ನಿಮ್ಮ ಕಾರ್ಯಕ್ಷೇತ್ರದಲ್ಲಿ ನೀವು ಗೆದ್ದಾಗ ಮಾತ್ರ ಯಶಸ್ಸು: ವಲೇರಿಯನ್ ಡಿಸೋಜ
ಮಂಗಳೂರು: ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ (ಎಂ.ಸಿ.ಸಿ.) ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಶನಿವಾರ ಬ್ಯಾಂಕಿನ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಮೆಮೊರಿಯಲ್ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂಗಳೂರು ಧರ್ಮಪ್ರಾಂತ್ಯದ ರೊಸಾರಿಯೊ ಕೆಥೆಡ್ರೆಲ್ ಚರ್ಚಿನ ರೆಕ್ಟರ್ ಹಾಗೂ ಪ್ರಧಾನ ಧರ್ಮಗುರು ವಲೇರಿಯನ್ ಡಿಸೋಜ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ಯಾಂಕಿನ ಇತ್ತೀಚಿಗಿನ ಬೆಳವಣಿಗೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ, ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿ, ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಗೆದ್ದಾಗ ಮಾತ್ರ ಯಶಸ್ಸನ್ನು ಪಡೆಯಬಹುದು” ಎಂದು ಹೇಳಿದರು.
https://chat.whatsapp.com/EbVKVnWB6rlHT1mWtsgbch
ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷೀಯ ಭಾಷಣದಲ್ಲಿ ಬ್ಯಾಂಕನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಿಬ್ಬಂದಿಯ ಅಚಲ ಪ್ರಯತ್ನಗಳನ್ನು ಶ್ಲಾಘಿಸಿ, ಪ್ರಶಸ್ತಿ ಗಳಿಸಿದ ಶಾಖೆಯ ವ್ಯವಸ್ಥಾಪಕ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿ, ಮುಂದಿನ ವರ್ಷದಲ್ಲಿ ಯುವ ಸಿಬ್ಬಂದಿಗಳು ಮುಂದೆ ಬಂದು ತಮಗೆ ನೀಡಿದ ಗುರಿ ತಲುಪಲು ಶ್ರಮ ವಹಿಸಿ ಶಾಖೆಗಳಿಗೆ ನೀಡಿದ ಗುರಿ ತಲುಪಲು ಕಾರಣಕರ್ತರಾಗಬೇಕು ಎಂದರು. ಎಲ್ಲಾ ಸಿಬ್ಬಂದಿಗಳು ವೃತ್ತಿಪರ ಮತ್ತು ಗ್ರಾಹಕ-ಕೇಂದ್ರಿತ ವಿಧಾನವನ್ನು ರೂಡಿಸಿಕೊಳ್ಳಬೇಕು, ಸಮಗ್ರತೆಯನ್ನು ಎತ್ತಿಹಿಡಿಯಬೇಕು ಮತ್ತು ಬ್ಯಾಂಕಿನ ಅಭಿವೃದ್ಧಿಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.


ಕೆನರಾ ಬ್ಯಾಂಕಿನ ಮಾಜಿ ಜನರಲ್ ಮ್ಯಾನೇಜರ್ ಬಾಲಚಂದ್ರ ರಾವ್, ಮಾನವ ಸಂಪನ್ಮೂಲ ಮತ್ತು ವೃತ್ತಿಪರತೆಯ ಕುರಿತು ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೈದ್ಧಾಂತಿಕ ಜ್ಞಾನದಿಂದ ಯಶಸ್ಸು ಪಡೆಯಲು ಸಾಧ್ಯವಿಲ್ಲ, ಯಶಸ್ಸಿನ ಗುಟ್ಟು, ಪ್ರಾಯೋಗಿಕ ಅನುಭವ, ಸಮನ್ವಯತೆ ಮತ್ತು ಒಂದು ತಂಡವಾಗಿ ಮಾಡುವ ಕೆಲಸ ಎಂದು ಒತ್ತಿ ಹೇಳಿದರು. ಸಕಾರಾತ್ಮಕ ಮನೋಭಾವ ಕಾಪಾಡಿಕೊಳ್ಳುವ ಮತ್ತು ನಿರಂತರ ಸುಧಾರಣೆಗಾಗಿ ಗುಣಮಟ್ಟ ರೂಪಿಸುವ ಮಹತ್ವವನ್ನು ಎತ್ತಿ ತೋರಿಸಿದರು. ಬ್ಯಾಂಕಿನ ಸಲಹೆಗಾರ ಎಸ್.ಎಚ್. ವಿಶ್ವೇಶ್ವರಯ್ಯ ಇವರು ಬ್ಯಾಂಕಿನ 2024-25ನೇ ಸಾಲಿನ ಕಾರ್ಯಕ್ಷಮತೆಯ ವಿಮರ್ಶೆ ನಡೆಸಿ, 2025-26ನೇ ಸಾಲಿನಲ್ಲಿ ಎಲ್ಲಾ ಸಿಬ್ಬಂದಿಗಳು ವೈಯಕ್ತಿಕ ಹಾಗೂ ಶಾಖೆಯ ಗುರಿ ಮುಟ್ಟಲು ಶ್ರಮಿಸಬೇಕೆಂದು ಕರೆ ಕೊಟ್ಟರು. ಗುರಿ ಸಾಧಿಸಿದ ಮತ್ತು ಗುರಿ ಸಾಧಿಸಲು ಶ್ರಮ ವಹಿಸಿದ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು.

