ಕರ್ನಾಟಕದಲ್ಲಿ ಮೊದಲ ಪ್ರಯೋಗ ಯಶಸ್ವಿ
ನವದೆಹಲಿ: ಆಧುನಿಕ ಕಾಲಕ್ಕೆ ತಕ್ಕಂತೆ ಹೊಸ ಹೊಸ ಸೇವೆಗಳ ಮೂಲಕ ಗ್ರಾಹಕಸ್ನೇಹಿಯಾಗಿ ಹೊರಹೊಮ್ಮುತ್ತಿರುವ ಅಂಚೆ ಕಚೇರಿಗಳು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಡಿಜಿಟಲ್ ಸ್ಪರ್ಶ ಕಂಡುಕೊಳ್ಳುತ್ತಿವೆ. ಅಂಚೆ ಕಚೇರಿಗಳಲ್ಲೂ ಮುಂದಿನ ದಿನಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಜಾರಿಗೆ ಬರಲಿದೆ.
https://chat.whatsapp.com/EbVKVnWB6rlHT1mWtsgbch
ಸದ್ಯ ಅಂಚೆ ಕಚೇರಿಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಜಾರಿಯಲ್ಲಿಲ್ಲ. ನಗದು ವಹಿವಾಟು ಮಾತ್ರವೇ ನಡೆಯುತ್ತಿರುವುದರಿಂದ ಬಹುತೇಕ ಅಂಚೆ ಕಚೇರಿಗಳಲ್ಲಿ ಕೌಂಟರ್ಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಪ್ರತಿನಿತ್ಯ ಚಿಲ್ಲರೆ ಸಮಸ್ಯೆಯೂ ಸಾಮಾನ್ಯವಾಗಿದೆ. ಇವುಗಳಿಂದ ಹೊರಬರಲು ಅಂಚೆ ಇಲಾಖೆ ಮಾಹಿತಿ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿವೆ. ನಿತ್ಯ ಲಕ್ಷಾಂತರ ಜನ ಅಂಚೆ ಕಚೇರಿಗಳಿಗೆ ಭೇಟಿ ನೀಡುತ್ತಿದ್ದು ಗ್ರಾಮೀಣ ಭಾಗಗಳಲ್ಲಿ ವಿಶೇಷವಾಗಿ ಮಹಿಳೆಯರು ಉಳಿತಾಯ ಖಾತೆಗಳಿಗಾಗಿ ಅಂಚೆ ಕಚೇರಿಗಳನ್ನೇ ಅವಲಂಬಿಸಿದ್ದಾರೆ.




ಅಂಚೆ ಕಚೇರಿಗಳಲ್ಲಿ ವರ್ಷದ ಹಿಂದೆ ಪ್ರಾಯೋಗಿಕವಾಗಿ ಡಿಜಿಟಲ್ ಪಾವತಿ ವ್ಯವಸ್ಥೆ ಆರಂಭಿಸಲಾಗಿತ್ತಾದರೂ, ನೆಟ್ವರ್ಕ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವೈಫಲ್ಯ ಕಂಡಿದ್ದರಿಂದ ಆ ಸೇವೆಯನ್ನು ಹಿಂದೆ ಪಡೆಯಲಾಗಿತ್ತು. ಅದಾದ ಬಳಿಕ ಪ್ರತಿಯೊಂದು ಅಂಚೆ ಕಚೇರಿಗೂ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಡೈನಾಮಿಕ್ ಕ್ಯೂಆರ್ ಕೋಡ್ ಮೂಲಕ ವ್ಯವಹಾರಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಇನ್ನು ಎರಡು ತಿಂಗಳ ಒಳಗಾಗಿ ಡಿಜಿಟಲ್ ಪಾವತಿ ಸೌಲಭ್ಯ ಎಲ್ಲೆಡೆಯೂ ಸಿಗಲಿದೆ. ಹಿಂದಿನ ತಾಂತ್ರಿಕ ಸಮಸ್ಯೆಗಳು ಬರದಂತೆ ಈಗ ಹೆಚ್ಚಿನ ತಾಂತ್ರಿಕ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಅಂಚೆ ಇಲಾಖೆಯಲ್ಲಿನ ಹಣಕಾಸು ಸೇವೆಗಳು ಮಾತ್ರವಲ್ಲದೆ ಸರಕು ಸಾಗಣೆ ಸೇವೆಗೂ ಡಿಜಿಟಲೀಕರಣದಿಂದ ಹೊಸ ಸ್ವರೂಪ ಸಿಗಲಿದೆ. ತ್ವರಿತ ಅಂಚೆ (ಸ್ಪೀಡ್ಪೋಸ್ಟ್) ಮತ್ತು ನೋಂದಾಯಿತ ಅಂಚೆ (ರಿಜಿಸ್ಟರ್ಡ್ಪೋಸ್ಟ್), ಸರಕು ಸಾಗಣೆ (ಪಾರ್ಸೆಲ್ಸೇವೆ) ಮೊದಲಾದ ಸೇವೆಗಳು ವೇಗ ಪಡೆಯಲಿವೆ.
ಕರ್ನಾಟಕದಲ್ಲಿ ಮೊದಲ ಪ್ರಯೋಗ
ಐಟಿ 2.0 ಅಡಿಯಲ್ಲಿ ಹೊಸ ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಕರ್ನಾಟಕದಲ್ಲಿ ಜಾರಿಗೊಳಿಸಲಾಯಿತು. ಮೈಸೂರು ಮುಖ್ಯ ಅಂಚೆ ಕಚೇರಿ, ಬಾಗಲಕೋಟೆ ಮುಖ್ಯ ಕಚೇರಿ ಹಾಗೂ ಅವುಗಳ ಅಡಿಯಲ್ಲಿ ಬರುವ ಅಂಚೆ ಕಚೇರಿಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಮೇಲ್ ಮತ್ತು ಪಾರ್ಸೆಲ್ ಬುಕಿಂಗ್ ಸೇವೆಗಳನ್ನು ನೀಡಲಾಗುತ್ತಿದೆ. ಇಲ್ಲಿ ಯಶಸ್ವಿಯಾದ ಬಳಿಕ ದೇಶಾದ್ಯಂತ ಇದನ್ನು ಜಾರಿಗೊಳಿಸಲಾಗುತ್ತಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

