ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರತಿಪಾದನೆ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಹಕಾರಿ ಯೂನಿಯನ್, ಸಹಕಾರ ಇಲಾಖೆಯಿಂದ ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಸ್ವಚ್ಛತಾ ಸೇ ಸಹಕಾರ್ ಕಾರ್ಯಕ್ರಮ
ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ಸಹಕಾರ ಇಲಾಖೆ ದ.ಕ. ಜಿಲ್ಲೆ ಹಾಗೂ ಸಂತ ಪೀಲೋಮಿನಾ ಕಾಲೇಜು(ಸ್ವಾಯತ್ತ) ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ-2025 ಪ್ರಯುಕ್ತ ಸ್ವಚ್ಛತಾ ಸೇ ಸಹಕಾರ್ ಕಾರ್ಯಕ್ರಮ ಬುಧವಾರ ಸಂತ ಫಿಲೋಮಿನಾ ಕಾಲೇಜಿ(ಸ್ವಾಯತ್ತ)ನಲ್ಲಿ ನಡೆಯಿತು.
https://chat.whatsapp.com/EbVKVnWB6rlHT1mWtsgbch
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಗೊಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಸ್ವಚ್ಛ ಭಾರತ ನಿರ್ಮಾಣ ಮಾಡುವುದು ಈ ಕಾರ್ಯಕ್ರಮ ಸಂಘಟನೆಯ ಉದ್ದೇಶವಾಗಿದೆ. ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸುತ್ತವೆ ಎಂಬುದು ಈ ಕಾರ್ಯಕ್ರಮದ ಧ್ಯೇಯ. ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಂಗವಾಗಿ ಸ್ವಚ್ಛತಾ ಸಹಕಾರ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. ಕೃಷಿ, ಸಹಕಾರಿ ಮತ್ತು ಸಹಕಾರಿ ಪತ್ತಿನ ಸಂಘಗಳಿಂದ ಆರ್ಥಿಕತೆ ಬಲಗೊಳ್ಳುತ್ತಿದೆ. ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರಿ ಸಂಘಗಳು ಮಹತ್ತರ ಪಾತ್ರ ವಹಿಸುತ್ತವೆ. ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದಿಂದ ಬೆಳೆದು ಬಂದಿದ್ದು ರೈತರಿಗೆ ಅತ್ಯಂತ ಸಹಕಾರಿಯಾಗಿದೆ. ಮೊಳಹಳ್ಳಿ ಶಿವರಾಯರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಿಸಿರುವ ಈ ಸಹಕಾರಿ ವ್ಯವಸ್ಥೆ ಹಲವಾರು ಜನರ ಬದುಕಿಗೆ ಬೆಳಕಾಗಿದೆ. ಅಲ್ಲದೆ ಭಾರತದ ಭೂಪಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಗುರುತಿಸಲ್ಪಡುವಂತೆ ಬೆಳೆದು ನಿಂತಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಹೇಗೆ ಈ ವ್ಯವಸ್ಥೆಯ ಸಹಾಯ ಪಡೆದುಕೊಳ್ಳಬಹುದು ಎಂದು ತಿಳಿಸಿದ ಅವರು ಸಹಕಾರಿ ವ್ಯವಸ್ಥೆಯಿಂದ ಜೀವನ ರೂಪಿಸುವ ಅವಕಾಶಗಳನ್ನು ಉಪಯೋಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸ್ವಚ್ಛತಾ ಜಾಗೃತಿಯಿಂದ ಬದಲಾವಣೆ ಸಾಧ್ಯ
ವಿಷಯ ಮಂಡಿಸಿ ಮಾತನಾಡಿದ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ, ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಸ್.ಆರ್.ಹರೀಶ್ ಆಚಾರ್ಯ, ಸಹಕಾರಿ ಕ್ಷೇತ್ರ ಎಂಬುದು ಜಾತ್ಯತೀತ, ವರ್ಗಾತೀತ, ವರ್ಣಾತೀತ, ಸೀಮಾತೀತ ಮತ್ತು ಯಾವುದೇ ಪಕ್ಷ ರಾಜಕೀಯದಿಂದ ಬಹು ದೂರವಾಗಿರುವುದಾಗಿದೆ. ಸ್ವಚ್ಛತೆಯ ನಿಜವಾದ ರಾಯಭಾರಿ ಮಹಾತ್ಮ ಗಾಂಧಿಯವರು. ಸ್ವಚ್ಛತೆಗೆ ಅಮೇರಿಕಾ ಮಾಡೆಲ್ ದೇಶ ಆಗಿದೆ. ಸ್ವಚ್ಛತೆಯಲ್ಲಿ ಸ್ವಯಂ ಜಾಗೃತಿ ಬೇಕು. ನಮ್ಮ ಪರಿಸರ ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ. ಪ್ರತಿಯೊಬ್ಬ ನಾಗರಿಕರು ಈ ಜವಾಬ್ದಾರಿಯನ್ನು ಅರಿತರೆ ಸ್ವಚ್ಛತೆ ಸಾಧ್ಯ. ಯಾವುದೇ ಯೋಜನೆ ಜಾರಿ ಮಾಡುವಾಗ ನಾವು ಜಾಗೃತಿ ವಹಿಸಬೇಕು. ವ್ಯವಸ್ಥೆಗಳು ಸರಿಯಾಗಿ ಇರಲು ನಮ್ಮ ಜವಾಬ್ದಾರಿ ಕೂಡ ಇರಬೇಕು. ಪ್ರತಿಯೊಬ್ಬರೂ ವ್ಯವಸ್ಥೆಯ ಲೋಪಕ್ಕೆ ಪರಿಹಾರ ಕಂಡುಕೊಳ್ಳಬೇಕು. ಆಗ ಮಾತ್ರ ಪರಿಸರ ಜಾಗೃತಿ ಮತ್ತು ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಹಸಿ ತ್ಯಾಜ್ಯ ನಮ್ಮ ಮನೆಯ ಕೈತೋಟಕ್ಕೆ, ಕೃಷಿಗೆ ಉತ್ತಮವಾಗಿರುವ ಗೊಬ್ಬರವಾಗಿದೆ ಎಂದರು.