ಎನ್ಐಟಿಕೆ ಸುರತ್ಕಲ್ನ ಮಾಜಿ ಪ್ರಾಧ್ಯಾಪಕ ಮತ್ತು ಡೀನ್ ಡಾ| ಅಲೋಶಿಯಸ್ ಸಿಕ್ವೇರ ಮತ್ತು ಪದುವಾ ಕಾಲೇಜು ಪ್ರಾಂಶುಪಾಲ ಅರುಣ್ ಲೋಬೊ ಮುಖ್ಯ ಅತಿಥಿಗಳಾಗಿದ್ದರು. ಎಂಸಿಸಿ ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ಜನರಲ್ ಮ್ಯಾನೇಜರ್ ಸುನೀಲ್ ಮಿನೇಜಸ್ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ವೇದಿಕೆಯಲ್ಲಿದ್ದರು.
೩೦ ವರ್ಷಗಳ ಸೇವೆಯ ನಂತರ ನಿವೃತ್ತರಾದ ಬ್ಯಾಂಕಿನ ಸಿಬ್ಬಂದಿ ರಾಬರ್ಟ್ ಫೆರ್ನಾಂಡಿಸ್ ಅವರನ್ನು ಕುಟುಂಬ ಸಮೇತ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶೈಕ್ಷಣಿಕ ಮತ್ತು ಪಠ್ಯೇತರ ಕ್ಷೇತ್ರದಲ್ಲಿ ಸಾಧನೆಗೈದ ಸಿಬ್ಬಂದಿ ಮತ್ತು ನಿರ್ದೇಶಕರ ಮಕ್ಕಳನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ವಿವಾಹವಾದ ಸಿಬ್ಬಂದಿ ಸದಸ್ಯರನ್ನು ಸನ್ಮಾನಿಸಲಾಯಿತು. ವೃತ್ತಿಪರ ನಿರ್ದೇಶಕ ಸುಶಾಂತ್ ಸಲ್ಡಾನಾ ಅವರನ್ನು ಪತ್ನಿಯೊಂದಿಗೆ ಸನ್ಮಾನಿಸಲಾಯಿತು. ಸುನೀಲ್ ಮಿನೇಜಸ್ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಿದರು, ವೈಯಕ್ತಿಕ ಕಾರ್ಯಕ್ಷಮತೆ, ಸಾಮಾಜಿಕ ಮಾಧ್ಯಮ ಪ್ರಚಾರ, ಫೈವ್ಸ್ಟಾರ್ ರೇಟಿಂಗ್ ಪಡೆದ ಶಾಖೆ (ಗೂಗಲ್), ಸಾಮಾಜಿಕ ಮಾಧ್ಯಮ ಗುರಿ ಸಾಧನೆ, ಮೈಲಿಗಲ್ಲು ಸಾಧನೆ ಪ್ರಶಸ್ತಿ (ಒಂದು ವರ್ಷ ಪೂರ್ಣಗೊಳಿಸಿದ ಶಾಖೆಗೆ), 2024-25ನೇ ವಿತ್ತೀಯ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದ ಶಾಖೆ ಮತ್ತು 2024-25ನೇ ವಿತ್ತೀಯ ವರ್ಷದಲ್ಲಿ ಅತ್ಯಧಿಕ ವಹಿವಾಟು ಸಾಧಿಸಿದ ಶಾಖೆಗಳಿಗೆ ಪ್ರಶಸ್ತಿ ನೀಡಲಾಯಿತು.

