಸ್ಥೆಯು 13 ವರ್ಷಗಳಲ್ಲಿ33 ಶಾಖೆಗಳನ್ನುತೆರೆದು, ರೂ. 2,000 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಲು ಗ್ರಾಹಕರೇ ಕಾರಣ. ಸದಸ್ಯರ ಸಹಕಾರದಿಂದ ನಮ್ಮ ಸಂಸ್ಥೆ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ನಮ್ಮ ಸಂಸ್ಥೆಯು ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜೊತೆಗೆ ಸಂಘದ ಸದಸ್ಯರ ಮಕ್ಕಳಿಗೆ ಉತ್ತಮ ಅಂಕ ಬಂದಾಗ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುತ್ತಾ ಬಂದಿದೆ. ಸಂಸ್ಥೆಯು 85ಕ್ಕೂ ಮಿಕ್ಕಿ ಆರೋಗ್ಯ ಶಿಬಿರಗಳನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದೆ. ಪಕ್ಷಿಕೆರೆ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ 1,000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ.10.50 ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂಗೆ ಗರಿಷ್ಟ ಮೌಲ್ಯ ರೂ. 8,000ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುತ್ತಿದೆ. ನಮ್ಮ ಎಲ್ಲಾ ಶಾಖೆಗಳಲ್ಲಿ ನೆಫ್ಟ್, ಆರ್ಟಿಜಿಎಸ್ ಸೇವೆಯು ವ್ಯವಹಾರದ ಸಮಯದಲ್ಲಿ ಲಭ್ಯವಿದ್ದು, ಅದೇ ರೀತಿ ವಿಮಾ ಪಾಲಿಸಿಗಳಾದ ಎಲ್ಐಸಿ, ಕೇರ್, ಇಫ್ಕೋಟೋಕಿಯ, ಜನರಲ್ ಇನ್ಸುರೆನ್ಸ್ ಕಂಪೆನಿ ಮುಂತಾದ ಕಂಪೆನಿಗಳ ವಿಮಾ ಸೌಲಭ್ಯಗಳು ಲಬ್ಯವಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದು ವಿನಂತಿಸಿದರು.
ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ರಮಾನಾಥ ಸನಿಲ್, ಬಿ.ಪಿ ದಿವಾಕರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಪಕ್ಷಿಕೆರೆ ಶಾಖೆಯ ಸಿಬ್ಬಂದಿ ಅಕ್ಷತಾ ಸ್ವಾಗತಿಸಿ, ನಿಖಿತಾ ವಂದಿಸಿದರು. ಶಾಖಾಧಿಕಾರಿ ರಮ್ಯ ಕಾರ್ಯಕ್ರಮ ನಿರೂಪಿಸಿದರು.