ಜನರ ಆರ್ಥಿಕ ಬದುಕಿನ ಸಬಲೀಕರಣ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಮಾತನಾಡಿ ಹಿಂದಿನ ಕಾಲದಲ್ಲಿ ಲೇವಾದೇವಿ ವ್ಯವಸ್ಥೆಯ ಕಪಿಮುಷ್ಟಿಯಿಂದ ಸಾಮಾನ್ಯ ಜನರು ನಲುಗುತ್ತಿದ್ದರು. ಲೇವಾದೇವಿಯಿಂದ ಹೊರಬರಲು ಅಗತ್ಯದ ಹಣಕಾಸಿನ ನೆರವು ನೀಡುವ ಕಾರ್ಯಕ್ರಮ ಈ ಸಹಕಾರಿ ವ್ಯವಸ್ಥೆಯಿಂದ ಆರಂಭವಾಯಿತು. ನಾನು ನಿನಗಾಗಿ ನೀನು ನನಗಾಗಿ ನಾವು ಎಲ್ಲರಿಗಾಗಿ ಎಂಬ ನಂಬಿಕೆಯೊಂದಿಗೆ ಜನರ ಆರ್ಥಿಕ ಬದುಕನ್ನು ಸಬಲಗೊಳಿಸುವುದು ಸಹಕಾರಿಯ ಉದ್ದೇಶವಾಗಿದೆ. ಜನರ ಬದುಕಿನ ಸಹಾಯಕ್ಕೆ ಸಹಕಾರಿ ಬ್ಯಾಂಕುಗಳು ಬದ್ಧವಾಗಿವೆ ಎಂದರು.
ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ) ಪ್ರಾಂಶುಪಾಲ ರೆ.ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ ಕ್ರಮಬದ್ಧವಾದ ಪಾಠ ಪ್ರವಚನಗಳಿಗೆ ಹೊರತಾಗಿ ಜೀವನದಲ್ಲಿ ಕಲಿಯುವುದು ಬಹಳಷ್ಟು ಇದೆ. ಸ್ವಚ್ಛತೆ ಎಂದರೆ ಬೀದಿಬದಿಯ ಸ್ವಚ್ಛತೆ ಮಾತ್ರವಲ್ಲ ಸಮಾಜದ ಸ್ವಚ್ಛತೆಯೂ ಆಗಿದೆ. ಸಮಾಜದ ಸ್ವಚ್ಛತೆಗಿಂತ ನಮ್ಮ ಮನಸ್ಸಿನ ಸ್ವಚ್ಛತೆ ಆಗಬೇಕು. ಮನೋಮಾಲಿನ್ಯ ನಿವಾರಣೆ ಮಾಡಿದಾಗ ಸ್ವಚ್ಛತೆಯ ಅರಿವು ಉಂಟಾಗುತ್ತದೆ. ಈ ವಿಚಾರದ ಬಗ್ಗೆ ವಿದ್ಯಾರ್ಥಿಗಳು ಗಮನ ಹರಿಸಬೇಕಾದ ಸಮಯ ಬಂದಿದೆ. ದ.ಕ.ಜಿಲ್ಲೆ ಭಾರತ ದೇಶದಲ್ಲೇ ಗುರುತಿಸುವಂತಹ ಜಿಲ್ಲೆಯಾಗಿದೆ. ಆದರೆ ಇಲ್ಲಿನ ಜನ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬಿಟ್ಟು ಬದುಕುತ್ತಿದ್ದಾರೆ. ವಿದ್ಯಾರ್ಥಿಗಳು ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು. ಇದರಿಂದ ಮನಸ್ಸಿನ ಮಾಲಿನ್ಯ ನಿವಾರಣೆಯಾಗುತ್ತದೆ ಎಂದು ಹೇಳಿದರು.
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಮಂಜುನಾಥ ಎನ್.ಎಸ್., ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎನ್.ರಘು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸಂಜೀವ ಪೂಜಾರಿ, ಆದರ್ಶ ವಿವಿದೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ವಸಂತ ಜಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ತನ್ವಿ ರೈ ಮತ್ತು ಬಳಗ ಪ್ರಾರ್ಥಿಸಿ, ಪಿಜಿ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್ ಕೋ ಆರ್ಡಿನೇಟರ್ ಹರ್ಷಿತ್ ಕೆ. ಕಾರ್ಯಕ್ರಮ ನಿರೂಪಿಸಿದರು. ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಿಲ್ಪ ವಂದಿಸಿದರು. ಪಿ.ಜಿ. ಭೌತಶಾಸ್ತ್ರ ವಿಭಾಗದ ಕೋ-ಆರ್ಡಿನೇಟರ್ ವಿಪಿನ್ ನಾಯ್ಕ ಹಾಗೂ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ಸಹಕರಿಸಿದರು. ಕಾಲೇಜು ಪರಿಸರದಲ್ಲಿ ಸ್ವಚ್ಛತೆ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com