ಗೂಗಲ್ನಲ್ಲಿ ಫೈವ್ಸ್ಟಾರ್ ರೇಟಿಂಗ್ ಪಡೆದ ಶಾಖೆಗಳಾದ ಕುಲಶೇಖರ, ಮಾರ್ಗನ್ಸ್ಗೇಟ್, ಮೂಡುಬಿದಿರೆ, ಶಿರ್ವ ಮತ್ತು ಉಳ್ಳಾಲ ಇವರನ್ನು ಸನ್ಮಾನಿಸಲಾಯಿತು. ಬೆಳ್ತಂಗಡಿ, ಬಜ್ಪೆ, ಕುಲಶೇಖರ್ ಮತ್ತು ಮಾರ್ಗನ್ಸ್ಗೇಟ್ ಶಾಖೆಗಳು ಸಾಮಾಜಿಕ ಮಾಧ್ಯಮ ಗುರಿ ಸಾಧನೆ ಪ್ರಶಸ್ತಿಯನ್ನು ಪಡೆದುಕೊಂಡವು. ಶಾಖೆಯ ಸ್ಥಾಪನೆಯ ಒಂದು ವರ್ಷದಲ್ಲಿ ಮೈಲಿಗಲ್ಲು ಸಾಧನೆ ಪ್ರಶಸ್ತಿಯನ್ನು ಬ್ರಹ್ಮಾವರ ಶಾಖೆ ಪಡೆದುಕೊಂಡಿತು. ಬಜ್ಪೆ ಶಾಖೆ ಅತ್ಯುತ್ತಮ ವ್ಯವಹಾರ ದಾಖಲಿಸಿದ ಶಾಖೆ ಪ್ರಶಸ್ತಿಯನ್ನು ಪಡೆದುಕೊಂಡಿತು. 2024-25ನೇ ವಿತ್ತೀಯ ವರ್ಷದಲ್ಲಿ ಅತಿ ಹೆಚ್ಚು ವಹಿವಾಟು ನಡೆಸಿದ ಶಾಖೆಗಾಗಿ ಕುಲಶೇಖರ ಶಾಖೆ ಪ್ರಶಸ್ತಿ ಪಡೆದುಕೊಂಡಿತು. ಈ ಎಲ್ಲಾ ಶಾಖೆಗಳ ಶಾಖಾ ವ್ಯವಸ್ಥಾಪಕರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಎಂಸಿಸಿ ಬ್ಯಾಂಕಿನಲ್ಲಿನ ಕುಟುಂಬದಂತಹ ವಾತಾವರಣವನ್ನು ಫಾದರ್ ಅರುಣ್ ಲೋಬೊ ಶ್ಲಾಘಿಸಿದರು ಮತ್ತು ಸಿಬ್ಬಂದಿಗಳು ಕೆಲಸದ ಸ್ಥಳದಲ್ಲಿ ಹೊಳೆಯುವ ನಕ್ಷತ್ರ ಮತ್ತು ಮನೆಯಲ್ಲಿ ದೀಪವಾಗಿರಲು ಪ್ರೋತ್ಸಾಹಿಸಿದರು, ಸಹಾನುಭೂತಿ ಮತ್ತು ಸಕಾರಾತ್ಮಕತೆಯ ಮಹತ್ವ ಒತ್ತಿ ಹೇಳಿದರು.
ಉಪಾಧ್ಯಕ್ಷ ಜೂಡ್ ಜೆರಾಲ್ಡ್ ಡಿಸಿಲ್ವಾ, ನಿರ್ದೇಶಕರಾದ ಜೋಸೆಫ್ ಅನಿಲ್ ಪತ್ರಾವೊ, ಎಲ್ರಾಯ್ ಕ್ರಾಸ್ಟೊ, ಆಂಡ್ರ್ಯೂ ಡಿಸೋಜ, ಡೇವಿಡ್ ಡಿಸೋಜ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಮೆಲ್ವಿನ್ ವಾಸ್, ಡಾ.ಫ್ರೀಡಾ ಎಫ್.ಡಿಸೋಜ, ಐರಿನ್ ರೆಬೆಲ್ಲೊ, ಡಾ.ಜೆರಾಲ್ಡ್ ಪಿಂಟೊ, ವಿನ್ಸೆಂಟ್ ಲಸ್ರಾದೊ, ವೃತ್ತಿಪರ ನಿರ್ದೇಶಕರಾದ ಸಿ.ಜಿ.ಪಿಂಟೋ, ಸುಶಾಂತ್ ಸಲ್ಡಾನಾ, ಆಡಳಿತ ಮಂಡಳಿ ಸದಸ್ಯರಾದ ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರೂಜ್ ಮತ್ತು ಆಲ್ವಿನ್ ಮೊಂತೇರೊ ಉಪಸ್ಥಿತರಿದ್ದರು. ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಎಫ್. ಮಿನೇಜಸ್ ವಂದಿಸಿದರು ಮತ್ತು ಹಿರಿಯ ವ್ಯವಸ್ಥಾಪಕ ಡೆರಿಲ್ ಲಸ್ರಾದೊ ಕಾರ್ಯಕ್ರಮ ನಿರೂಪಿಸಿದರು.

