ಬೆಂಗಳೂರು: ಸಹಕಾರ ವಲಯದಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ರೂಪಿಸಿದ್ದ ಎರಡು ವಿಧೇಯಕಗಳಿಗೆ ಅಂಕಿತ ಹಾಕಲು ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಇನ್ನೂ ಒಪ್ಪಿಗೆ ಸೂಚಿಸಿಲ್ಲ. ಆ ಎರಡೂ ವಿಧೇಯಕಗಳನ್ನು ಅವರು ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಿದ್ದು ಪರಾಮರ್ಶೆ ನಡೆಸುವಂತೆ ಶಿಫಾರಸು ಮಾಡಿದ್ದಾರೆ.
https://chat.whatsapp.com/EbVKVnWB6rlHT1mWtsgbch
ರಾಜ್ಯ ಸರ್ಕಾರವು ಸಹಕಾರಿ ವಲಯದಲ್ಲಿ ಬದಲಾವಣೆ ತರಲು ರೂಪಿಸಿದ್ದ ವಿಧೇಯಕಗಳಿಗೆ ಸಹಿ ಹಾಕಲು ನಿರಾಕರಿಸಿರುವ ರಾಜ್ಯಪಾಲರು, ಸಹಕಾರ ಚುನಾವಣಾ ಪ್ರಾಧಿಕಾರ ರದ್ದುಪಡಿಸಿ, ಸರ್ಕಾರದ ನಾಮನಿರ್ದೇಶನ ಹೆಚ್ಚಿಸುವ ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕ್ರಮಗಳು ಸಹಕಾರಿ ತತ್ವಗಳಿಗೆ ವಿರುದ್ಧವಾಗಿದ್ದು, ಸ್ವಾಯತ್ತತೆಗೆ ಧಕ್ಕೆ ತರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಮಳೆಗಾಲದ ಅಧಿವೇಶನದಲ್ಲಿ ವಿಧಾನ ಮಂಡಲದಲ್ಲಿ ಅಂಗೀಕರಿಸಲಾಗಿದ್ದ ‘ಕರ್ನಾಟಕ ಸಹಕಾರ ಸೊಸೈಟಿಗಳ (ತಿದ್ದುಪಡಿ) ವಿಧೇಯಕ -2024’ ಹಾಗೂ ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ -2024’ ಅನ್ನು ರಾಷ್ಟ್ರಪತಿಗಳ ಪರಾಮರ್ಶೆಗೆ ಶಿಫಾರಸು ಮಾಡಿ ರಾಜ್ಯಪಾಲರು ಕೇಂದ್ರಕ್ಕೆ ರವಾನಿಸಿದ್ದಾರೆ.
ಸಹಕಾರ ಸಂಘಗಳ ಚುನಾವಣೆ ನಡೆಸುವ ಜವಾಬ್ದಾರಿ ಹೊತ್ತ ‘ಸಹಕಾರ ಚುನಾವಣಾ ಪ್ರಾಧಿಕಾರ’ವನ್ನು ರದ್ದು ಮಾಡಿ ಸಹಕಾರ ಸೊಸೈಟಿಗಳ ರಿಜಿಸ್ಟ್ರಾರ್ ಅಧೀನದಲ್ಲಿ ಸಹಕಾರ ಚುನಾವಣಾ ವಿಭಾಗ ಹೊಸದಾಗಿ ರಚನೆ ಮಾಡುವುದು, ಸಹಕಾರ ಸಂಘಗಳಲ್ಲಿ ಪ್ರಾತಿನಿಧ್ಯವಿಲ್ಲದ ಸಮುದಾಯಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಸರಕಾರದಿಂದ ನಾಮನಿರ್ದೇಶನ ಸಂಖ್ಯೆ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸುವುದು ಈ ಎರಡು ವಿಧೇಯಕಗಳ ಪ್ರಮುಖ ಉದ್ದೇಶವಾಗಿತ್ತು. ಆದರೆ ಸರಕಾರದ ಈ ಆಶಯದ ಬಗ್ಗೆಯೇ ರಾಜ್ಯಪಾಲರು ಆಕ್ಷೇಪ ಎತ್ತಿದ್ದಾರೆ. ಈ ಬಗ್ಗೆ ಹಲವು ತಿಂಗಳಿಂದ ಸರಕಾರ ಮತ್ತು ರಾಜಭವನದ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದೆ. ಈ ಕುರಿತು ಸರಕಾರ ನೀಡಿರುವ ಯಾವ ಸ್ಪಷ್ಟನೆಯನ್ನೂ ಒಪ್ಪದ ರಾಜ್ಯಪಾಲರು, ಅಂತಿಮವಾಗಿ ರಾಷ್ಟ್ರಪತಿಳಿಗೆ ರವಾನಿಸುವ ತಮ್ಮ ತೀರ್ಮಾನವನ್ನು ಅಧಿಕೃತವಾಗಿ ಸರಕಾರಕ್ಕೆ ತಿಳಿಸಿದ್ದಾರೆ.
ಸಹಿ ಹಾಕದಿರುವ ತಮ್ಮ ತೀರ್ಮಾನಕ್ಕೆ ರಾಜ್ಯಪಾಲರು ವಿವರಣೆಯನ್ನೂ ನೀಡಿದ್ದಾರೆ. ಪ್ರಮುಖವಾಗಿ ಸಹಕಾರ ಸಂಘಗಳ ಚುನಾವಣೆ ನಡೆಸಲು ಇರುವ ಸ್ವಾಯತ್ತ ಪ್ರಾಧಿಕಾರವನ್ನು ರದ್ದುಪಡಿಸಿ ಸರಕಾರದ ಅಧೀನದ ರಿಜಿಸ್ಟ್ರಾರ್ ಉಸ್ತುವಾರಿಯಲ್ಲಿ ವಿಭಾಗ ತೆರೆದರೆ ಸೊಸೈಟಿಗಳ ಚುನಾವಣಾ ಪ್ರಕ್ರಿಯೆ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಲ್ಲದೆ ಸಹಕಾರ ಸೊಸೈಟಿಗಳಲ್ಲಿ ಪರಿಶಿಷ್ಟರು, ಹಿಂದುಳಿದವರು ಹಾಗೂ ಮಹಿಳೆಯರಿಗೆ ಈಗಾಗಲೇ ಮೀಸಲು ಇದೆ. ಆದರೂ ಪ್ರಾತಿನಿಧ್ಯವಿಲ್ಲದ ಸಮುದಾಯಗಳಿಗೆ ಅವಕಾಶ ಕಲ್ಪಿಸಲು ಎಂದು ಹೇಳಿ ಸರಕಾರ ನಾಮನಿರ್ದೇಶನ ಮಾಡುವವರ ಸಂಖ್ಯೆ ಹೆಚ್ಚಳ ಮಾಡಲು ಕಾಯಿದೆಯಲ್ಲಿ ತಿದ್ದುಪಡಿ ತರುವುದು ಸಹಕಾರಿ ತತ್ವವನ್ನೇ ಬುಡಮೇಲು ಮಾಡಲಿದೆ. ನಾಮನಿರ್ದೇಶನ ಮಾಡಿ ಮತದಾನದ ಹಕ್ಕು ನೀಡುವುದರಿಂದ ಚುನಾಯಿತ ಸದಸ್ಯರ ಹಕ್ಕುಗಳಿಗೆ ಚ್ಯುತಿ ಆಗಲಿದ್ದು, ಸಹಕಾರಿ ಸಂಘಗಳ ಸ್ವಾಯತ್ತತೆಯನ್ನೇ ಕಸಿದುಕೊಳ್ಳಲಿದೆ. ಮುಖ್ಯವಾಗಿ ಆಡಳಿತಾರೂಢ ಪಕ್ಷವು ಹಿಂಬಾಗಿಲ ಪ್ರವೇಶದ ಮೂಲಕ ಸಹಕಾರ ಸಂಘಗಳನ್ನು ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ಕರ್ನಾಟಕ ಸಹಕಾರ ಸೊಸೈಟಿಗಳ ಕಾಯಿದೆ-1959 ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಕಾಯಿದೆ-1997 ಅನ್ನು ಬದಲಿಸುವ ಈ ವಿಧೇಯಕಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಪಾಲರ ಅಭಿಪ್ರಾಯಗಳು:
* ಸ್ವಾಯತ್ತ ಚುನಾವಣಾ ಪ್ರಾಧಿಕಾರವನ್ನು ರದ್ದು ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ
* ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಸರಕಾರದ ನಾಮನಿರ್ದೇಶನ ಸಂಖ್ಯೆ ಹೆಚ್ಚಳಕ್ಕೂ ಆಕ್ಷೇಪ
* ಈ ಮೇಲಿನ ಎರಡು ಅಂಶಗಳನ್ನು ಸೇರಿಸಿದರೆ ಸಹಕಾರಿ ತತ್ವದ ಮೂಲ ಆಶಯಕ್ಕೇ ಪೆಟ್ಟು ಎಂದು ಅಭಿಪ್ರಾಯ
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com